ಯಾದಗಿರಿ/ಗುರುಮಠಕಲ್: ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ದಿನನಿತ್ಯ ಕೆಲಸಕ್ಕೆ ಬರದೆ ಕರ್ತವ್ಯ ಲೋಪ ಎಸಗುತ್ತಿರುವ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಓ) ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಜಯ ಕರ್ನಾಟಕ ಸಂಘಟನೆ ವತಿಯಿಂದ ನಿನ್ನೆ ಗುರುಮಠಕಲ್ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಅಂಬರೀಷ ಪಾಟೀಲ ರವರಿಗೆ ಮನವಿ ನೀಡಲಾಯಿತು.
ಗುರುಮಠಕಲ್ ತಾಲೂಕಿನ ಮಿನಾಸಪೂರ, ಚಂಡ್ರಿಕಿ, ಕಂದಕೂರ, ಕಾಳೆಬೆಳಗುಂದಿ, ಚಪೇಟ್ಲಾ, ಮಾಧವಾರ, ಕೊಂಕಲ್, ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಓ) ದಿನನಿತ್ಯ ಕೆಲಸಕ್ಕೆ ಬರದೆ ಕರ್ತವ್ಯ ಲೋಪ ಎಸಗುತ್ತಿದ್ದಾರೆ ಎಂದು ಆರೋಪ ಮಾಡಿದ್ದು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮೂರು ನಾಲ್ಕು ದಿನಕ್ಕೊಮ್ಮೆ ಬರುತ್ತಿದ್ದು, ಸಾರ್ವಜನಿಕರು ಅಧಿಕಾರಿಗಳಿಗೆ ಏಕೆ ಬಂದಿಲ್ಲ ಎಂದು ಕೇಳಿದರೆ ಪ್ರತಿಬಾರಿ (ಮೀಟಿಂಗ್) ಸಭೆಗಳಿಗೆ ಹೋಗಿದ್ದೇವೆಂದು ಸುಳ್ಳು ಕುಂಟು ನೆಪ ಹೇಳುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇನ್ನೂ ಇಷ್ಟಕ್ಕೆ ಮುಗಿಯದ ಇವರ ಕರ್ಮಕಾಂಡ ಪ್ರತಿದಿನ ಹಾಜರಿ ಹಾಕದೆ ಒಂದೇ ಬಾರಿ ಒಂದು ವಾರದ ಹಾಜರಿ ಹಾಕಿ, ತಾವು ಪ್ರತಿನಿತ್ಯ ಬರುವುದಾಗಿ ಜಾಣತನ ತೋರಿಸಿಕೊಳ್ಳುತ್ತಿದ್ದಾರೆ. ಇವರ ಕಳ್ಳಾಟ ತಡೆಯಲು ಪಂಚಾಯತಿ ಕಚೇರಿಯಲ್ಲಿ ಕಡ್ಡಾಯವಾಗಿ ದಿನನಿತ್ಯ ಬಯೋಮೆಟ್ರಿಕ್(ಜೀವ ಮಾನಕ) ಒತ್ತುವ ಹಾಜರಿ ಮಾಡುವುದರಿಂದ ಇವರು ಕೈಯಿಂದ ಒಂದು ವಾರದ ಹಾಜರಿ ಒಂದೇ ದಿನ ಹಾಕಿ ಕರ್ತವ್ಯ ಲೋಪ ಎಸಗುತ್ತಿರುವುದನ್ನು ತಪ್ಪಿಸಲು ಸೂಚನೆ ನೀಡಿದ್ದಾರೆ.
ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಕಾರ್ಯಗಳು ಕುಂಠಿತವಾಗಿ, ಅಭಿವೃದ್ಧಿಗೆ ಹಿನ್ನಡೆ ಉಂಟಾಗುತ್ತಿದೆ, ಸಾರ್ವಜನಿಕರ ಕೆಲಸಗಳು ಬಹುತೇಕ ಬಾಕಿ ಉಳಿಯುತ್ತಿದ್ದು ಸಾರ್ವಜನಿಕರ ಕೈಗೆ ಪಿಡಿಓ ರವರು ಸಿಗುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಪ್ರತಿ ನಿತ್ಯ ಕೇಳುವದು ಸರ್ವೇ ಸಾಮಾನ್ಯವಾಗಿದೆ, ಕೂಡಲೇ ಕರ್ತವ್ಯ ಲೋಪ ಎಸಗುತ್ತಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಹಾಗೂ ಅಧಿಕಾರಿಗಳು ಹೀಗೆ ಗೈರಾಗುವದು ಮುಂದುವರೆದರೆ ಉಗ್ರ ಹೋರಾಟ ಮಾಡುವದಾಗಿ ನಾಗೇಶ್ ಗದ್ದಗಿ ಜಯ ಕರ್ನಾಟಕ ಸಂಘಟನೆ ತಾಲೂಕಾದ್ಯಕ್ಷರು ಮನವಿ ಸಹಿತ ಎಚ್ಚರಿಕೆ ನೀಡಿದ್ದಾರೆ.
ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳಾದ ಕಾಶಪ್ಪ ಬೋಯಿನ್, ರಾಮು ಕೊಡಗಂಟಿ, ಗೋಪಾಲಕೃಷ್ಣ ಮೇದಾ, ರವಿ ವಾರದ ಹಾಜರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ
