
ಬಳ್ಳಾರಿ / ಕಂಪ್ಲಿ : ಆಧುನಿಕ ಜೀವನದ ಭರಾಟೆಯಲ್ಲಿ ಜನರು ಆರೋಗ್ಯದ ಕಡೆಗೆ ಹೆಚ್ಚಿನ ಜಾಗೃತಿವಹಿಸಬೇಕು ಎಂದು ಕಲ್ಮಠದ ಅಭಿನವ ಪ್ರಭುಸ್ವಾಮಿ ಹೇಳಿದರು.

ಪಟ್ಟಣದ ಭಾರತ್ ಚಿತ್ರಮಂದಿರ ಬಳಿಯ ಕೂಲಿಕಟ್ಟೆ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಹಿಂದೂ ಯುವ ಸೇನೆಯಿಂದ ಪ್ರತಿಷ್ಠಾಪಿಸಿದ ಮಹಾರಾಜ ಗಣಪತಿ ಮಹೋತ್ಸವದ ಹಿನ್ನಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿ, ಆರೋಗ್ಯವೇ ಮಹಾಭಾಗ್ಯ ಎಂಬಂತೆ ಇಂದಿನ ದಿನಮಾನದಲ್ಲಿ ಪ್ರತಿಯೊಬ್ಬರು ಆರೋಗ್ಯವಂತರಾಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಜನರು ಹೆಚ್ಚಿನ ಜಾಗೃತಿವಹಿಸಬೇಕು ಎಂದರು.
ನಂತರ ಹಿಂದೂ ಯುವ ಸೇನೆ ಅಧ್ಯಕ್ಷ ಶಿವುಕುಮಾರ ಅಲಬನೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಣೇಶೋತ್ಸವ ನಿಮಿತ್ಯ ಇಲ್ಲಿನ ಜನರ ಆರೋಗ್ಯದ ದೃಷ್ಠಿಯಿಂದ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಇದರಲ್ಲಿ 250ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆಯ ಸದುಯೋಗ ಪಡೆದುಕೊಳ್ಳುವ ಜೊತೆಗೆ ಉಚಿತವಾಗಿ ಔಷಧಗಳನ್ನು ಪಡೆದುಕೊಂಡರು. ಸಮಾಜ ಸೇವೆ ಮಾಡುವ ಉದ್ದೇಶದಿಂದ ಇಂತಹ ತಪಾಸಣೆ ಆಯೋಜನೆಯೊಂದಿಗೆ ಜನತೆಗೆ ಅನುಕೂಲ ಮಾಡಿಕೊಟ್ಟಿದೆ ಎಂದರು.
ತಪಾಸಣೆ ಮುಂಚಿತವಾಗಿ ಇಲ್ಲಿನ ಗಣಪತಿ ಪ್ರತಿಷ್ಠಾಪನೆಯ ಸ್ಥಳದಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ನಡೆದವು. ನಂತರ ಡಾ.ಭರತ್ ಪದ್ಮಶಾಲಿ, ಡಾ.ಶ್ರದ್ಧಾ ಭರತ್, ಡಾ.ವಿಕ್ರಮ್ ರೈಕರ್, ಡಾ.ಪ್ರವೀಣ್, ಡಾ.ತಸ್ನೀಮ್ ಅವರ ನೇತೃತ್ವದಲ್ಲಿ ಆರೋಗ್ಯ ತಪಾಸಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಸ್ಲಿಂ ಧರ್ಮಗುರುಗಳಾದ ಸೈಯದ್ ಷಾ ಮೆಹಮೂದ್ ಖಾದ್ರಿ ಉರುಫ್ ರೈಸ್ ಸಾಹೇಬ್, ಡಾ.ನೂರ್ ಅಹ್ಮದ್ ಖಾದ್ರಿ, ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ, ಮುಖಂಡರಾದ ಎಂ.ಸುಧೀರ್, ಎನ್.ಎಂ.ಪತ್ರಯ್ಯಸ್ವಾಮಿ, ಎಂ. ಇಸ್ಮಾಯಿಲ್ ಬೇಗ್, ಅಕ್ಕಿ ಜಿಲಾನ್, ನವೀನ್ ಅಲಬನೂರು, ಸಂತೋಷ್ ಅಲಬನೂರು, ಅವಿನಾಶ್ ಅಲಬನೂರು, ಚೇತನ್ ಆಚಾರ್, ಪ್ರದೀಪ್, ಅಮರೇಗೌಡ ಪಾಟೀಲ್, ಕಾರ್ತಿಕ, ರಾಕೇಶ್, ಹರ್ಷ, ಪುಟ್ಟಿ ರಾಘವೇಂದ್ರ, ಸೇರಿದಂತೆ ಇತರರು ಇದ್ದರು. ನಂತರ ಅನ್ನ ಸಂತಾರ್ಪಣೆ ವ್ಯವಸ್ಥೆ ನೆರವೇರಿತು.
ವರದಿ : ಜಿಲಾನಸಾಬ್ ಬಡಿಗೇರ್




















