ಬಳ್ಳಾರಿ / ಕಂಪ್ಲಿ : ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ, ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ, ಪುರಸಭೆ ಸಿಬ್ಬಂದಿಗಳಿಗೆ, ಕಂದಾಯ ಇಲಾಖೆಯ ಗ್ರಾಮಾಡಳಿತ ಅಧಿಕಾರಿಗಳಿಗೆ ಜನನ ಮತ್ತು ಮರಣ ಹಾಗೂ ಬೆಳೆ ಕಟಾವು ನೋಂದಣಿ ಕುರಿತಂತೆ ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಸಾಂಖ್ಯಿಕ ಸಹಾಯಕ ನಿರ್ದೇಶಕಿ ಸರಸ್ವತಿ ಅವರು ಕಳೆದ 2016-17 ರಿಂದಲೇ ಜನನ ಮತ್ತು ಮರಣ ಹಾಗೂ ಬೆಳೆ ಕಟಾವುಗಳನ್ನು ಆನ್ ಲೈನ್ ಮೂಲಕವೇ ನೋಂದಣಿ ಮಾಡಲಾಗುತ್ತಿದೆ. ಆದರೆ ಕೆಲವೊಂದು ಲೋಪಗಳಿದ್ದು ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಗಳ ಎಲ್ಲಾ ಸಿಬ್ಬಂದಿಗಳಿಗೆ ಒಂದು ದಿನದ ತರಬೇತಿ ಕಾರ್ಯಗಾರವನ್ನು ಏರ್ಪಡಿಸಲಾಗಿದೆ. ಜನನ ಮತ್ತು ಮರಣ ಹಾಗೂ ಬೆಳೆ ಕಟಾವು ನೋಂದಣಿಯನ್ನು ಈಗಾಗಲೇ ಮೊಬೈಲ್ ಆ್ಯಪಾ್ ಮೂಲಕ ನೋಂದಣಿ ಮಾಡುವ ಬಗ್ಗೆ ಸಿಬ್ಬಂದಿಗಳಿಗೆ ಜಾಗೃತಿ ಇದೆ ಆದರೆ ಬಹಳಷ್ಟು ಸಲ ದಿನಾಂಕಗಳನ್ನು, ಹೆಸರುಗಳನ್ನು, ವಿಳಾಸವನ್ನು ನೋಂದಣಿ ಮಾಡುವಾಗ ಲೋಪ ದೋಷಗಳಾಗುತ್ತಿವೆ. ಒಂದು ಸಲ ಆನ್ ಲೈನ್ ನಲ್ಲಿ ನೋಂದಣಿ ಮಾಡಿದ ಮೇಲೆ ಅದನ್ನು ಸರಿಪಡಿಸಲು ಬರುವುದಿಲ್ಲ, ಆದ್ದರಿಂದ ಪ್ರಥಮ ಬಾರಿಗೆ ನೋಂದಣಿ ಮಾಡುವ ಮುನ್ನ ಸಮಗ್ರವಾಗಿ ಪರಿಶೀಲಿಸಿ, ಸಂಭಂದ ಪಟ್ಟವರಿಂದ ಸರಿಯಾಗಿದೆ ಎಂದು ಸ್ಪಷ್ಟ ಪಡಿಸಿದ ಮೇಲೆಯೇ ಆನ್ ಲೈನ್ ನಲ್ಲಿ ನೋಂದಣಿ ಮಾಡಿಸಿ. ಇದರಿಂದ ಸಮಗ್ರವಾದ ಅಂಕಿಸಂಖ್ಯೆಗಳು ಲಭ್ಯವಾಗುತ್ತವೆ. ಜೊತೆಗೆ ಅತಿ ವೃಷ್ಟಿ, ಅನಾವೃಷ್ಟಿ ಸಂದರ್ಭದಲ್ಲಿ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲು ಸಹಕಾರಿಯಾಗುತ್ತದೆ ಎಂದರು.
ತಹಸೀಲ್ದಾರ್ ಜೂಗಲ್ ಮಂಜುನಾಯಕ ಮಾತನಾಡಿ ಆನ್ ಲೈನ್ ನೋಂದಣಿ ಮಾಡುವಾಗ ಲೋಪ ದೋಷಗಳನ್ನು ಆಗದಂತೆ ಗಮನ ಹರಿಸಿ. ಬೆಳೆಗಳ ವಿಷಯ ಬಂದಾಗ ಗ್ರಾಮಾಡಳಿತಾಧಿಕಾರಿಗಳು ಎಲ್ಲೋ ಕುಳಿತು ಆನ್ ಲೈನ್ ನೋಂದಣಿ ಮಾಡಬೇಡಿ, ಅತಿವೃಷ್ಟಿ,ಅನಾವೃಷ್ಟಿ ಸಂದರ್ಭದಲ್ಲಿ ತಪ್ಪು ದಾಖಲೆಗಳನ್ನು ಮಾಡಿದ್ದರೆ ಪರಿಹಾರ ವಿತರಿಸಲು ಸಮಸ್ಯೆಯಾಗುತ್ತದೆಯಾದ್ದರಿಂದ ತಪ್ಪಾದ ಮೇಲೆ ಪಶ್ಚಾತಾಪ ಪಡುವುದರಕ್ಕಿಂತ ಮೊದಲೇ ಸಮರ್ಪಕವಾಗಿ ನೋಂದಣಿ ಮಾಡಿ ಎಂದರು.
ನಂತರ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಪ್ರೊಜೆಕ್ಟರ್ ಮೂಲಕ ತರಬೇತಿಯನ್ನು ನೀಡಲಾಯಿತು. ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾ ಅಂಕಿ ಸಂಖ್ಯೆ ಸಾಂಖಿಕ ವಿಭಾಗದ ಎ ಎಸ್ ಒ ರವಿ ಹಾಗೂ ಸಿಬ್ಬಂದಿಗಳು, ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















