
ಬಳ್ಳಾರಿ / ಕುರುಗೋಡು : ಪ್ರವಾಸೋದ್ಯಮ ಇಲಾಖೆಯ ವತಿಯಿಂದ 2024- 25ನೇ ಸಾಲಿನ ಎಸ್.ಸಿ.ಎಸ್.ಪಿ/ಟಿ.ಎ ಸ್.ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ಉದ್ಯಮಿದಾರರನ್ನು ಉತ್ತೇಜಿಸುವ ಸಲುವಾಗಿ ಹಮ್ಮಿಕೊಂಡಿದ್ದ ತರಬೇತಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಕುರುಗೋಡಿನ ಶಾಸಕರ ಕಾರ್ಯಾಲಯದ ಬಳಿ ಗುರುವಾರ ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ಅವರು ಮೊಬೈಲ್ ಕ್ಯಾಂಟೀನ್ ವಾಹನಗಳನ್ನು ಹಸ್ತಾಂತರಿಸಿದರು.

ಮೊಬೈಲ್ ಕ್ಯಾಂಟೀನ್ ವಾಹನ ಖರೀದಿಸಲು ಪ್ರವಾಸೋದ್ಯಮ ಇಲಾಖೆಯಿಂದ ರೂ. 5 ಲಕ್ಷಗಳ ಸಹಾಯಧನ ಒದಗಿಸಲಾಗಿದೆ.
ಫಲಾನುಭವಿಯ ಶೇ. 5 ರಷ್ಟು ವಂತಿಗೆ ಹಾಗೂ ಉಳಿದ ಮೊತ್ತವನ್ನು ಹಣಕಾಸು ಸಂಸ್ಥೆ ಅಥವಾ ಬ್ಯಾಂಕ್ ಸಾಲದ ಮೂಲಕ ಭರಿಸಿ ವಾಹನಗಳನ್ನು ಖರೀದಿಸಿ ವಿತರಿಸಲಾಗಿದೆ.
ಬಳ್ಳಾರಿ ಜಿಲ್ಲೆಗೆ ಆಯ್ಕೆಯಾದ ಪರಿಶಿಷ್ಟ ಜಾತಿಯ 03 ಹಾಗೂ ಪರಿಶಿಷ್ಟ ಪಂಗಡದ 01 ಸೇರಿದಂತೆ ಒಟ್ಟು 04 ಫಲಾನುಭವಿಗಳಿಗೆ ಈ ವಾಹನಗಳನ್ನು ವಿತರಿಸಲಾಯಿತು.
ಅಭ್ಯರ್ಥಿಯ ವಯಸ್ಸು ಮತ್ತು 10ನೇ ತರಗತಿಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಅರ್ಹರನ್ನು ಆಯ್ಕೆ ಮಾಡಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ಈಗಾಗಲೇ ಒಂದು ತಿಂಗಳ ಉದ್ಯಮಶೀಲತಾ ತರಬೇತಿ ನೀಡಲಾಗಿದೆ.
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಪ್ರಭುಲಿಂಗ ಎಸ್.ತಳಕೇರಿ, ರಾಜಲಕ್ಷ್ಮಿ ಮೋಟರ್ಸ್ ನ ಮಾಲೀಕರಾದ ಜಯರಾಜ್ ಸಿಂಗ್, ವ್ಯವಹಾರ ವ್ಯವಸ್ಥಾಪಕರಾದ ( Bussines Head ) ಮಹೇಶ ಮರಿಯಮ್ಮನಹಳ್ಳಿ, ಸೇಲ್ಸ್ ಮೇನೇಜರ್ ಕೆ. ಅಂಬರೇಶ್, ಮಂಜುನಾಥ, ಸೇರಿದಂತೆ ಮುಖಂಡರು, ಫಲಾನುಭವಿಗಳಾದ, ರಾಘವೇಂದ್ರ, ತಿಪ್ಪೇಸ್ವಾಮಿ, ಬೋವಿ ರಾಮರೆಡ್ಡಿ, ಬಸವರಾಜ್ ಸೇರಿದಂತೆ ಇತರರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















