ಬಳ್ಳಾರಿ / ಕಂಪ್ಲಿ : ಸಮಾಜದ ಶಾಂತಿ ಕಾಪಾಡುವುದು ಪೊಲೀಸರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಗಣೇಶ ಹಬ್ಬಕ್ಕೆ ಬಂದೋಬಸ್ತ್ ಏರ್ಪಡಿಸಲಾಗುತ್ತಿದ್ದು, ಸ್ಥಳೀಯ ಮುಖಂಡರು, ಗಣಪತಿ ಮಂಡಳಿಯವರು ಜವಾಬ್ದಾರಿಯುವಾಗಿ ಹಬ್ಬವನ್ನು ಶಾಂತಿ, ಸೌಹಾರ್ದತೆಯಿಂದ ಆಚರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪೆನ್ನಕರ್ ಹೇಳಿದರು.
ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಶನಿವಾರ ಸಂಜೆ ನಡೆದ ಗೌರಿ ಗಣೇಶ ಹಬ್ಬದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಾಚೀನ ಕಾಲದಿಂದಲೂ ಗಣಪತಿ ಹಬ್ಬಕ್ಕೆ ತನ್ನದೇ ಆದ ಇತಿಹಾಸವಿದ್ದು, ಯುವಕರು ಗಣಪತಿ ಹಬ್ಬದಲ್ಲಿ ಜಾನಪದ, ನಾಟಕ, ಭಕ್ತಿ ಗೀತೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಗಣಪತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಬೇಕು. ಶಾಂತಿ, ಸುವ್ಯವಸ್ಥೆ, ಭದ್ರತೆ ಅತಿ ಮುಖ್ಯವಾಗಿದೆ. ಯುವಕರು ಅತಿ ಜಾಗ್ರತೆಯಿಂದ ಗಣಪತಿ ಪ್ರತಿಷ್ಠಾಪಿಸುವ ಜೊತೆಗೆ ವಿಸರ್ಜನೆವರೆಗೂ ಯಾವುದೇ ಅಹಿತಕರ ಘಟನೆ ನಡೆಯಂತೆ ನೋಡಿಕೊಳ್ಳಬೇಕು. ಈಗಾಗಲೇ ಡಿಜೆ ನಿಷೇಧಿಸಲಾಗಿದೆ. ಅತಿ ಕಡಿಮೆ ಸೌಂಡ್ ಸಿಸ್ಟಂಗಳನ್ನು ಬಳಕೆ ಮಾಡಬೇಕು. ಯಾರಿಗೂ ತೊಂದರೆಯಾಗದಂತೆ ಹಬ್ಬವನ್ನು ಆಚರಿಸಬೇಕು ಎಂದರು.
ನಂತರ ಪಿಐ ಕೆ.ಬಿ.ವಾಸುಕುಮಾರ ಮಾತನಾಡಿ, ಕಂಪ್ಲಿಯಲ್ಲಿ ಯಾವುದೇ ಹಬ್ಬಗಳನ್ನು ಆಚರಿಸಿದರೂ, ಎಲ್ಲಾ ಸಮುದಾಯದವರ ಸಹಕಾರ ಮನೋಭಾವನೆಯೊಂದಿಗೆ ಆಚರಿಸುತ್ತಿದ್ದಾರೆ. ಈಗಾಗಲೇ ಕಂಪ್ಲಿ ತಾಲೂಕು ವ್ಯಾಪ್ತಿಯ ನಂ.10 ಮುದ್ದಾಪುರ, ಗೋನಾಳ್ ಗ್ರಾಮದಲ್ಲಿ ಗಣಪತಿ ಹಬ್ಬವನ್ನು ನಿಷೇಧಿಸಲಾಗಿದೆ. ಗಣಪತಿ ಮಂಡಳಿಯವರು, ಶಾಂತಿ, ಸೌಹಾರ್ದತೆಯಿಂದ ಆಚರಿಸಬೇಕು ಎಂದರು.
ಗಣಪತಿ ವಿಸರ್ಜನೆ ವೇಳೆ ತುಂಗಭದ್ರ ನದಿಗೆ ತೆರಳುವ ಕೋಟೆ ರಸ್ತೆಯಲ್ಲಿ ಬೀದಿ ದೀಪ ಇರುವುದಿಲ್ಲ. ಕತ್ತಲಿನಲ್ಲೇ ಗಣಪತಿ ಕಳುಹಿಸಬೇಕಾಗಿದೆ. ಮತ್ತು ಅಂತಹ ಕತ್ತಲಿನಲ್ಲೇ ಗಲಾಟೆಗಳಾದರೆ, ಯಾರಂತ ನೋಡಿಕೊಳ್ಳುವುದಕ್ಕೆ ಆಗುತ್ತದೆ. ಆದ್ದರಿಂದ ರಸ್ತೆಯುದ್ಧಕ್ಕೂ ಮತ್ತು ನದಿ ಬಳಿಯಲ್ಲಿ ಬೆಳಕಿನ ವ್ಯವಸ್ಥೆ ಮಾಡಬೇಕು. ರಾತ್ರಿ ವೇಳೆ ವಿದ್ಯುತ್ ಕಡಿತ ಮಾಡಬಾರದು. ಹೀಗೆ ಇನ್ನಿತರ ಅಭಿಪ್ರಾಯಗಳನ್ನು ಜನರು ಹಂಚಿಕೊಂಡರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಪ್ರಸಾದ್ ಗೋಖುಲೆ, ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಜೆಇ ವಿನೋದ, ಕಂದಾಯ ಇಲಾಖೆಯ ಮೌನೇಶ್, ಎಪಿಎಂಸಿ ಅಧ್ಯಕ್ಷ ಎನ್.ಹಬೀಬ್ ರೆಹಮಾನ್, ಮುಖಂಡರಾದ ಕೆ.ಎಂ.ಹೇಮಯ್ಯಸ್ವಾಮಿ, ಸೈಯದ್ ಉಸ್ಮಾನ್, ಹೆಚ್.ಪಿ.ಶಿಕಾರಿ ರಾಮು, ಬೆಳಗೋಡ್ಹಾಳ್ ದೊಡ್ಡ ಬಸವರಾಜ ಬಡಗಿ, ಗೋಪಾಲ, ಜಾಫರ್, ಮನೋಜಗೌಡ ಸೇರಿದಂತೆ ಗಣಪತಿ ಮಂಡಳಿಯವರು, ಎಲ್ಲಾ ಸಮಾಜದವರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















