ಚಾಮರಾಜನಗರ/ಹನೂರು: ತಾಲೂಕಿನ ರಾಮಾಪುರ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ರಾಮಾಪುರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮನೋಹರ್ ಮಾತನಾಡಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನವು ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಯಾಗಿದೆ. ದೇಶಾದ್ಯಂತ ಮೇ 29 ರಿಂದ ಜೂನ್ 12ರವರೆಗೆ ಕಾರ್ಯಕ್ರಮ ಜರುಗಲಿದ್ದು ಕೃಷಿ ವಿಶ್ವವಿದ್ಯಾನಿಲಯ ಹಾಗೂ ಕೃಷಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮುಂಗಾರು ಪೂರ್ವವಾಗಿ ಸ್ಥಳೀಯ ಬೆಳೆಗಳ ನವೀನ ತಾಂತ್ರಿಕತೆ ಬಗ್ಗೆ ಪೂರ್ವವಾಗಿ ಗ್ರಾಮ ಮಟ್ಟದಲ್ಲಿ ರೈತರಿಗೆ ತಿಳಿಸಲು ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಪ್ರತಿಯೊಬ್ಬ ರೈತರು ಈ ಕಾರ್ಯಕ್ರಮವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಅಭಿಯಾನದಿಂದ ದೊರೆಯುವ ವೈಜ್ಞಾನಿಕ ವಿಚಾರಗಳು ಮತ್ತು ಆಯಾಮಗಳನ್ನು ರೈತರು ಗಮನದಲ್ಲಿಟ್ಟುಕೊಂಡು ಮುಂಗಾರಿಗೆ ಸನ್ನದ್ದರಾಗಬೇಕು, ರೈತಪರ ಯೋಜನೆಗಳಾದ ಕೃಷಿ ಭಾಗ್ಯ ರಾಷ್ಟ್ರೀಯ ಆಹಾರ ಮತ್ತು ಪೌಷ್ಟಿಕ ಸುಭದ್ರತೆ ಯೋಜನೆ, ಕೃಷಿ ಸಂಸ್ಕರಣೆ, ಕೃಷಿ ಯಾಂತ್ರೀಕರಣ ನೈಸರ್ಗಿಕ ಕೃಷಿ ಯೋಜನೆ ಪಿಎಂ ಕಿಸಾನ್ ಯೋಜನೆಗಳ ಬಗ್ಗೆ ಸವಿವರವಾಗಿ ವಿವರಣೆ ನೀಡಿದರು.
ಕೆವಿಕೆ ಹರದನಹಳ್ಳಿಯ ಕೃಷಿ ವಿಜ್ಞಾನಿಗಳಾದ ಡಾ. ಮೋಹನ್ ಕುಮಾರ್ ರವರು ರೈತರಿಗೆ ಹಸಿರೆಲೆ ಗೊಬ್ಬರದ ಬಳಕೆ ಬೀಜೋಪಚಾರ, ಪ್ರತಿ ಬೆಳೆಗಳಿಗೆ ಕೊಟ್ಟಿಗೆ ಗೊಬ್ಬರದ ಬಳಕೆ, ಬಾಳೆಎಲೆ ರಂದುಗಳ ಆಯ್ಕೆ ಕಂದು ಉಪಚಾರ, ಪೋಷಕಾಂಶ ನಿರ್ವಹಣೆ ಅರಿಶಿಣ ಬೆಳೆಯಲ್ಲಿ ಸುಧಾರಿತ ತಳಿಗಳು ಮತ್ತು ಬೆಳೆ ನಿರ್ವಹಣೆ ತೆಂಗು ಬೆಳೆಯ ಸಮಗ್ರ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು.
ವಿಜ್ಞಾನಿಗಳಾದ ದೀಪಾರವರು ಸಿರಿಧಾನ್ಯ ಬೆಳೆಗಳ ಮೌಲ್ಯವರ್ಧನೆ ಉತ್ಕೃಷ್ಟ ಪ್ಯಾಕಿಂಗ್, ಎಫ್ ಎಸ್ ಎಸ್ ಎ ಐ ಲೈಸನ್ಸ್ ಪಡೆಯುವುದು ಮತ್ತು ಮಾರುಕಟ್ಟೆಯ ಬಗ್ಗೆ ವಿಸ್ಕೃತ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಿಬ್ಬಂದಿಗಳಾದ ಪ್ರತಿಮಾ ಉಪೇಂದ್ರ ಕುಮಾರ್ ಧರ್ಮೇಂದ್ರ ವಿನಯ್ ಸೇರಿದಂತೆ ರೈತ ಮುಖಂಡರುಗಳು ಹಾಜರಿದ್ದರು.
ವರದಿ ಉಸ್ಮಾನ್ ಖಾನ್



















