ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ತಲ್ಲೂರು:ಕರ್ನಾಟಕದ ಪಂಚಮುಖಿ ಕಾಶಿವಿಶ್ವನಾಥ ಕ್ಷೇತ್ರ (ಎರಡನೆಯ ಕಾಶಿ)

ಜಗದೋದ್ಧಾರಕನಾದ ಶಿವನ ವಿವಿಧ ರೂಪಗಳು ಹೆಚ್ಚಾಗಿ ಲಿಂಗರೂಪದ ಪೂಜೆಯನ್ನು ಮುಖ್ಯವಾಗಿ ಅನುಸರಿಸುತ್ತವೆ.ಯಾಕೆಂದರೆ ಅದಕ್ಕೊಂದು ಬಲವಾದ ಕಾರಣವಿದೆ.ಒಮ್ಮೆ ಶಿವನು ದೇವದಾರು ವನಕ್ಕೆ ಆಕಸ್ಮಿಕವಾಗಿ ಹೋದಾಗ ಅವನನ್ನು ಕಂಡು ಅಲ್ಲಿದ್ದ ಋಷಿ ಪತ್ನಿಯರು ಮನಸೋತು ಮರುಳಾಗುತ್ತಾರೆ.ತದನಂತರದಲ್ಲಿ ಸರಿ-ತಪ್ಪುಗಳನ್ನು ವಿಚಾರಿಸದ ಋಷಿಮುನಿಗಳು ಶಿವನಿಗೆ ಲಿಂಗರೂಪದಲ್ಲಿಯೇ ಪೂಜಿತನಾಗು ಎಂದು ಶಾಪ ಕೊಡುತ್ತಾರೆ.ಶಿವನು ಏನೂ ತಪ್ಪು ಮಾಡದಿದ್ದರೂ ಕೂಡ ಸುಖಾಸುಮ್ಮನೆ ಇಂತಹ ಘನಘೋರ ಶಾಪಕ್ಕೆ ತುತ್ತಾಗಬೇಕಾಗುತ್ತದೆ.ಹೀಗಾಗಿ ಜಗತ್ತಿನ ಎಲ್ಲೆಡೆಯಲ್ಲೂ ಶಿವನನ್ನು ಲಿಂಗಸ್ವರೂಪಿಯಾಗಿಯೇ ಪೂಜೆ ಮಾಡುತ್ತಾರೆ ಆದರೆ
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಲ್ಲೂರು ಗ್ರಾಮದ ಶ್ರೀ ಕಾಶಿ ವಿಶ್ವನಾಥ ಮಂದಿರದಲ್ಲಿ ಅತ್ಯಂತ ವಿರಳವಾಗಿ ಹಾಗೂ ಬೆರಳೆಣಿಕೆಯಷ್ಟೇ ಇರುವ ಪಂಚಮುಖಿಗಳನ್ನು ಹೊಂದಿರುವ ಅತ್ಯಂತ ವೈಶಿಷ್ಟ್ಯಪೂರ್ಣವಾದ ಶಿವಲಿಂಗವು ಇಲ್ಲಿ ಪೂಜಿಸಲ್ಪಡುವುದರಿಂದಲೇ ತಲ್ಲೂರ ಗ್ರಾಮವು ಪೌರಾಣಿಕವಾಗಿ ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ಲಿಂಗರೂಪವಲ್ಲದ ಶಿವನು ಇಲ್ಲಿ ಪಂಚಮುಖಗಳನ್ನು ಹೊಂದಿದೆ.ಅಂದರೆ ನಾಲ್ಕು ದಿಕ್ಕುಗಳಿಗೆ ಒಂದೊಂದು ಮುಖ ಹಾಗೂ ಮೇಲ್ಮುಖವಾಗಿ ಒಂದು ಸುಂದರವಾದ ಶಿವನ ಮುಖವು ರಾರಾಜಿಸಲ್ಪಡುತ್ತಿದೆ. ಇದೇ ತಲ್ಲೂರ ಗ್ರಾಮದ ಶ್ರೀ ಕಾಶಿವಿಶ್ವನಾಥ ದೇವರ ವೈಶಿಷ್ಟ್ಯಪೂರ್ಣವಾದ ಇಂತಹ ಮಹಿಮೆಯು ಸದ್ಭಕ್ತರಿಗೆ ಅತ್ಯಕರ್ಷಕವಾಗಿ ಮನಸೂರೆಗೊಳ್ಳುವಂತೆ ಮಾಡಿದ್ದು ಐತಿಹಾಸಿಕ ಸಂಗತಿ.

ಉತ್ತರ ಪ್ರದೇಶದಲ್ಲಿರುವ ಕಾಶಿಗೂ ಹಾಗೂ ತಲ್ಲೂರಿಗೂ ಎತ್ತಿಂದೆತ್ತಣ ಸಂಬಂಧ ..!? ಎಂಬ ಪ್ರಶ್ನೆಗೆ ಈ ದೇವಸ್ಥಾನದ ಐತಿಹಾಸಿಕ ಹಿನ್ನೆಲೆಯನ್ನು ಹಾಗೂ ಕೆಲವು ನೈಜ ಘಟನೆಗಳನ್ನು ಕೆದಕಿ ಹುಡುಕಿದಾಗ ಅತ್ಯಂತ ನಿಕಟ ಸಂಬಂಧ ಇರುವುದು ಖಚಿತವಾಗುತ್ತದೆ.ತಲ್ಲೂರು ಗ್ರಾಮವು ಎರಡನೆಯ ಕಾಶಿ ಎಂಬ ಬಿರುದನ್ನು ಪಡೆಯುವಲ್ಲಿ ಈ ಒಂದು ಪುರಾತನ ಘಟನೆಯು ಕಾರಣವೆಂದು ಹೇಳಲಾಗುತ್ತದೆ.
ಸುಮಾರು ೧೬-೧೭ನೇ ಶತಮಾನದಲ್ಲಿ ಈ ಒಂದು ಪ್ರಾಂತ್ಯದ ಆಗಿನ ದೊರೆಯು ಕಾಶಿಯಿಂದ ಒಂದು ಪಂಚಮುಖಿ ಶಿವಲಿಂಗವನ್ನು ತಂದು ಪ್ರತಿಷ್ಠಾಪನೆ ಮಾಡಲು ನಿರ್ಧರಿಸುತ್ತಾನೆ ಆದರೆ ಪಾನಬಟ್ಟಲು ಸಿಗದ ಕಾರಣ ಚಿಂತಾಕ್ರಾಂತನಾಗುತ್ತಾನೆ.ಆಗ ಒಂದು ದಿನ ರಾಜನ ಕನಸಿನಲ್ಲಿ ಶಿವನು ಬಂದು ತಲ್ಲೂರು ಎಂಬ ಗ್ರಾಮದ ದೇಸಾಯರ ಹೊಲದಲ್ಲಿ ಪಾನಬಟ್ಟಲು ಇದೆ ಎಂದು ಅಂತರ್ವಾಣಿಯಾಗುತ್ತದೆ. ಕೂಡಲೇ ರಾಜನು ತನ್ನ ದಂಡು-ದೌಲತ್ತುಗಳನ್ನು ತೆಗೆದುಕೊಂಡು ತಲ್ಲೂರು ಗ್ರಾಮಕ್ಕೆ ಬಂದು ಪುರಾತನ ಬಾವಿಯ ಆಳದಲ್ಲಿ ಇದ್ದ ಶಿವನು ಹೇಳಿದ ಜಾಗೆಯಲ್ಲಿ ಪಾನಬಟ್ಟಲನ್ನು ಹುಡುಕಿ ತಾನು ತಂದಿದ್ದ ಕಾಶಿ ವಿಶ್ವನಾಥನ ಮೂರ್ತಿಯನ್ನು ಇದಕ್ಕೆ ಜೋಡಿಸಲಾಗಿ ಒಂದಕ್ಕೊಂದು ಕೂದಲೆಳೆಯಷ್ಟು ವ್ಯತ್ಯಾಸವಿಲ್ಲದೆ ಹೊಂದಿಕೊಂಡವೆಂದು ಪುರಾಣಗಳು ಸಾರಿ ಸಾರಿ ಹೇಳುತ್ತವೆ..!
ಅಷ್ಟೇ ಅಲ್ಲ..!!ಅವುಗಳ ಬಣ್ಣವೂ ಕೂಡಾ ಒಂದೇ ತೆರನಾಗಿತ್ತು ಎಂಬುದು ಇನ್ನೂ ಆಶ್ಚರ್ಯಕರವಾದ ಸಂಗತಿಯಾಗಿತ್ತು ಇದೊಂದು ಅದ್ಭುತವಾದ ಪವಾಡವೇನೊ ಎಂಬಂತೆ ಕೂಡಲೇ ರಾಜನು ಇಲ್ಲಿಯೇ ಅಂದರೆ ತಲ್ಲೂರು ಗ್ರಾಮದಲ್ಲಿಯೇ ಕಾಶಿವಿಶ್ವನಾಥ ದೇವರನ್ನು ಅತ್ಯಂತ ಸಡಗರ, ಸಂಭ್ರಮದಿಂದ ಪ್ರತಿಷ್ಠಾಪನೆ ಮಾಡಿ ಪ್ರತಿವರ್ಷವೂ ತನ್ನ ಇಡೀ ಸಂಸ್ಥಾನವನ್ನು ಕರೆದುಕೊಂಡು ಬಂದು ಜಾತ್ರೆಯಲ್ಲಿ ಪಾಲ್ಗೊಂಡು ವಿಜೃಂಭಣೆಯಿಂದ ಇಲ್ಲಿನ ಭಕ್ತರ ಜೊತೆಯಲ್ಲಿ ಸೇರಿಕೊಂಡು ಜಾತ್ರೆಯನ್ನು ಮಾಡಿ ಆಚರಿಸಿ ಹೋಗುತ್ತಿದ್ದನೆಂದು ಪ್ರತೀತಿಗಳು ಸಾಬೀತು ಮಾಡಿವೆ.ಆ ಪ್ರಯುಕ್ತ ಪ್ರತಿವರ್ಷವೂ ಶ್ರೀ ಕಾಶಿವಿಶ್ವನಾಥ ದೇವರ ಜಾತ್ರೆಯು ಅತ್ಯಂತ ವೈಶಿಷ್ಟ್ಯಪೂರ್ಣವಾಗಿ,ಸೊಗಸಾಗಿ,ನಿರಾತಂಕವಾಗಿ ಸಾಗುತ್ತಿರುವುದೆಂದು ಸ್ಥಳೀಯ ಪುರಾಣ ಕಥೆಗಳಿಂದ ತಿಳಿದುಬರುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಪುರಾಣ ಪ್ರವಚನ ಕಾರ್ಯಕ್ರಮಗಳು ನಡೆಯುತ್ತಿದ್ದು ಜನರು ತಂಡೋಪತಂಡವಾಗಿ ತಲ್ಲೂರಿಗೆ ಆಗಮಿಸುತ್ತಿದ್ದಾರೆ. ಶಿವರಾತ್ರಿಯ ಶುಭದಿನದಂದು ಭಯಭಕ್ತಿಯಿಂದ ಜಾಗರಣೆ ನಂತರ ಬೆಳಿಗ್ಗೆ ಉಷಃಕಾಲದಲ್ಲಿ ಅಭಿಷೇಕ ನಡೆಯುತ್ತದೆ.ಆನಂತರ ಷ.ಬ್ರ.ಶ್ರೀ ಶ್ರೀ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಸಂಸ್ಥಾನ ಹಿರೇಮಠ ಯಲಬುರ್ಗಾ ಇವರ ದಿವ್ಯಸಾನ್ನಿಧ್ಯದಲ್ಲಿ ಪುರಾಣ ಮಂಗಲೋತ್ಸವ ಹಾಗೂ ಜಾತ್ರೆಯ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಶ್ರೀಗಳ ದಿವ್ಯಸಾನ್ನಿದ್ಯದಲ್ಲಿ ನಡೆಯುತ್ತವೆ ನಂತರ ಅತ್ಯಂತ ವಿಜೃಂಭಣೆಯಿಂದ ನಡೆಯುವ ಕುಂಭಮೇಳವನ್ನು ನೋಡಲು ಎರಡು ಕಣ್ಣು ಸಾಲದು.
ಅಮವಾಸ್ಯೆಯ ಮರುದಿನ ಅಂದರೆ ಪಾಡ್ಯದ ತಿಥಿಯ ದಿನದಂದು(11/03/2024) ನಡೆಯುವ ಸಾಮೂಹಿಕ ವಿವಾಹಗಳನ್ನು ಶ್ರೀಗಳ ಸಮ್ಮುಖದಲ್ಲಿ ಮಾಡಿಕೊಡುವ ಪುಣ್ಯದ ಕೆಲಸವನ್ನು ಇಲ್ಲಿನ ಭಕ್ತ ಸಮೂಹವು ನಡೆಸಿಕೊಂಡು ಬಂದಿದೆ.
ಈ ವರ್ಷದ ಪುರಾಣ ಮಂಗಲದ ರಜತೋತ್ಸವದ ಅಂಗವಾಗಿ ಅದೇ ದಿನ ಸಾಯಂಕಾಲ ಸುಮಾರು ರೂ.30-35 ಲಕ್ಷದಲ್ಲಿ ನೂತನವಾಗಿ ನಿರ್ಮಾಣಗೊಂಡ ಅತ್ಯುತ್ತಮ ಗುಣಮಟ್ಟದ,ವೈಶಿಷ್ಟ್ಯಪೂರ್ಣವಾದ ರಥವು ಲೋಕಾರ್ಪಣೆಗೊಳ್ಳಲಿದ್ದು ಭರ್ಜರಿಯಾಗಿಯೇ ರಥೋತ್ಸವ ಕಾರ್ಯಕ್ರಮ ನಡೆಯಲಿದೆ.ಜಾತ್ರೆಯ ನಿಮಿತ್ತವಾಗಿ ವಿವಿಧ ಕ್ರೀಡಾಸ್ಪರ್ಧೆಗಳು,ರಸಪ್ರಶ್ನೆ ಹಾಗೂ ನಾಟಕಗಳನ್ನು ಏರ್ಪಡಿಸಿ ಜಾತ್ರೆಯ ಮೆರಗನ್ನು ಎಲ್ಲೆಡೆಯಲ್ಲೂ ಪಸರಿಸುವಂತೆ ಮಾಡಿದ ಕೀರ್ತಿ ಈ ಗ್ರಾಮದ ಜನರಿಗೆ ಸಲ್ಲುತ್ತದೆ.
ಇದರಲ್ಲಿ ಸುತ್ತಮುತ್ತಲಿನ ಗ್ರಾಮಗಳಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಸಾಗರೋಪಾದಿಯಲ್ಲಿ ಬಂದು ಪಾಲ್ಗೊಂಡು ಕಾಶಿ ವಿಶ್ವನಾಥನ ದರ್ಶನಾಶೀರ್ವಾದ ಪಡೆದು ಪುನೀತರಾಗುತ್ತಾರೆ. ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಈಡೇರಿಸುವರಿಂದಲೇ ಈ ಗ್ರಾಮವು ಎರಡನೆಯ ಕಾಶಿ ಎಂದು ಪ್ರಸಿದ್ಧಿ ಪಡೆದು ಗಮನ ಸೆಳೆಯುತ್ತಿದೆ.
ಕಾಶಿಗೆ ಹೋಗಲು ಆಗದವರು ತಲ್ಲೂರಿಗೆ ಬಂದು ಕಾಶಿ ವಿಶ್ವನಾಥನ ದರ್ಶನವನ್ನು ಮಾಡಿದರೆ ಕಾಶಿಗೆ ಹೋಗಿಬಂದಷ್ಟೇ ಪುಣ್ಯಫಲ ಪ್ರಾಪ್ತವಾಗುತ್ತದೆಂಬುದು ಭಕ್ತಸಮೂಹದ ಬಲವಾದ ನಂಬಿಕೆಯಾಗಿದೆ.ಎಲ್ಲಾ ಸದ್ಭಕ್ತರು ತಮ್ಮ ಬೇಡಿಕೆಗಳನ್ನು,ಆಶೋತ್ತರಗಳನ್ನು ನೆರವೇರಿಸಿಕೊಳ್ಳಲು ಈ ಕೂಡಲೇ ತಾವು ಕೂಡಾ ತಲ್ಲೂರಿನ ಶ್ರೀ ಕಾಶಿವಿಶ್ವನಾಥನ ಜಾತ್ರೆಗೆ ಬನ್ನಿ..!! ಭಗವಂತನ ಶುಭಾಶೀರ್ವಾದದೊಂದಿಗೆ ಪುನೀತರಾಗಿ..!!!

ಚಿತ್ರ-ಲೇಖನ:
ಶ್ರೀನಿವಾಸ.ಎನ್.ದೇಸಾಯಿ ತಲ್ಲೂರು,ಶಿಕ್ಷಕರು.
ಸ.ಮಾ.ಹಿ.ಪ್ರಾ.ಶಾಲೆ ವಿದ್ಯಾನಗರ ಕುಷ್ಟಗಿ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ