ಕಲಬುರಗಿ/ ಚಿತ್ತಾಪುರ: ಸಾರ್ವಜನಿಕರು ತಮ್ಮ ಕರ್ತವ್ಯ, ಸಂಪ್ರದಾಯ ಮತ್ತು ಕಾನೂನು ಈ ಮೂರನ್ನು ತಿಳಿದುಕೊಂಡು ಬಕ್ರೀದ್ ಹಬ್ಬವನ್ನು ಆಚರಿಸಿದಾಗ ಸಮಾಜದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದೆ ಹಬ್ಬಗಳು ಯಶಸ್ವಿಯಾಗಲಿವೆ ಎಂದು ಶಹಾಬಾದ ಡಿ ವೈ ಎಸ್ ಪಿ ಶಂಕರಗೌಡ ಪಾಟೀಲ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾರ್ವಜನಿಕರು ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ನಡೆದಾಗ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ ಎಲ್ಲವೂ ಶಾಂತಿ ಮತ್ತು ಸಂಭ್ರಮದಿಂದ ಯಶಸ್ವಿಯಾಗಲಿದೆ ಎಂದರು.
ಯಾವುದೇ ಘಟನೆ ನಡೆದಾಗ ಸಂಬಂಧಪಟ್ಟ ಆಯಾ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಬೇಕು ಅದನ್ನು ಬಿಟ್ಟು ಕಾನೂನು ಕೈಗೆ ತೆಗೆದುಕೊಳ್ಳಬಾರದು ಇದಕ್ಕೆ ಆಸ್ಪದ ಇಲ್ಲ ಎಂದು ಕಿವಿಮಾತು ಹೇಳಿದರು
ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕಾಶಿ ಮಾತನಾಡಿ, ಬಕ್ರೀದ್ ತ್ಯಾಗ ಬಲಿದಾನದ ಮುಸ್ಲಿಂರ ಪವಿತ್ರ ಹಬ್ಬವಾಗಿದೆ. ಹಬ್ಬದ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಸಮಸ್ಯೆ ಸೃಷ್ಟಿ ಮಾಡಿ ಅಶಾಂತಿ ವಾತಾವರಣ ನಿರ್ಮಿಸುತ್ತಾರೆ ಅಂತಹದಕ್ಕೆ ಪೊಲೀಸ್ ಅಧಿಕಾರಿಗಳು ಆಸ್ಪದ ನೀಡಬಾರದು ಎಂದು ಹೇಳಿದರು.
ಅಲ್ಪಸಂಖ್ಯಾತರ ಮುಖಂಡ ಮುಕ್ತಾರ್ ಪಟೇಲ್ ಮಾತನಾಡಿ, ಸರ್ಕಾರದ ಕಾನೂನು ಕಾಯಿದೆಗಳು ನಾವು ಪಾಲಿಸುತ್ತೇವೆ ಮತ್ತು ಗೌರವಿಸುತ್ತೇವೆ ಆದರೆ ಗೋಮಾಂಸ ರಫ್ತು ಆಗುವುದರಲ್ಲಿ ಭಾರತ 3 ನೇ ಸ್ಥಾನದಲ್ಲಿದೆ ಇದರಲ್ಲಿ ಮುಸ್ಲಿಂರು ಯಾರೂ ಇಲ್ಲ ದೊಡ್ಡ ದೊಡ್ಡವರಿದ್ದಾರೆ ಹಾಗೂ ಗೋವಾ ರಾಜ್ಯದಲ್ಲಿ ಜಾರಿಯಲ್ಲಿದೆ ಎಂದು ಹೇಳಿದರು.
ಪ್ರಸ್ತುತ ಸಣ್ಣ ವಿಷಯಕ್ಕೆ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ ಇದರಿಂದ ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪುರಸಭೆ ಅಧಿಕಾರಿ ಲೋಹಿತ್ ಕಟ್ಟಿಮನಿ, ಪಶು ಅಧಿಕಾರಿ ಡಾ.ಮಂಜುನಾಥ, ಪುರಸಭೆ ಸದಸ್ಯ ಜಗದೀಶ್ ಚವ್ಹಾಣ, ಪತ್ರಕರ್ತ ಕಾಶಿನಾಥ ಗುತ್ತೇದಾರ, ಕೃಷಿಕ ಸಮಾಜದ ಅಧ್ಯಕ್ಷ ನಾಗರೆಡ್ಡಿ ಗೋಪಸೇನ್ ಮಾತನಾಡಿದರು.
ಕ್ರೈಂ ಪಿಎಸ್ಐ ಚಂದ್ರಾಮಪ್ಪ, ಮುಖಂಡರಾದ ಭೀಮಸಿಂಗ್ ಚವ್ಹಾಣ, ಎಂ.ಎ.ರಷೀದ್, ಸುಭಾಷ್ ಜಾಧವ, ನಜೀರ್ ಆಡಕಿ, ಸೈಯದ್ ಜಫರುಲ್ ಹಸನ್, ಅಹ್ಮದ್ ಸೇಠ್, ಅಫ್ಜಲ್ ಖುರೇಷಿ, ಖಾಜಾ ಬಾದಲ್, ಯಕ್ಬಾಲ್ ತಂಬಾಕವಾಲೆ, ಉದಯಕುಮಾರ್ ಸಾಗರ, ಮಲ್ಲಿಕಾರ್ಜುನ ಬೆಣ್ಣೂರಕರ್, ಬಾಬು ಕಾಶಿ, ಅನೀಲ್ ವಡ್ಡಡಗಿ, ರಾಮಲಿಂಗ ಬಾನರ್, ನಿಂಗಣ್ಣ ಹೆಗಲೇರಿ,ಮೋಸಿನ ಚೈನು ದತ್ತು ಜಾನೆ ಸೇರಿದಂತೆ ಇತರರು ಇದ್ದರು.
ಪಿಎಸ್ಐ ಶ್ರೀಶೈಲ್ ಅಂಬಾಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ. ಎಸ್. ಐ ಬಾಬುರಾವ್ ನಿರೂಪಿಸಿ, ವಂದಿಸಿದರು.
ವರದಿ ಮೊಹಮ್ಮದ್ ಅಲಿ, ಚಿತ್ತಾಪುರ
