ಶಿವಮೊಗ್ಗ: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋ ಕಾಸ್ಟ್ ಸಭಾಂಗಣದಲ್ಲಿ ಜೂನ್ 13ರಂದು ಬೆಳಗ್ಗೆ 10.30ಕ್ಕೆ “ ಭಾರತದಲ್ಲಿ ಕುಟುಂಬ ವ್ಯವಹಾರ ನಿರ್ವಹಣೆ ಸವಾಲುಗಳು ಮತ್ತು ಭವಿಷ್ಯ” ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿರ್ವಹಣೆಯೊಂದಿಗೆ ಆಯೋಜಿಸಿರುವ ಉಪನ್ಯಾಸ ಕಾರ್ಯಕ್ರಮವನ್ನು ಯುಕೆ ಅಂಡ್ ಕೋ ಸಂಸ್ಥಾಪಕ ಕೆ.ಉಲ್ಲಾಸ್ ಕಾಮತ್ ಉದ್ಘಾಟಿಸುವರು. ಟಿ ಆರ್ ಅಶ್ವಥ್ ನಾರಾಯಣ ಶೆಟ್ಟಿ ಅಭಿನಂದನಾ ಸಮಿತಿ ಗೌರವ ಅಧ್ಯಕ್ಷ ಎಸ್.ರುದ್ರೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಉಪಸ್ಥಿತರಿರುವರು.
ಉದ್ಯಮಿ ಟಿ ಆರ್ ಅಶ್ವಥ್ ನಾರಾಯಣ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಭೂಪಾಳಂ ಶಶಿಧರ್, ಎ.ಎಂ.ಸುರೇಶ್ ಕಾರ್ಯಕ್ರಮದಲ್ಲಿ ಹಾಜರಿರುವರು.
ಕೆ.ಉಲ್ಲಾಸ್ ಕಾಮತ್ ಅವರು ಯುಕೆ & ಕೋ ಸಂಸ್ಥಾಪಕರಾಗಿದ್ದು, ಕುಟುಂಬ ನಿರ್ವಹಣೆಯ ಉದ್ಯಮ ಬೆಳೆಯಲು ಮತ್ತು ಯಶಸ್ವಿಯಾಗಲು ಸಬಲೀಕರಣಗೊಳಿಸುವ ಕುರಿತು ಮಾರ್ಗದರ್ಶನ ನೀಡುವರು.
ವಿಶೇಷ ಉಪನ್ಯಾಸದ ಭಾಗವಾಗಲು ಮೊಬೈಲ್ ನಂಬರ್ 7019663300 ಸಂಪರ್ಕಿಸಬಹುದಾಗಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ತಿಳಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.




















