ಉತ್ತರ ಕನ್ನಡ/ ದಾಂಡೇಲಿ: ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮಹೇಶ ಜೋಶಿ ಅವರು ಹಣ ದುರುಪಯೋಗ ಹಾಗೂ ಕರ್ತವ್ಯಲೋಪವೆಸಗಿದ ಹಿನ್ನೆಲೆಯಲ್ಲಿ ಅವರ ಕಸಾಪ ಅಜೀವ ಸದಸ್ಯತ್ವವನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ. ಇದರಿಂದ ಅವರ ಅಧಿಕಾರಾವಧಿಯು ಮೊಟಕುಗೊಂಡಿದೆ ಸರ್ಕಾರ ಈ ಕೂಡಲೇ ಚುನಾವಣೆ ಘೋಷಣೆ ಮಾಡಿ ಪ್ರಾಮಾಣಿಕರ ಸಂಖ್ಯೆ ಅಸಂಖ್ಯಗೊಳಿಸಲು ಪ್ರಯತ್ನಿಸಬೇಕೆಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಡಿನ ಹಿರಿಯ ಕವಿ, ಸಾಹಿತಿ ಮಾಸ್ಕೇರಿ ನಾಯಕ ಅವರು ಮಾದ್ಯಮದ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಭ್ರಷ್ಟಾಚಾರದಿಂದ ಸಾಹಿತ್ಯ ಪರಿಷತ್ತು ತನ್ನ ಮೌಲ್ಯ ಕಳೆದುಕೊಂಡಿದೆ ಎನ್ನಬೇಕೆ ಎಂದು ಪ್ರಶ್ನಿಸಿರುವ ಅವರು, ಮೊದಲು ಸರ್ಕಾರ ಪರಿಷತ್ತಿನ ಮೌಲ್ಯ ಮರುಕಳಿಸುವತ್ತ ಗಮನ ಹರಿಸಬೇಕು. ಸದಸ್ಯರು ತಮ್ಮ ತಮ್ಮ ಹೆಸರಿಗಾಗಿ ಮನಸ್ಸಿಗೆ ಬಂದ ಕಾರ್ಯಕ್ರಮ ಮಾಡಿದರೆ ಪರಿಷತ್ತಿನ ಧ್ಯೇಯ ಧೋರಣೆ ಅರ್ಥ ಹೀನವಾಗುತ್ತದೆ. ತಿಳುವಳಿಕೆ ಇರುವ ಸದಸ್ಯರು, ಸಾಕಷ್ಟು ಮಹನೀಯರೂ ನಮ್ಮಲ್ಲಿದ್ದಾರೆ ಅವರುಗಳನ್ನೊಳಗೊಂಡ ಪರಿಷತ್ತು ವರ್ತಮಾನದ ಅಪೇಕ್ಷೆ ಆಗಿದೆ. ಹಣ ದುರುಪಯೋಗವಾಗುವುದನ್ನು ತಡೆಯಬೇಕಾದರೆ ಅಕಾಡೆಮಿಗಳ ವ್ಯಾಪ್ತಿಯಲ್ಲಿ ಮುಂದುವರಿಸಿದರೆ ಒಳಿತೇನೋ ಅನಿಸುತ್ತದೆ. ಈಗ ತುರ್ತಾಗಿ ಸರ್ಕಾರ ಪರಿಷತ್ತಿನ ಶ್ರೇಯಸ್ಸಿಗೆ ವಿಶೇಷ ಗಮನ ಹರಿಸಬೇಕು, ಚುನಾವಣೆ ಘೋಷಣೆ ಮಾಡಿ ಪ್ರಾಮಾಣಿಕ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಬಹುದಾಗಿದೆ. ಅಧ್ಯಕ್ಷರ ಅವಧಿ 5 ವರ್ಷದಿಂದ 3 ವರ್ಷಕ್ಕೆ ಇಳಿಸಿ ಉಪಕಾರ ಮಾಡಬೇಕಾಗಿದೆ ಪರಿಷತ್ತಿನಲ್ಲಿ ಕಾರ್ಯ ನಿರ್ವಹಿಸುವ ಸದಸ್ಯರು ಸಾಹಿತ್ಯ ಓದುವಲ್ಲಿ ಆಸಕ್ತರಾಗಬೇಕು. ರಾಜಕಾರಣ ಮಾಡಲು ಅಪ್ಪಟ ರಾಜಕಾರಣಿಗಳ ತಂಡವೇ ಇದೆ. ಸಾಹಿತ್ಯ ಪರಿಷತ್ತಿನಲ್ಲಿ ರಾಜಕೀಯ ಬೇಡ. ವೇದಿಕೆ ಮೇಲೆ ನಿಂತು ಮಾತನಾಡಿ ಮೂರ್ಖರಾಗುವುದಕ್ಕಿಂತ ಮೂಕರಾಗಿರುವವರೆ ಜಾಣರು. ಪರಿಷತ್ತು ಪರಿಶುದ್ಧ ಸಮಾಜಕ್ಕೆ ಪ್ರೇರಕವಾಗಬೇಕು. ಈ ಕುರಿತು ಸರಕಾರ ಕಣ್ಣು ಹಾಯಿಸಲಿ ಎಂದು ಹೇಳಿದ್ದಾರೆ.
ವರದಿ ತೇಜಸ್ ರಾವ್, ದಾಂಡೇಲಿ



















