
ಹಂಪಿಯ ಘಟಿಕೋತ್ಸವ ಸಮಾರಂಭದಲ್ಲಿ
ಡಾಕ್ಟರೇಟ್ ಪದವಿ ಪಡೆದ ಸಂದರ್ಭದಲ್ಲಿ…
ಮಹಾಂತೇಶ ನೆಲಾಗಣಿ ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮದವರು. ಈ ಗ್ರಾಮದ ಬಸಪ್ಪ ಮತ್ತು ಕಲ್ಲಮ್ಮ ದಂಪತಿಗಳ ಐದು ಜನ ಮಕ್ಕಳಲ್ಲಿ ಕೊನೆಯ ಕುಡಿಯೇ ಈ ಮಹಾಂತೇಶ.
ಬಡತನ, ಮತ್ತು ರೈತಾಪಿ ಕುಟುಂಬದಿಂದ ಬಂದ ಮಹಾಂತೇಶ ನೆಲಾಗಣಿ ಅವರು ಜನಿಸಿದ್ದು, ೧೯೮೧ರ ಜೂನ್ ೧ರಂದು. ಇವರ ತಂದೆ
ಹೆಚ್ಚೇನೂ ಓದಿದವರಲ್ಲ, ಕೇವಲ ೬ನೇ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿ,ಹಲವಾರು ಕಾರಣಾಂತರಗಳಿಂದ ಅಭ್ಯಾಸಕ್ಕೆ ಸಲಾಂ ಹೊಡೆದು ಜೀವನ ನಿರ್ವಹಣೆಗೆ, ಬಂಡಿ, ನಾಗೂರು ಹಾಗೂ ಕಂದಗಲ್ ಗ್ರಾಮಗಳಲ್ಲಿ ಕಿರಾಣಿ ಅಂಗಡಿಯ ವ್ಯಾಪಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇವರ ತಾಯಿಯವರು ಸಂಸ್ಕಾರಯುತ ಮಹಿಳೆಯಾಗಿ, ತಮಗೆ ವಿದ್ಯೆ ಇಲ್ಲವಾದರೂ, ತಮ್ಮ ಮಕ್ಕಳಾದರೂ ವಿದ್ಯಾವಂತರಾಗಿ, ಸಮಾಜದಲ್ಲಿ, ಉನ್ನತ ಸ್ಥಾನಕ್ಕೇರಲಿ ಎಂಬ ಸದಾಶಯ ಹೊಂದಿದವರು. ಇದಕ್ಕೆ ಉತ್ತಮ ನಿದರ್ಶನ, ಮಹಾಂತೇಶ ನೆಲಾಗಣಿಯವರು.

“ಮಾನಸ ಸಿರಿ ” ಪುರಸ್ಕೃತ ನೆಲಾಗಣಿ.
ಮಹಾಂತೇಶ ನೆಲಾಗಣಿಯವರು ತಮ್ಮ ಪ್ರಾಥಮಿಕ, ಮತ್ತು ಪ್ರೌಢ ಶಿಕ್ಷಣವನ್ನು ಬಂಡಿ ಗ್ರಾಮದ ಸರಕಾರಿ ಶಾಲೆಗಳಲ್ಲಿ ಪೂರೈಸಿ ಪದವಿಪೂರ್ವ ಮತ್ತು ಪದವಿ ಶಿಕ್ಷಣವನ್ನು ಗಜೇಂದ್ರಗಡದ ಎಸ್.ಎಂ.ಭೂಮರಡ್ಡಿ ಕಾಲೇಜಿನಲ್ಲಿ ,ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಬಿ.ಎ.ಪದವೀಧರಾದರು. ಗದುಗಿನ ಪ್ರತಿಷ್ಠಿತ ಡಿ .ಸಿ .ಪಾವಟೆ ಶಿಕ್ಷಣ ಮಹಾ ವಿದ್ಯಾಲಯದಿಂದ ಬಿ. ಈಡಿ. ಪದವಿಯನ್ನು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ, ಮುಂದೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮೈಸೂರಿನಿಂದ ಎಂ. ಎ. ಕನ್ನಡ, ಪದವಿ ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಇತಿಹಾಸ ವಿಷಯದಲ್ಲಿ ಪದವಿ ಪಡೆದು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ತತ್ವಪದಕಾರ ಮಾರೆಪ್ಪ ಚೆನ್ನದಾಸರ ಎಂಬ ಸಂಶೋಧನಾ ಕಿರು ಹೊತ್ತಿಗೆ, (ಎಂ.ಫಿಲ್) ರಚಿಸಿ, ಎಂ.ಫಿಲ್, ಪದವೀಧರರಾಗಿದ್ದಾರೆ.
ಅವರು ಬರೆದ ಈ ಕೃತಿಯ ತತ್ವಪದ ಹಾಡುಗಾರ ಮಾರೆಪ್ಪ ಚೆನ್ನದಾಸರ ಇವರಿಗೆ, ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಸಿರಿ, ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಸಂದಿರುವುದು ವಿಶೇಷ.
ಈ ನಾಡಿನ ವಿದ್ವತ್ ವಲಯದಲ್ಲಿ ತಮ್ಮನ್ನು ಗುರುತಿಸಿಕೊಳ್ಳುವ ಪ್ರಯತ್ನದಲ್ಲಿಯೂ ಮಹಾಂತೇಶ ನೆಲಾಗಣಿಯವರು ಯಶಸ್ವಿ ಆಗಿದ್ದಾರೆ ಎಂಬುದಕ್ಕೆ ಇವರು ಇತ್ತೀಚೆಗೆ ಕೈವಲ್ಯ ಸಾಹಿತ್ಯಕ್ಕೆ ಕೂಡಾ ಅಪಾರ ಕೊಡುಗೆ ನೀಡಿದ ಇವರು ನಿಜಗುಣ ಶಿವಯೋಗಿಗಳು, ಮುಪ್ಪಿನ ಷಡಕ್ಷರಿಗಳು, ಸರ್ಪ ಭೂಷಣ
ಶಿವಯೋಗಿಗಳು ಹಾಗೂ ಬಾಲಲೀಲಾ ಮಹಾಂತ ಶಿವಯೋಗಿಗಳನ್ನು ಅನುಲಕ್ಷಿಸಿ , “ಕೈವಲ್ಯ ಸಾಹಿತ್ಯದ
ತಾತ್ವಿಕ ಸ್ವರೂಪ,” ಎಂಬ ವಿಷಯದ ಮೇಲೆ ಸಂಶೋಧನೆ ಕೈಗೊಂಡು ಮಹಾ ಪ್ರಬಂಧವನ್ನು ಸಿದ್ಧಪಡಿಸಿ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ, ಪಿಎಚ್. ಡಿ ಪದವಿ ಪಡೆದಿದ್ದಾರೆ. ಈ ಕೃತಿ ಹೊರ ಹೊಮ್ಮುವಲ್ಲಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರು, ಕನ್ನಡ ಪ್ರಾಧ್ಯಾಪಕರು ಹಾಗೂ ಸಾಹಿತಿಗಳು ಆಗಿರುವ ಡಾ. ಸಿ. ಬಿ. ಚಿಲ್ಕರಾಗಿಯವರ
ಸಮರ್ಥ ಮಾರ್ಗದರ್ಶನವೂ ಇದೆ. “ಪ್ರತಿಭೆ ಗುಡಿಸಲಿನಲ್ಲಿ ಅರಳುತ್ತದೆ” ಎಂಬ ಒಂದು ಮಾತಿದೆ, ಈ ಮಾತಿಗೆ ಉತ್ತಮ ನಿದರ್ಶನವಾಗಿ ಮಹಾಂತೇಶ ನೆಲಾಗಣಿಯವರಿದ್ದಾರೆ, ಎಂದರೆ ಅದು ಅತಿಶಯೋಕ್ತಿಯಲ್ಲ. ಇದಕ್ಕೆ ಇವರು ನಿರ್ವಹಿಸಿದ ಅನೇಕ ಸಮಾಜಮುಖಿ ಕಾರ್ಯಗಳೇ ಸಾಕ್ಷಿಯಾಗಿವೆ. ಉದಾಹರಣೆಗೆ ಕೊಪ್ಪಳ ಜಿಲ್ಲಾ ತಿರುಳ್ಗನ್ನಡ ಸಾಹಿತಿಗಳ ಸಹಕಾರಿ ಸಂಘದ ಸದಸ್ಯ, ಬಂಡಿಯ ಶ್ರೀ ಶರಣ ಬಸವೇಶ್ವರ ಯುವಕ ಮಂಡಳದ ಕಾರ್ಯದರ್ಶಿ , ಯಲಬುರ್ಗಾ ತಾಲೂಕ ಮಾನವ ಹಕ್ಕುಗಳ ಜಾಗೃತ ಸಮಿತಿಯ ಗೌರವಾಧ್ಯಕ್ಷ, ಶ್ರೀ ಶರಣ ಬಸವೇಶ್ವರ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಬಂಡಿಯ ಸಂಸ್ಥಾಪಕ ಕಾರ್ಯದರ್ಶಿಯಾಗಿ ಸತತ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿ, ಪ್ರಸ್ತುತ ಆ ಸಂಸ್ಥೆಯ ಆಡಳಿತ ಅಧಿಕಾರಿಗಳಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಇಷ್ಟೇ ಅಲ್ಲದೆ ಹೈದ್ರಾಬಾದ್ ಕರ್ನಾಟಕ ಕೊಪ್ಪಳ ಜಿಲ್ಲಾ ವ್ಯಾಪ್ತಿಯ ಅತಿಥಿ ಉಪನ್ಯಾಸಕ ಸಂಘದ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಅಖಿಲ ಭಾರತ ವೀರಶೈವ ಮಹಾಸಭಾ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ “ಕಾಯಕಯೋಗಿ” ಕಳಕನಗೌಡ ಪಾಟೀಲ, ಸಾಕೀನ್ ಕಲ್ಲೂರು, ಇವರ ಅಭಿಮಾನಿ ಬಳಗದ ಪ್ರಧಾನ ಕಾರ್ಯದರ್ಶಿಯಾಗಿ, ಅಖಂಡ ಯಲಬುರ್ಗಾ ತಾಲೂಕಿನ 144ಕ್ಕಿಂತಲೂ ಹೆಚ್ಚು ಹಳ್ಳಿಗಳಲ್ಲಿ ಸಂಚರಿಸಿ ,ಕೋವಿಡ್ 19ರ ಸಮಯದಲ್ಲಿ ಜನರಿಗೆ ತೊಂದರೆ ಉಂಟಾದಾಗ , ಜನತೆಗೆ ಮಾಸ್ಕ್, ಹಣ್ಣು, ಹಂಪಲುಗಳನ್ನು ವಿತರಣೆ ಮಾಡಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇಷ್ಟೇ ಅಲ್ಲದೆ
2020-21ನೇಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್.ಎಲ್. ಸಿ, ಮತ್ತು ಪಿ .ಯು. ಸಿ. ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಯಲಬುರ್ಗಾ ತಾಲೂಕಿನ ಎಲ್ಲಾ ಹಳ್ಳಿಗಳ ವಿದ್ಯಾರ್ಥಿ ಗಳಿಗೆ ಅಭಿಮಾನಿ ಬಳಗದಿಂದ ಕೊಡಮಾಡುವ ಪ್ರಶಸ್ತಿ ಪತ್ರ ಹಾಗೂ ಸನ್ಮಾನ ಕಾರ್ಯಕ್ರಮ ಆಯೋಜಿಸಿ ನಿರೂಪಣೆ ಮಾಡಿದ್ದಾರೆ.
ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಕೊಪ್ಪಳ ಘಟಕದ ಜಿಲ್ಲಾ ಖಜಾಂಚಿ, ಜನಸೇವಾ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ(ರಿ.) ಇಟಗಿಯ ಸದಸ್ಯರು , ಕನ್ನಡ ಜಾನಪದ ಪರಿಷತ್ ಯಲಬುರ್ಗಾ ತಾಲೂಕಿನ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಕೊಪ್ಪಳ ಜಿಲ್ಲಾ ಪಂಚ ಸೇನೆಯ ಪ್ರಧಾನ ಕಾರ್ಯದರ್ಶಿಯಾಗಿ
ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯತ್ವ ಹೊಂದಿದ್ದಾರೆ, ಇತ್ತೀಚೆಗೆ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯನ್ನಾಗಿ , ರಾಜ್ಯ ಸಂಚಾಲಕರಾದ ಮೈಸೂರಿನ ಡಾ|| ಎಂ .ಜಿ. ಆರ್. ಅರಸ್ ಅವರು ನೇಮಕ ಮಾಡಿದ್ದಾರೆ. ಡಾ.ಮಹಾಂತೇಶ ನೆಲಾಗಣಿಯವರು ಸುಮ್ಮನೇ ಕೂಡುವ ಜಾಯಮಾನದವರಲ್ಲ, ರಜಾ ಅವಧಿಯಲ್ಲಿ , ವಿದ್ಯಾರ್ಥಿಗಳಿಗೆ ಬೇಸಿಗೆ ತರಬೇತಿ ಶಿಬಿರ ನಡೆಸಿದ ಅನುಭವ ಕೂಡಾ ಇವರಿಗಿದೆ , ತಮ್ಮ ಹುಟ್ಟೂರಾದ ಬಂಡಿಯಲ್ಲಿ ಸ್ವಾಮಿ ವಿವೇಕಾನಂದ ಕೋಚಿಂಗ್ ಕ್ಲಾಸಸ್, ಶ್ರೀ ವಾಗ್ದೇವಿ, ಶ್ರೀ ಶರಣ ಬಸವೇಶ್ವರ ಹಾಗೂ ಚಿನ್ಮಯಿ, ನವೋದಯ ಕೋಚಿಂಗ್ ಕ್ಲಾಸಸ್ ವ್ಯವಸ್ಥಾಪಕ ಹಾಗೂ ಸಂಕಲ್ಪ ಕೋಚಿಂಗ್ ಕ್ಲಾಸಸ್ ತರಬೇತಿದಾರರಾಗಿ ಅನೇಕ ವರ್ಷಗಳ ಕಾಲ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಅತೀ ಕಡಿಮೆ ಶುಲ್ಕ ಪಡೆದು, ಟ್ಯೂಷನ್ ಕ್ಲಾಸ್ ಮಾಡಿ, ಬಹಳಷ್ಟು ಬಡ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ.
ಇಷ್ಟೇ ಅಲ್ಲದೇ ಭಾಗ್ಯನಗರದಲ್ಲಿ, ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ಸಂಕಲ್ಪ, ಕೋಚಿಂಗ್ ಸೆಂಟರ್
ಮೂಲಕ ತರಬೇತಿ ನೀಡಿದ್ದಾರೆ ಪ್ರಸಕ್ತ ವರ್ಷ ಬಂಡಿ ಗ್ರಾಮದಲ್ಲಿ ಸಂಕಲ್ಪ ಕೋಚಿಂಗ್ ಕ್ಲಾಸ್ ನ ಶೈಕ್ಷಣಿಕ ನಿರ್ದೇಶಕರಾಗಿದ್ದಾರೆ.
” ಶಿಕ್ಷಕ ತರಗತಿಯಲ್ಲಿರಬೇಕು, ಇಲ್ಲವೇ ತರಬೇತಿಯಲ್ಲಿರಬೇಕು ” ಅನ್ನುವುದಕ್ಕೆ ಡಾ. ಮಹಾಂತೇಶ ನೆಲಾಗಣಿಯವರೇ ಸಾಕ್ಷಿ. ಅವರೇ ಹೇಳುವಂತೆ ತರಬೇತಿಯು ಮನುಷ್ಯರನ್ನು
ಪರಿಪೂರ್ಣಗೊಳಿಸುತ್ತದೆ. ಹೀಗೆ ಹೇಳುತ್ತಾ ಹೋದರೆ ಪುಟಗಳು ಸಾಲದೆನಿಸುತ್ತವೆ.
ಮಹಾಂತೇಶ ನೆಲಾಗಣಿಯವರ ಶೈಕ್ಷಣಿಕ, ಸೇವಾ ಸಾಧನೆಗಳು ಹಲವಾರು. ಅವುಗಳನ್ನು ನೋಡುವುದಾದರೆ, ಯಲಬುರ್ಗಾದ ಸ. ಪ್ರ. ದ. ಕಾಲೇಜಿನಲ್ಲಿ ಕನ್ನಡ ವಿಷಯದ ಅತಿಥಿ ಉಪನ್ಯಾಸಕರಾಗಿ ಸತತ ಒಂಬತ್ತು ವರ್ಷಗಳ ಕಾಲ ಸೇವೆ ಸಲ್ಲಿಸುವುದರೊಂದಿಗೆ, ಜೆ. ಬಿ. ವೈ. ಡಿ. ಎಡ್.ಕಾಲೇಜಿನ ಪ್ರಭಾರಿ ಪ್ರಾಚಾರ್ಯರಾಗಿ, ಉಪನ್ಯಾಸಕರಾಗಿ, ಕೆ. ಆರ್. ಸಿ. ಪಿ ಯು ಕಾಲೇಜಿನಲ್ಲಿಯೂ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ, ಹಿರೇವಂಕಲಕುಂಟಾದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೂರು ವರ್ಷ, ಕುಷ್ಟಗಿಯ ಮಾತೋ ಶ್ರೀ ಹೊಳಿಯಮ್ಮ ಮಹಿಳಾ ಕಾಲೇಜಿನಲ್ಲಿ, ಒಂದು ವರ್ಷ, ಮೈಸೂರಿನಿಂದ 40 ಕಿ.ಮೀ ದೂರವಿರುವ ಹುಣಸೂರಿನ ದೇವರಾಜ್ ಅರಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆಲ ದಿನಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇಷ್ಟೇ ಅಲ್ಲದೆ ಕೊಪ್ಪಳ ಜಿಲ್ಲೆಯ ಇರಕಲ್ ಗಡ ಸ.ಪ್ರ.ದ.ಕಾಲೇಜಿನಲ್ಲಿ ಒಂದು ವರ್ಷ ಹಾಗೂ ಕಳೆದ ಎರಡು ವರ್ಷಗಳಿಂದ ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು , ಕೊಪ್ಪಳ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳ
ಮೆಚ್ಚಿನ ಉಪನ್ಯಾಸಕರಾಗಿದ್ದಾರೆ.
ಮಹಾಂತೇಶ ನೆಲಾಗಣಿಯವರು, ಕ್ರಿಯಾಶೀಲ ವ್ಯಕ್ತಿತ್ವವುಳ್ಳವರು ಎಂಬುದಕ್ಕೆ ಅವರು ಮಾಧ್ಯಮಗಳೊಂದಿಗೆ ಮಾಡಿದ ಕೆಲಸಗಳು ಸಾಕ್ಷಿಯಾಗಿವೆ. ‘ನನ್ನ ಓಲೆ’ ಎಂಬ ಕನ್ನಡ ಮಾಸಿಕ ಪತ್ರಿಕೆಯ ಸಂಪಾದಕರಾಗಿ, ಕಾರ್ಯ ನಿರ್ವಹಿಸಿದ್ದಾರೆ, ನಮ್ಮ ಜಿಲ್ಲೆಯ ಹೆಮ್ಮೆಯ ತತ್ವಪದಕಾರ, ಮಾರೆಪ್ಪ ಚೆನ್ನದಾಸರ ಮತ್ತು ವರ್ತಮಾನದ ಹಾಡುಗಾರರು, ಎನ್ನುವ ಪರಿಚಯಾತ್ಮಕ ಲೇಖನ ಮತ್ತು ನನ್ನ ಓಲೆ, ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ ಅದೇ ಪತ್ರಿಕೆಯಲ್ಲಿ ಪ್ರತಿಭಾನ್ವಿತ ರಂಗ ತಬಲಾ ಪಟು, ಶ್ರೀ ಶರಣ ಕುಮಾರ್ ಬಂಡಿಯವರ ಪರಿಚಯ ಲೇಖನ ಬರೆದಿರುವರು ಹಾಗೂ ತತ್ವಪದಕಾರ ಮಾರೆಪ್ಪ ಚನ್ನದಾಸರ ಎಂಬ ಸಂಶೋಧನಾ ಕೃತಿಯನ್ನು ೨೦೧೭ರಲ್ಲಿ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಅಂದಿನ ಮುಖ್ಯಮಂತ್ರಿ ಹೆಚ್. ಡಿ. ಕುಮಾರ ಸ್ವಾಮಿ, ಶಿಕ್ಷಣ ಮಂತ್ರಿ ಹೆಚ್. ವಿಶ್ವನಾಥ್ ಈ ಕೃತಿಯನ್ನು ಬಿಡುಗಡೆಗೊಳಿಸಿದ್ದರು ನಂತರದ ದಿನಗಳಲ್ಲಿ ಅವರ ತತ್ವ ಪದ ಕುರಿತು ಸಾಕ್ಷ್ಯ ಚಿತ್ರ ಬಿಡುಗಡೆಯಾಯಿತು.
ಜೊತೆಗೆ ಕನ್ನಡ ಸಾಹಿತ್ಯದಲ್ಲಿ ಅನುಭಾವಿಗಳು, (ಐ.ಎಸ್.ಬಿ.ಎನ್ 978-81–921407-5-9) ,ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ ಪವಾಡಗಳು, ಮತ್ತು ನಿಜಗುಣ ಶಿವಯೋಗಿ (ಐ.ಎಸ್.ಬಿ.ಎನ್)
ಮುಪ್ಪಿನ ಷಡಕ್ಷರಿ ಮತ್ತು ಸರ್ಪ ಭೂಷಣ ಶಿವಯೋಗಿಗಳನ್ನು ಕುರಿತು ಬರೆದ ಬರಹಗಳನ್ನು ಐ.ಎಸ್.ಬಿ.ಎನ್ ಪ್ರಕಟಿಸಿದೆ. ಇದಲ್ಲದೆ
ಸಂಗೀತ ಕಲಾ ಪ್ರವೀಣ, ಶ್ರೀ ವೀರನಗೌಡ . ಕೆ, ನಿಂಬನಗೌಡ್ರ ಕುರಿತು ಪರಿಚಯಾತ್ಮಕ ಲೇಖನವನ್ನು
ಬರೆದಿದ್ದಾರೆ.
ಮಹಾಂತೇಶ ನೆಲಾಗಣಿಯವರ ಕ್ರಿಯಾಶೀಲತೆಗೆ ಹಲವಾರು, ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ, ಕೊಪ್ಪಳದ ಹಿರಿಯ ಕವಿ, ಸಾಹಿತಿ, ಡಾ.ಮಹಾಂತೇಶ ಮಲ್ಲನಗೌಡ್ರು ,ಮಾನಸ ಪ್ರಕಾಶನದ “ಮಾನಸ ಸಿರಿ,” ಪ್ರಶಸ್ತಿ, ವಿಜಯಪುರದ ಸಿಂದಗಿಯ ಸರ್ವ ಧರ್ಮ ಪ್ರತಿಷ್ಠಾನದವರು ಕೊಡಮಾಡಿದ,” ಭಾವೈಕ್ಯ ಸಿರಿ ರಾಜ್ಯ ಪ್ರಶಸ್ತಿ-2021 ಮತ್ತು ಕರುನಾಡ ಪರಿಸರ ಸಂರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ಬಿ.ಎಸ್.ವೀರಾಪುರ (ವಕೀಲರು) ಕೊಡಮಾಡಿದ
ರಾಜ್ಯ ಮಟ್ಟದ ಅವ್ವ ಪ್ರಶಸ್ತಿ (ದಿ.೨೯.೧೦.೨೦೨೨)
ಕೊಪ್ಪಳ ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ ಬಳಿಕ ಶ್ರೀಮತಿ ಸಾವಿತ್ರಿ ಮುಜಮದಾರ್ ಅವರ ಅನೇಕ ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ.
ಬಂಡಾರ ಪ್ರಕಾಶನ ಮಸ್ಕಿ ಅವರು ನಡೆಸುವ ಕಾವ್ಯ -ಕರ್ನಾಟಕ -100. ಪ್ರಾಯೋಗಿಕ ವಿಮರ್ಶೆ, ಆನ್ಲೈನ್ ಉಪನ್ಯಾಸ ಸರಣಿ.
ಹಳೆಗನ್ನಡ ಓದು ಕಾರ್ಯಕ್ರಮದ ನಿರೂಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಪ್ರಶಸ್ತಿ, ಅವ್ವ ರಾಜ್ಯ ಪ್ರಶಸ್ತಿ, ಇನ್ನಿತರ ಸಂಘ, ಸಂಸ್ಥೆಗಳು ನೆಲಾಗಣಿಯವರ ಸಾಹಿತ್ಯ, ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಗುರುತಿಸಿ ಮೂವತ್ತಕ್ಕೂ ಹೆಚ್ಚು ಸನ್ಮಾನಗಳು ಆಗಿವೆ
” ಕೈವಲ್ಯ ಸಾಹಿತ್ಯದ ತಾತ್ವಿಕ ಸ್ವರೂಪ.”
ಮಹಾಂತೇಶ ನೆಲಾಗಣಿ ಯವರು ಬರೆದ ಈ ಸಂಶೋಧನಾ ಕೃತಿಯು ಕನ್ನಡ ಸಾಹಿತ್ಯದಲ್ಲಿ ಅಪರೂಪದ ಮತ್ತು ದಾಖಲಾರ್ಹ ಕೃತಿಯಾಗಿದೆ , ಎಂಬುದು ನನ್ನ ಅಭಿಪ್ರಾಯ.
ಇಂಥ ಕೃತಿ ರಚನೆ ಯಲ್ಲಿ ಸಾಕಷ್ಟು ಶ್ರಮ ವಹಿಸಿದ ಇವರಿಗೆ ಸೂಕ್ತ ಪ್ರತಿಫಲವೇ,
ಇದೀಗ ಅವರಿಗೆ ದೊರೆತ ಡಾಕ್ಟರೇಟ್ ಪದವಿ. ಇನ್ನೂ ಮುಂದೆ ಸಹ ಮಹಾಂತೇಶ ನೆಲಾಗಣಿಯವರು ಡಾ. ಮಹಾಂತೇಶ ನೆಲಾಗಣಿಯವರಾಗಿ ತಮ್ಮ ಕ್ರಿಯಾಶೀಲತೆಯನ್ನು, ಮುಂದುವರೆಸಲಿ ಎಂದು, ಈ ಮೂಲಕ ಕನ್ನಡ ಸಾಹಿತ್ಯದ ಸೇವೆಯನ್ನೂ ಮುಂದುವರಿಸಲಿ ಎಂದು ಆಶಿಸುತ್ತಾ, ಡಾ.ಮಹಾಂತೇಶ ಬಸಪ್ಪ ನೆಲಾಗಣಿಯವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ…
- ಶಿವಪ್ರಸಾದ್ ಹಾದಿಮನಿ, ಕನ್ನಡ ಉಪನ್ಯಾಸಕರು.
ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್, ಕೊಪ್ಪಳ-
ಮೊ :೭೯೯೬೭೯೦೧೮೯.
