
ಭವ್ಯ ಮೆರವಣಿಗೆಯೊಂದಿಗೆ ವಿಸರ್ಜನೆ : ಹತ್ತು ದಿನಗಳ ಸಂಭ್ರಮದ ಮೋಹರಂಗೆ ತೆರೆ
ಬಳ್ಳಾರಿ / ಕಂಪ್ಲಿ : ಹಿಂದೂ-ಮುಸ್ಲಿಂರ ಭಾವೈಕ್ಯತೆಯ ಹಬ್ಬವಾಗಿರುವ ಮೊಹರಂ ಹಬ್ಬವನ್ನು ಕಂಪ್ಲಿ ತಾಲೂಕಿನಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಿ ಭಾನುವಾರ ಸಂಜೆ ಪೀರಲು (ಪಂಜಾ) ದೇವರುಗಳ ಮೆರವಣಿಗೆ ವಿಜೃಂಭಣೆಯಿಂದ ಮಾಡುವ ಮೂಲಕ ಹತ್ತು ದಿನಗಳ ಮೋಹರಂ ಹಬ್ಬಕ್ಕೆ ಅಂತಿಮ ತೆರೆ ಎಳೆಯಲಾಯಿತು.
ಪಟ್ಟಣ ಹಾಗೂ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳು ಸೇರಿದಂತೆ ಎಲ್ಲೆಡೆ ಮೊಹರಂ ಹಬ್ಬದ ಸಡಗರ ಮನೆ ಮಾಡಿತ್ತು, ವಿವಿಧೆಡೆ ಹಿಂದೂ-ಮುಸ್ಲಿಂರು ಜೊತೆಯಾಗಿ ಅಲಾಯಿ ದೇವರನ್ನು (ಪಂಜಾ) ಪ್ರತಿಷ್ಠಾಪಿಸಿದ್ದರು. ಸಕ್ಕರೆ, ಬೆಲ್ಲ ಸಮರ್ಪಿಸಿ ಪೂಜೆ ಸಲ್ಲಿಸಿದರು. ಮೊಹರಂ ಹಬ್ಬದಲ್ಲಿ ಹುಲಿಗಳ ಆರ್ಭಟ ಜೋರಾಗಿತ್ತು. ಮೊಹರಂ ಹಬ್ಬದ ನಿಮಿತ್ಯ ಭಕ್ತರು ಬೇಡಿಕೆ ಪೂರೈಯಿಸಿಕೊಳ್ಳಲು ದೇವರಲ್ಲಿ ಹರಕೆ ತೀರಿಸಲು ಹುಲಿ ವೇಷವನ್ನು ತೊಟ್ಟು, ದೇವರ ಮುಂದೆ ಹುಲಿ ನೃತ್ಯವಾಡುತ್ತಾ ಹರಕೆ ತೀರಿಸಿದರು. ಕತಲ್ ರಾತ್ರಿ ಪ್ರಯುಕ್ತ ಕತ್ತಲ ರಾತ್ರಿ ಶುಕ್ರವಾರ ಬೆಳಗಿನ ಜಾವದಲ್ಲಿ ದೇವರುಗಳನ್ನು ಎದ್ದೇಳಿಸಿ, ಅಗ್ನಿಕೆಂಡದಲ್ಲಿ ಹಾಯ್ದ ನಂತರ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಮರಳಿ ಮಸೀದಿಗಳಲ್ಲಿ ಕೂರಿಸಲಾಯಿತು. ಮೆರವಣಿಗೆ ಸಂದರ್ಭದಲ್ಲಿ ಭಕ್ತರು ಪೀರಲು ದೇವರುಗಳಿಗೆ ನೀರೆರೆದು ಸಕ್ಕರೆ ಓದಿಸಿ ದರ್ಶನ ಪಡೆದುಕೊಂಡರು. ಹಲಗೆ ನಾದಕ್ಕೆ ಪೀರಲು ದೇವರುಗಳು ಸಹ ಹೆಜ್ಜೆ ಹಾಕುತ್ತಿರುವುದು ಕಂಡು ಬಂತು.
ಮೊದರಂ ಕೊನೆ ದಿನವಾದ ಶುಕ್ರವಾರ ಸಂಜೆ ಪೀರಲು ದೇವರುಗಳ ಮೆರವಣಿಗೆ ಕಂಪ್ಲಿ ಪಟ್ಟಣ, ಕೋಟೆಯಲ್ಲಿ ಅದ್ದೂರಿಯಾಗಿ ಹಾಗೂ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಾದ ಸಣಾಪುರ, ನಂ.10 ಮುದ್ದಾಪುರ, ರಾಮಸಾಗರ, ದೇವವಮುದ್ರ, ಮೆಟ್ರಿ, ದೇವಲಾಪುರ, ಹಂಪಾದೇವನಹಳ್ಳಿ, ಸುಗ್ಗೇನಹಳ್ಳಿ, ನೆಲ್ಲುಡಿ, ಎಮ್ಮಿಗನೂರು ಸೇರಿದಂತೆ ಗ್ರಾಮಗಳಲ್ಲಿ ವಿಜೃಂಭಣೆಯಿಂದ ಜರುಗಿತು.
ಹಿಂದೂ-ಮುಸ್ಲಿಂರು ಭಾವೈಕತೆ ಸಂಕೇತವಾಗಿರುವ ಮೊಹರಂ ಹಬ್ಬದಲ್ಲಿ ಪೀರಲು ದೇವರುಗಳ ಶುಭಾಷಯ ವಿನಿಮಯ ಮಾಡಿಕೊಳ್ಳುವ ಸಂದರ್ಭದಲ್ಲಿ ಭಕ್ತರು ದೇವರ ಮೇಲೆ ಮಂಡಾಳು ಎಸೆದು ಪುನೀತರಾದರು. ಮತ್ತು ನಾಡಿನಲ್ಲಿ ಉತ್ತಮ ಮಳೆ, ಬೆಳೆ ಆಗಲೆಂದು ಪ್ರಾರ್ಥಿಸಿದರು. ಈ ಹಬ್ಬವು ಮುಸ್ಲಿಂ ಸಮುದಾದ ದುಖದ ಹಬ್ಬವಾದರೂ ಸಹಿತ ಹಿಂದೂಗಳ ಸಂಭ್ರಮದಿಂದ ಆಚರಿಸುತ್ತಾರೆ. ಪೀರಲ ದೇವರು( ಪಂಜಾ)ಗಳಿಗೆ ಹಿಂದೂ ದೇವರಾದ ಬೆಳ್ಳಿ ಹಾಗೂ ಚಿನ್ನದ ನಾಗಪ್ಪ ವಿಗ್ರಹಗಳಿಂದ ಅಲಂಕರಿಸಿರುತ್ತಾರೆ. ನಂತರ ಹತ್ತಿರದ ಕಾಲುವೆ ಹಾಗೂ ಇತರೆ ಕಡೆಗಳಲ್ಲಿ ತೆರಳಿ ವಿಸರ್ಜನೆಗೊಂಡ ನಂತರ ಮೊಹರಂ ಹಬ್ಬದ ಸಂಭ್ರಮಕ್ಕೆ ತೆರೆ ಬಿತ್ತು. ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ರಾತ್ರಿ ವೇಳೆ ಹಬ್ಬ ಮುಕ್ತಾಯವಾದರೂ ಸಹಿತ ಪಟ್ಟಣದಲ್ಲಿ ಮಾತ್ರ ರಾತ್ರಿಯವರೆಗೂ ಪೀರಲ ದೇವರುಗಳ ಮೆರವಣಿಗೆ ನಡೆದಿತ್ತು.
ಚಿಕ್ಕಜಂತಕಲ್ : ತಾಲೂಕು ಸಮೀಪದ ಚಿಕ್ಕಜಂತಕಲ್ ಗ್ತಾಮದಲ್ಲಿ ಮೊಹರಂ ಹಬ್ಬದ ಪೀರಲು ದೇವರುಗಳ ಭವ್ಯ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು. ನಂತರ ಗ್ರಾಮದಲ್ಲಿ ತಮಟೆ ನಾದ, ಯುವಕರ ಕುಣಿತ, ಹೀಗೆ ಮೆರವಣಿಗೆ ಮೂಲಕ ಪೀರಲು ದೇವರ ವಿಸರ್ಜನೆ ಮೂಲಕ ಹಬ್ಬಕ್ಕೆ ತೆರೆ ಎಳೆಯಲಾಯಿತು.
ವರದಿ : ಜಿಲಾನಸಾಬ್ ಬಡಿಗೇರ್




















