ಬಳ್ಳಾರಿ / ಕುಡತಿನಿ : ದೋಬಿಗಾಟ್ ಪರಿಶೀಲನೆ ಮಾಡಿದ್ದು, ತುಂಬಾ ಕಳಪೆ ಕಾಮಗಾರಿಯಾಗಿದ್ದು, ಗುತ್ತಿಗೆದಾರರ ವಿರುದ್ಧ ಶಿಸ್ತುಕ್ರಮ ಜರುಗಿಸುವ ಜತೆಗೆ ಪರ್ಯಾಯವಾಗಿ ದೋಬಿಗಾಟ್ ನಿರ್ಮಾಣಕ್ಕೆ ಸೂಚಿಸಲಾಗಿದೆ ಎಂದು ಶಾಸಕಿ ಅನ್ನಪೂರ್ಣ ಈ. ತುಕಾರಾಂ ಹೇಳಿದರು.
ಕುಡತಿನಿ ಪಟ್ಟಣದ ಸಾರ್ವಜನಿಕ ರುದ್ರಭೂಮಿ ಬಳಿಯಲ್ಲಿರುವ ದೋಬಿಗಾಟ್ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿ, ಇಲ್ಲಿನ ದೋಬಿಗಾಟ್ ಕಾಮಗಾರಿ ಸಂಪೂರ್ಣವಾಗಿ ಕಳಪೆಯಿಂದ ಕೂಡಿದ್ದು, ಇಂತವರ ವಿರುದ್ಧ ಕಠಿಣ ಕ್ರಮವಾಗಬೇಕಾಗಿದೆ. 20 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಪರಿಶೀಲಿಸಿದ್ದು, ಸೂಕ್ತ ಸ್ಥಳದಲ್ಲಿ ನಿರ್ಮಿಸಲಾಗುವುದು. 50 ಲಕ್ಷ ಲೀಟರ್ ಸಾಮಾರ್ಧ್ಯದ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಅತಿ ಶೀಘ್ರದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು. ಮುಂದಿನ ದಿನದಲ್ಲಿ ಛಲುವಾದಿ ಸಮುದಾಯ ಭವನ ನಿರ್ಮಿಸಿಕೊಡಲಾಗುವುದು. ಈಗಾಗಲೇ ಕುಡತಿನಿಗೆ ಒಂದು ಸಾವಿರ ಮನೆಗಳು ಮಂಜೂರು ಆಗಿದ್ದು, ವಸತಿ, ಮನೆ ರಹಿತ ಅರ್ಹ ಫಲಾನುಭವಿಗಳ ಪಟ್ಟಿ ನೀಡುವಂತೆ ತಿಳಿಸಲಾಗಿದ್ದು, ಆದಷ್ಟು ಬೇಗ ಕೊಟ್ಟರೆ, ಜಿ+ ಮನೆ ನಿರ್ಮಿಸಿಕೊಡಲಾಗುವುದು. ಜನತೆಗೆ ಮೂಲಭೂತ ಸೌಲಭ್ಯ ಮತ್ತು ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಆಯಾ ಇಲಾಖೆ ಅಧಿಕಾರಿಗಳು ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಸುಜಾತಾ ಸತ್ಯಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ರಾಜಶೇಖರ, ಉಪಾಧ್ಯಕ್ಷ ಕನಕೇರಿ ಪಂಪಾಪತಿ, ಸದಸ್ಯರು, ಮುಖ್ಯಾಧಿಕಾರಿ ತೀರ್ಥಪ್ರಸಾದ್, ಎಇಇ ಅರುಣ್ ಪಟೇಲ್, ರಾಜೇಂದ್ರ ಪ್ರಸಾದ್, ಜೆಇ ಶಾರದಾ, ಮುಖಂಡರಾದ ಕೆ.ಎಸ್.ಎಲ್.ಸ್ವಾಮಿ, ಪಲ್ಲೇದ್ ಪ್ರಭು, ಕಂಬತ್ ರಾಮಾಂಜಿನಿ, ಚಂದ್ರಪ್ಪ, ಕೌಸಿಕ್, ವಿಠೋಬ, ಹನುಮಂತ, ವಿನೋದ, ರಮೇಶ, ಪ್ರತಾಪ್, ಆನಂದ ಸೇರಿದಂತೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















