
ಮಾರುಕಟ್ಟೆಗಳಲ್ಲಿ ಬೆಲೆ ಪಾತಾಳಕ್ಕೆ, ಅನ್ನದಾತನ ಆಕ್ರೋಶ ಮುಗಿಲಿಗೆ!
ವಿಶೇಷ ವರದಿ : ಜಿಲಾನಸಾಬ್ ಬಡಿಗೇರ್
ಬಳ್ಳಾರಿ / ಕಂಪ್ಲಿ : ಮುಂಗಾರು ಮಳೆ ಕೈಕೊಟ್ಟ ನಂತರದಲ್ಲಿ ರೈತರು ಪರ್ಯಾಯ ಬೆಳೆಗಳಲ್ಲಿ ಒಂದಾದ ತೋಟಗಾರಿಕೆ ಬೆಳೆಯತ್ತ ಸಾಗಿದ ರೈತ ಬದನೆಕಾಯಿ ಬೆಳೆದು ಕೈ ಸುಟ್ಟುಕೊಂಡಿದ್ದಾರೆ. ಒಂದೇ ಬೆಳೆ ಬೆಳೆಯದೆ, ತೋಟಗಾರಿಕೆ ಬೆಳೆಯತ್ತ ಮುಖ ಮಾಡಿದ ರೈತ ಬದನೇಕಾಯಿ ಬೆಳೆ ಉತ್ತಮ ಇಳುವರಿ ನೀಡಿದರೂ, ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಇಲ್ಲದ ಪರಿಣಾಮ ನಷ್ಟದ ಸಂಕಷ್ಟಕ್ಕೆ ದೂಡಿದೆ. ಹೌದು, ಕಂಪ್ಲಿ ತಾಲೂಕು ವ್ಯಾಪ್ತಿಯ ನೆಲ್ಲುಡಿ ಗ್ರಾ.ಪಂ ಯ ಹೊಸ ನೆಲ್ಲುಡಿ ಗ್ರಾಮದ ರೈತ ಟಿ.ಪಕ್ಕಿರೆಡ್ಡಿ ಎಂಬುವರ ಗುತ್ತಿಗೆ ಆಧಾರಿತ ಜಮೀನಿನಲ್ಲಿ ಬೆಳೆಗೆ ಬೆಳೆಗೆ ಉತ್ತಮ ಬೆಲೆ ಸಿಗದ ಹಿನ್ನಲೆ ರಸ್ತೆ ಹಾಗೂ ಕಸದ ಬುಟ್ಟಿಗೆ ಚೆಲ್ಲುವಂತಾಗಿದೆ. ಒಂದೂವರೆ ಎಕರೆ ಪ್ರದೇಶದಲ್ಲಿ ಬೋರ್ವೆಲ್ ಆಶ್ರಯದಲ್ಲಿ ಬದನೇಕಾಯಿ ಬೆಳೆಯನ್ನು ಮೇ ತಿಂಗಳ ಕೊನೆವಾರದಲ್ಲಿ ನಾಟಿ ಮಾಡಿದ್ದಾರೆ. ಆಂಧ್ರದ ಅನಂತಪುರದಿಂದ ನರ್ಸರಿಯನ್ನು ಒಂದು ಸಸಿಗೆ 35 ಪೈಸೆಯಂತೆ ಒಂದೂವರೆ ಎಕರೆಗೆ 270 ಟ್ರಯ್ಗೆ ಒಟ್ಟು 9450 ರೂ. ಮೌಲ್ಯದ ಸುಮಾರು 27 ಸಾವಿರ ಸಸಿಗಳನ್ನು ತಂದು ನಾಟಿ ಮಾಡಿದ್ದಾರೆ. ಎರಡೂವರೆ ತಿಂಗಳಲ್ಲಿ ಉತ್ತಮ ಫಸಲು ಬಂದಿತ್ತಾದರೂ, ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಬೇಕಾಬಿಟ್ಟಿಯ ದರಕ್ಕೆ ಬದನೆಕಾಯಿ ಭಾರವಾಗಿ ಪರಿಣಮಿಸಿದೆ. ಮೊದಲ ಹಂತದಲ್ಲಿ 6-7 ಚೀಲಗಳಷ್ಟು ಬದನೇಕಾಯಿ ಫಸಲು ಬಂದಿದೆ. ಆದರೆ, ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಇಲ್ಲಂತಾಗಿದೆ. ಇದರಿಂದ ಸಂಕಷ್ಟ ಎದುರಿಸುವಂತಾಗಿದ್ದು, ಇನ್ನೇನು ಫಸಲಿಗೆ ಉತ್ತಮ ದರ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ರೈತನಿಗೆ ಅದೇ ದರದಲ್ಲಿ ಮಾರುಕಟ್ಟೆಗೆ ಸಾಗಿಸಬೇಕಾಗಿದೆ. ಒಂದು ಚೀಲದಲ್ಲಿ 35 ಕೆ.ಜಿ. ಯಷ್ಟು ಬದನೆಕಾಯಿ ತುಂಬಲಾಗುತ್ತದೆ. ಅದರಂತೆ ಆರೇಳೂ ಚೀಲದಲ್ಲಿ 245 ಕೆ.ಜಿ ಬದನೆಕಾಯಿ ಬರುತ್ತದೆ. ಆದರೆ, ಸಂತೆ ಮಾರುಕಟ್ಟೆಯಲ್ಲಿ ಬರೀ 10 ರೂ.ಗೆ 2450ಗೆ ಕೊಟ್ಟು ಬರುವುದಾಗಿದೆ. ಇದರಿಂದ ರೈತರಿಗೆ ನಷ್ಟ ಎದುರಾಗಿದ್ದು, ತೋಟಗಾರಿಕೆ ಬೇಡ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ದಲ್ಲಾಳಿಗೆ ಲಾಭ, ರೈತರಿಗೆ ನಷ್ಟ :
ತುಂಗಭದ್ರ ಬಲದಂಡೆಯಲ್ಲಿ ಅತಿ ಹೆಚ್ಚಾಗಿ ಭತ್ತ, ಮೆಣಸಿನಕಾಯಿ ಬೆಳೆಯುವುದು ಹೆಚ್ಚು. ಆದರೆ, ಒಂದೇ ತರನಾದ ಬೆಳೆಯಿಂದ ಬೆಂಬಲ ಬೆಲೆ ದೊರೆಯುವುದಿಲ್ಲ. ಆದ್ದರಿಂದ ತೋಟಗಾರಿಕೆ ಬೆಳೆಯಲ್ಲಿ ಒಂದಾದ ಬದನೆಕಾಯಿ ಬೆಳೆಯತ್ತ ಮುಖ ಮಾಡಿದ ರೈತನಿಗೆ ನಷ್ಟದ ಅನುಭವಾಗಿದೆ. ಭೂಮಿ ಹದ ಮಾಡಿ, ಸಸಿ ನಾಟಿಯಿಂದ ಹಿಡಿದು, ರಸಗೊಬ್ಬರ ಬಳಕೆ, ಕಸ ನಿರ್ವಹಣೆ, ಕೂಲಿ ಕಾರ್ಮಿಕ ವೆಚ್ಚ ಸೇರಿದಂತೆ ಒಟ್ಟಾರೆಯಾಗಿ ಒಂದೂವರೆ ಎಕರೆಗೆ ಸುಮಾರು 1 ಲಕ್ಷ 80 ಸಾವಿರ ಖರ್ಚು ಮಾಡಲಾಗಿದೆ. ಆದರೆ, ಇಲ್ಲಿತನಕ ಬರೀ 80 ಸಾವಿರ ಮೌಲ್ಯದ ಫಸಲು ಬಂದಿದ್ದು, ಭೂಮಿಗೆ ಹಾಕಿದ ಇನ್ನೂ 1 ಲಕ್ಷ ನಷ್ಟವಾಗಿದೆ. ಮತ್ತು ರೈತನ ದಿನನಿತ್ಯದ ದುಡಿಮೆಗೆ ಲಾಭ ಇಲ್ಲದಂತಾಗಿದೆ. ಇದರಿಂದ ರೈತನ ಬದುಕು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇಲ್ಲಿ ಹೆಚ್ಚಾಗಿ ದಲ್ಲಾಳಿ ಮತ್ತು ವ್ಯಾಪಾರಸ್ಥರಿಗೆ ಅಧಿಕ ಲಾಭವಾಗಿದ್ದು ಬಿಟ್ಟರೆ, ರೈತರಿಗೆ ನಷ್ಟವಾಗಿದೆ. ಸರ್ಕಾರ, ಅಧಿಕಾರಿಗಳು ಬೆಳೆ ನಷ್ಟದಲ್ಲಿ ಸಿಲುಕಿರುವ ರೈತರ ಕಡೆಗೆ ಮುಖ ಮಾಡಲುವ ಜೊತೆಗೆ ರೈತರಿಗೆ ನಷ್ಟ ಪರಿಹಾರ ನೀಡಬೇಕೆಂಬುದು ರೈತರ ಹಕ್ಕೋತ್ತಾಯವಾಗಿದೆ.
ರಸಗೊಬ್ಬರ ಏರಿಕೆ ಬರೆ :
ಈಗಾಗಲೇ ರಸಗೊಬ್ಬರ, ಡೀಸೆಲ್, ಪರಿಕರ, ಕೂಲಿ ಕಾರ್ಮಿಕರ ದರ ಗಣನೀಯವಾಗಿ ಏರಿಕೆ ಕಂಡಿದ್ದು, ಈ ದರ ಏರಿಕೆ ನಡುವೆ ರೈತರಿಗೆ ನಷ್ಟ ಭಾರವಾಗಿದೆ. ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ, ಗುತ್ತಿಗೆ ಆಧಾರದಲ್ಲಿ ಬೆಳೆದ ರೈತನ ಪಾಡು ಅದೋ ಗತಿ ಎನ್ನುವಂತಾಗಿದೆ.
ಹುಳ ಬಾಧೆ :
ಮೂರನೇ ಹಂತದಲ್ಲಿ ಉತ್ತಮ ಇಳುವರಿ ಕಂಡು ಬಂದರೂ, ನಂತರ ಕೀಳುವೆ ಸಂದರ್ಭದಲ್ಲಿ ಅತಿ ಹೆಚ್ಚು ಹುಳು ಬಾಧೆಯಿಂದ ಬೆಳೆ ಕೂಡಿದ್ದು, ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಮತ್ತು ಉತ್ತರ ದರ ಇಲ್ಲದ ಪರಿಣಾಮ ಬದನೆಕಾಯಿ ಫಸಲನ್ನು ರಸ್ತೆಗೆ ಎಸೆಯಲಾಯಿತು. ಒಟ್ನಲ್ಲಿ ರೈತರು ಬದುಕು ಆರ್ಥಿಕ ಸಂಕಷ್ಟದಲ್ಲಿಯೇ ಸಾಗಿವಂತಾಗಿದೆ.
ಒಂದೂವರೆ ಎಕರೆ ಜಮೀನಿನಲ್ಲಿ ಗುತ್ತಿಗೆ ಆಧಾರದ ಮೇಲೆ ಬಧನೆಕಾಯಿ ಬೆಳೆ ಬೆಳೆದಿದ್ದು, ಸುಮಾರು 1 ಲಕ್ಷ 80 ಸಾವಿರ ಖರ್ಚು ಮಾಡಿ ಬೆಳೆದ ಬೆಳೆಗೆ ಬೆಂಬಲ ಇಲ್ಲದಂತಾಗಿದೆ. ಬರೀ 80 ಸಾವಿರ ಫಸಲು ಬಂದಿದ್ದು, ಒಂದು ಲಕ್ಷ ರೂ.ಗಳ ನಷ್ಟವಾಗಿದೆ. ಬೆಳೆ ಕೀಳಿ, ಬಾಡಿಗೆ ತರದ ವಾಹನದಲ್ಲಿ ಗಂಗಾವತಿ ಸಂತೆ ಮಾರುಕಟ್ಟೆ ತೆಗೆದುಕೊಂಡು ಹೋಗಿ, ದಲ್ಲಾಳಿಗಳಿಗೆ ಅಧಿಕ ಲಾಭ, ರೈತರಿಗೆ ನಷ್ಟದ ಬರೆಯಾಗಿದೆ. ಇದೇ ತರವಾದರೆ ಮುಂದಿನ ದಿನದಲ್ಲಿ ರೈತತನವನ್ನೇ ಬಿಡುವಂತಹ ಪರಿಸ್ಥಿತಿ ಬರುತ್ತದೆ. ಆದ್ದರಿಂದ ಸರ್ಕಾರ, ತೋಟಗಾರಿಕೆ ಅಧಿಕಾರಿಗಳು ಗಮನ ಹರಿಸಿ, ಬೆಳೆ ನಷ್ಟ ಪರಿಹಾರ ನೀಡಿದರೆ, ರೈತರು ಉಳಿಯಲು ಸಾಧ್ಯ.
- ಟಿ.ಪಕ್ಕಿರೆಡ್ಡಿ, ರೈತ, ಹೊಸ ನೆಲ್ಲುಡಿ.




















