ಬಳ್ಳಾರಿ / ಕಂಪ್ಲಿ : ಮಳೆ ಕೊರತೆಗೆ ಈಗಾಗಲೇ ರೈತರು ಬದುಕು ಅತಂತ್ರದಲ್ಲಿ ಸಾಗುವಂತಾಗಿದ್ದು, ಈಗ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದ್ದು, ಕೂಡಲೇ ರೈತರ ಪಂಪ್ಸೆಟ್ಗಳಿಗೆ 6 ತಾಸಿನ ವಿದ್ಯುತ್ ಪೂರೈಕೆ ಜೊತೆಗೆ ಹೆಚ್ಚವರಿ ಮೂರು ತಾಸು ತ್ರಿಫೇಸ್ ವಿದ್ಯುತ್ ಸರಬರಾಜು ಮಾಡಬೇಕೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಂಪ್ಲಿ ತಾಲೂಕು ಘಟಕದ ನೇತೃತ್ವದಲ್ಲಿ ರೈತರು ಪಟ್ಟಣದ ಜೆಸ್ಕಾಂ ಕಛೇರಿ ಆವರಣದಲ್ಲಿ ಗುಲ್ಬರ್ಗಾ ವಿದ್ಯುತ್ ಸರಬರಾಜಿನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಬರೆದ ಮನವಿ ಪತ್ರವನ್ನು ಎಇಇ ಶ್ರೀನಿವಾಸ ಪ್ರಸಾದ್ಗೆ ಶುಕ್ರವಾರ ಸಲ್ಲಿಸಿದರು.
ನಂತರ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ.ಗೌಡ ಮತ್ತು ಕಂಪ್ಲಿ ತಾಲೂಕು ಕಾರ್ಯಾಧ್ಯಕ್ಷ ಕೊಟ್ಟೂರು ರಮೇಶ್ ಮಾತನಾಡಿ, ಕಂಪ್ಲಿ ತಾಲೂಕು ಭಾಗದಲ್ಲಿ ಪ್ರಸ್ತುತ ಜೆಸ್ಕಾಂವತಿಯಿಂದ ಕೃಷಿ ಪಂಪ್ಸೆಟ್ಗಳಿಗೆ ದಿನಕ್ಕೆ 7 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಲಾಗುತ್ತಿತ್ತು. ಆದರೆ, ಕಳೆದ 2-3 ದಿನಗಳಿಂದ ಒಂದು ತಾಸು ಕಡಿತಗೊಳಿಸಿ, ಬರೀ 6 ಗಂಟೆಗಳ ವಿದ್ಯುತ್ ಸರಬರಾಜು ಮಾಡುತ್ತಿರುವುದು ಖಂಡನೀಯವಾಗಿದೆ. ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ತೀವ್ರ ಮಳೆಯ ಅಭಾವ ಉಂಟಾಗಿದ್ದು, ಪರಿಸ್ಥಿತಿ ಅತ್ಯಂತ ಭೀಕರವಾಗಿದೆ. ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದ್ದು, ಬೋರ್ವೆಲ್ಗಳಲ್ಲಿ ನೀರಿನ ಇಳುವರಿ ಗಣನೀಯವಾಗಿ ಕಡಿಮೆಯಾಗಿದೆ. ಇಂತಹ ಸಂಕಷ್ಟ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾವುಗಳು ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ರೈತರು ಸಾಲ ಸೂಲ ಮಾಡಿ, ಭತ್ತ, ಮೆಣಸಿನಕಾಯಿ ಮತ್ತು ಬಾಳೆ ಮುಂತಾದ ಪ್ರಮುಖ ವಾಣಿಜ್ಯ ಹಾಗೂ ಆಹಾರ ಬೆಳೆಗಳು ನೀರಿನ ಕೊರತೆಯಿಂದಾಗಿ ಕಣ್ಣೆದುರೇ ಒಣಗುತ್ತಿವೆ. ಪ್ರಸ್ತುತ ಬೆಳೆಗಳಿಗೆ ನೀರು ಒದಗಿಸಲು ಪಂಪ್ಸೆಟ್ ಮೂಲಕ ವಿದ್ಯುತ್ ಸರಬರಾಜು ಅಗತ್ಯವಾಗಿದೆ. ಆದ್ದರಿಂದ ಕೂಡಲೇ ಜೆಸ್ಕಾಂ ಅಧಿಕಾರಿಗಳು 6 ತಾಸಿನ ಜೊತೆಗೆ ಹೆಚ್ಚುವರಿ 3 ತಾಸು ವಿದ್ಯುತ್ ಪೂರೈಯಿಸಬೇಕು. ವಿದ್ಯುತ್ ಪೂರೈಸದಿದ್ದಲ್ಲಿ ರೈತರ ಬೆಳಗೆ ಎಕರೆಗೆ 50 ಸಾವಿರ ನಷ್ಟ ಪರಿಹಾರ ನೀಡಬೇಕು. ತ್ವರಿತ ಗತಿಯಲ್ಲಿ ಮೇಲಿನ ಅಧಿಕಾರಿಗಳೊಂದಿಗೆ ಚರ್ಚಿಸಿ, ವಿದ್ಯುತ್ ಪೂರೈಸಬೇಕು. ಇಲ್ಲದ್ದಿದ್ದಲ್ಲಿ ಸೆ.21ರಂದು ಬಳ್ಳಾರಿಯ ಮುಖ್ಯ ಅಭಿಯಂತರರ ಕಛೇರಿ ಜೆಸ್ಕಾಂ ಕಛೇರಿಗೆ ರೈತರೊಂದಿಗೆ ಮುತ್ತಿಗೆ ಹಾಕಲಾಗುವುದು ಎಂದರು.
ಜೆ. ಇ. ಮಹಾಂತೇಶ, ರೈತ ಮುಖಂಡರಾದ ವೆಂಕಟರಾಮರಾಜು, ಇಟಗಿ ಶರಣೇಗೌಡ, ಆನಂದರೆಡ್ಡಿ ಸುದರ್ಶನ, ನಾಗರಾಜ, ಮಲ್ಲಯ್ಯ, ರಮೇಶ, ನಾಗಪ್ಪ, ಈರಣ್ಣ, ರವಿಚಂದ್ರ ಸೇರಿದಂತೆ ರೈತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















