ಕಲಬುರಗಿ: ಇದೇ 17ರಂದು ಜಿಲ್ಲೆಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ವರ್ಗೀಕರಣ ಘೋಷಣೆ ಮಾಡಬೇಕು ಎಂದು ಮಾದಿಗ ಸಮಾಜದ ಮುಖಂಡ ರವಿ ಸಿಂಗೆ ಅರಣಕಲ್ ಅವರು ಒತ್ತಾಯಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,ತಮ್ಮ ಹಕ್ಕು ಪಡೆಯಲು ಒಳ ಮೀಸಲಾತಿ ವರ್ಗೀಕರಣಕ್ಕಾಗಿ ನಡೆದ ಹೋರಾಟ ಹಾಗೂ ತ್ಯಾಗ ಬಲಿದಾನಕ್ಕೆ ಸುಪ್ರೀಂ ಕೋರ್ಟ್ ತೀರ್ಪಿನಿಂದ ಜಯ ಸಿಕ್ಕಂತಾಗಿದೆ. ತಲೆ ತಲೆಮಾರಿನಿಂದ ತುಳಿತಕ್ಕೊಳಗಾಗಿ ಮೀಸಲಾತಿಯ ಸರ್ಕಾರದ ಸರಿಯಾದ ಪ್ರಯೋಜನ ಪಡೆಯಲಾಗದೆ ನೋವು ಅನುಭವಿಸುತ್ತಿದ್ದ ಪರಿಶಿಷ್ಟ ಜಾತಿ/ಪಂಗಡದ ಜನಾಂಗ ಒಳ ಮೀಸಲಾತಿಗಾಗಿ ನಡೆದ ಸುದೀರ್ಘ ಹೋರಾಟದಲ್ಲಿ ಹಲವರ ತ್ಯಾಗ ಬಲಿದಾನದ ಫಲವಾಗಿ ಸುಪ್ರೀಂ ಕೋರ್ಟ್ ಸಿಜೆಐ ಚಂದ್ರಚೂಡ್ ನೇತೃತ್ವದ 7 ಸದಸ್ಯರ ಪೀಠವು ಒಳ ಮೀಸಲಾತಿ ನೀಡುವ ಪ್ರಸ್ತಾವವನ್ನು ಎತ್ತಿ ಹಿಡಿದು, ಒಳ ಮೀಸಲಾತಿ ಸಂವಿಧಾನ ಬಾಹಿರ ಕ್ರಮವಲ್ಲ, ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು ಎನ್ನುವದು ಸಂವಿಧಾನದ ಮೂಲ ಮಂತ್ರವಾಗಿದೆ. ಕೂಡಲೇ ಕರ್ನಾಟಕ ಸರಕಾರ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಈ ಮೀಸಲಾತಿ ಕ್ರಮವನ್ನು ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಲಬುರಗಿ ಜಿಲ್ಲೆಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಘೋಷಣೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.




















