ಬಳ್ಳಾರಿ / ಕಂಪ್ಲಿ : ಯೋಗ ಪ್ರಚಾರ ವಾರ್ಷಿಕೋತ್ಸವವಾಗದೇ ದೈನಂದಿನ ನಿತ್ಯೋತ್ಸವವಾದಾಗ ಮಾತ್ರ ಉತ್ತಮ ಆರೋಗ್ಯ, ಸುಂದರ ಸಮಾಜ ನಿರ್ಮಾಣ ಸಾಧ್ಯವೆಂದು ಯೋಗ ಮತ್ತು ಅಧ್ಯಾತ್ಮಿಕ ಆರಾಧಕರಾದ ಕಮ್ಮರಚೇಡ್ ಮತ್ತು ಬಳ್ಳಾರಿ ಕಲ್ಯಾಣಸ್ವಾಮಿ ಸಂಸ್ಥಾನಮಠದ ಪೀಠಾಧಿಪತಿ ಕಲ್ಯಾಣಸ್ವಾಮಿ ತಿಳಿಸಿದರು.
ಅವರು ಪಟ್ಟಣದ ಸಣಾಪುರ ರಸ್ತೆಯಲ್ಲಿರುವ ಕಂಪ್ಲಿ ತಾಲ್ಲೂಕು ವೀರಶೈವ ಸಂಘದ ಶೈಕ್ಷಣಿಕ ಸಂಸ್ಥೆಗಳ ಆವರಣದಲ್ಲಿ ಕಂಪ್ಲಿ ಪತಂಜಲಿ ಯೋಗಾ ಸಮಿತಿ ಭಾನುವಾರ ಏರ್ಪಡಿಸಿದ್ದ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ಯೋಗ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಆಧುನಿಕ ಜಗತ್ತಿನ ಒತ್ತಡದ ಜೀವನದಲ್ಲಿ ಕುಟ್ಟುವ, ರುಬ್ಬುವ, ಬೀಸುವ, ಮತ್ತು ದೈನಂದಿನ ಪ್ರಕೃತಿದತ್ತ ಕೆಲಸ ಕಾರ್ಯಗಳಿಂದ ವಿಮುಖರಾಗಿ ಪ್ರತಿಯೊಂದನ್ನು ಯಂತ್ರಗಳಿಂದ ಮಾಡಿಸುತ್ತಿರುವ ಕಾರಣ ಅನೇಕ ರೋಗರುಜಿನಗಳಿಗೆ ಈಡಾಗಬೇಕಿದೆ. ಕಲುಷಿತ ಮನಸ್ಸಿನಿಂದ ನಿರ್ಮಲ ಮನಸ್ಸನ್ನಾಗಿ ಪರಿವರ್ತಿಸಿಕೊಳ್ಳುವಲ್ಲಿ ಯೋಗ ಬಳಕೆಯಾಗಬೇಕಿದೆ. ಯೋಗಭ್ಯಾಸ ಆರಂಭ ಶೂರತ್ವವಾಗದೇ ನಿತ್ಯ ನಿರಂತರ ಆಚರಣೆಯಾಗಬೇಕು. ಜ್ಞಾನದೊಡನೆ,ಧ್ಯಾನ ಅಳವಡಿಸಿಕೊಳ್ಳುವಂತೆ ಯೋಗ ಮತ್ತು ಅಧ್ಯಾತ್ಮಿಕ ಚಿಂತನೆಗಳ ಬಗ್ಗೆ ವಿವರಿಸಿದರು.
ಕಂಪ್ಲಿ ತಾಲ್ಲೂಕು ಪತಂಜಲಿ ಯೋಗ ಸಮಿತಿ ಪ್ರಭಾರಿ ಡಿ.ಮೌನೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಪಟ್ಟಣವೂ ಸೇರಿದಂತೆ ತಾಲ್ಲೂಕಿನಾದ್ಯಂತ ನಮ್ಮ ಸಮಿತಿಯಿಂದ ನಿರಂತರ ಯೋಗ ಶಿಬಿರಗಳನ್ನು ಆಯೋಜಿಸಿ ಆರೋಗ್ಯವಂತ ಸಮಾಜದ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ ಎಂದರು.
ನಂತರ ಹೊಸಪೇಟೆಯ ಹಿರಿಯ ಯೋಗ ಶಿಕ್ಷಕ ಎಸ್. ಶ್ರೀಧರ ಯೋಗ ಸಾಧಕರು ಮತ್ತು ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆ ಮೂಲಕ ಮಹತ್ವದ ಯೋಗ ಆಸನಗಳನ್ನು ಕಲಿಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಸಮಿತಿ ಪದಾಧಿಕಾರಿಗಳು, ಮಹಿಳಾ ಕಿಸಾನ್ ಸಮಿತಿ ಪದಾಧಿಕಾರಿಗಳು, ನಿತ್ಯ ಯೋಗ ಸಾಧಕರು, ವಿವಿಧ ಶಾಲೆ, ಕಾಲೇಜುಗಳ, ಹಾಸ್ಟೆಲುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬ್ರೆಟ್ವೇ ಶಾಲೆ : ಇಲ್ಲಿನ ಬ್ರೆಟ್ವೇ ಶಾಲೆಯಲ್ಲಿ ಅಂತರಾಷ್ಟ್ರೀಯ ಯೀಗ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಂದ ಆಕರ್ಷಕ ಯೋಗ ಪ್ರದರ್ಶನ ಜರುಗಿತು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು, ಆಡಳಿತ ಮಂಡಳಿ ಪದಾಧಿಕಾರಿಗಳು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















