ಬನಹಟ್ಟಿ (ಬಾಗಲಕೋಟೆ) : ಇಲ್ಲಿನ ಸದಾಶಿವ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ತಮ್ಮ ಶಾಲೆಯಲ್ಲಿ ಆಚರಿಸಿದ 80ನೇ ಸ್ವಾತಂತ್ರ್ಯ ದಿನಾಚರಣೆಯ ಕುರಿತು ತಮ್ಮ ಪಾಲಕರಿಗೆ ಸಾಮೂಹಿಕ ಅಂಚೆ ಪತ್ರ ಬರೆದು ಬನಹಟ್ಟಿ ಅಂಚೆ ಕಚೇರಿಯ ಅಂಚೆ ಡಬ್ಬಿಯೊಳಗೆ ಹಾಕಿ ಸಂತಸ ವ್ಯಕ್ತಪಡಿಸಿದರು. ತಂತ್ರಜ್ಞಾನ ಮುಂದುವರೆದಂತೆ ಇಂದಿನ ಮಕ್ಕಳಿಗೆ ಸೃಜನಶೀಲತೆ ಕೊರತೆ ಉಂಟಾಗುತ್ತಿದೆ. ಪತ್ರ ಸಂಸ್ಕೃತಿ ಅಂತೂ ನಶಿಸಿ ಹೋಗಿದೆ. ಪತ್ರ ಬರೆಯುವುದರಿಂದ ಮಕ್ಕಳಲ್ಲಿ ವಾಕ್ಯ ರಚನೆ, ವ್ಯಾಕರಣದ ಕ್ರಮಬದ್ಧತೆ, ಕಲ್ಪನೆ, ಚಿಂತನೆ ವೃದ್ಧಿಯಾಗುತ್ತದೆ. ಭಾಷಾ ಸಂವಹನ ಕೌಶಲ್ಯ ಸುಧಾರಿಸುತ್ತದೆ, ಈ ಅಂಚೆ ಪತ್ರ ಸಂಸ್ಕೃತಿಯನ್ನು ಇಂದಿನ ಮಕ್ಕಳಲ್ಲಿ ಬೆಳೆಸಬೇಕಾಗಿದೆ ಎಂದು ಮಾರ್ಗದರ್ಶಿ ಶಿಕ್ಷಕರಾದ ಶ್ರೀ ಚಿರಂಜೀವಿ ರೋಡಕರ್ ಅಭಿಪ್ರಾಯ ವ್ಯಕ್ತಪಡಿಸಿದರು. ಮಕ್ಕಳ ಮತ್ತು ಶಿಕ್ಷಕರ ಈ ಕಾರ್ಯಕ್ಕೆ ಶಾಲೆಯ ಮುಖ್ಯ ಗುರುಮಾತೆ ಶ್ರೀಮತಿ ಎಸ್ ಎಸ್ ಗೊಬ್ಬಾನಿ ಮೆಚ್ಚುಗೆ ವ್ಯಕ್ತಪಡಿಸಿ ಈ ಪತ್ರಗಳು ಮನುಷ್ಯನ ಭಾವನೆಗಳಿಗೆ ಕನ್ನಡಿ ಹಿಡಿದು ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ, ಮಕ್ಕಳಲ್ಲಿ ಭಾಷಾ ಕೌಶಲ್ಯ ಸುಧಾರಿಸುತ್ತದೆ, ಇದು ಮುಂದುವರೆಯಬೇಕು ಎಂದು ಹೇಳಿದರು.
- ಕರುನಾಡ ಕಂದ ಸುದ್ದಿ




















