ಬಾಗಲಕೋಟೆ/ಮುಧೋಳ : ಪೂಜ್ಯರಾದ ವಿಶ್ವನಾಥ ದತ್ತ ಹಾಗೂ ಭುವನೇಶ್ವರಿ ಪುಣ್ಯದಂಪತಿಗಳ ಉದರದಲ್ಲಿ ಜನಿಸಿದ ನರೇಂದ್ರನಾಥ ದತ್ತ ಅವರು 1863 ಜನವರಿ 12ರಂದು ಕೊಲ್ಕತ್ತಾದಲ್ಲಿ ಜನಿಸಿದರು. ರಾಮಕೃಷ್ಣ ಪರಮಹಂಸರ ಶಿಷ್ಯತ್ವ ಹೊಂದಿದ ನಂತರ ಜಗತ್ತಿಗೆ ವಿವೇಕಾನಂದರೆಂದು ಎಂದು ಪರಿಚಯವಾದರು. ತತ್ವಶಾಸ್ತ್ರವನ್ನು ಅಧ್ಯಯನ ಮಾಡಿದ ವಿವೇಕಾನಂದರು ಚಿಕಾಗೋದಲ್ಲಿ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ್ದು ವಿಶೇಷ. ರಾಜಯೋಗ, ಕರ್ಮ ಯೋಗ, ಭಕ್ತಿ ಯೋಗ, ಜ್ಞಾನ ಯೋಗ ಇವರ ಪ್ರಮುಖ ಕೃತಿಗಳು. ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಇವರ ಘೋಷ ವಾಕ್ಯ ಪ್ರಸಿದ್ಧಿಯನ್ನು ಪಡೆಯಿತು. 1888ರಿಂದ ಸತತ 5 ವರ್ಷ ಭಾರತ ಪರ್ಯಟನೆಯನ್ನು ಮಾಡಿದರು. ಭಗವದ್ಗೀತೆ ಇವರ ಪ್ರಿಯವಾದ ಗ್ರಂಥವಾಗಿತ್ತು.
1902 ಜುಲೈ 4 ರಂದು ಕೊಲ್ಕತ್ತಾದ ಬೇಲೂರು ಮಠದಲ್ಲಿ “ಧ್ಯಾನ” ಮಾಡುತ್ತಾ ಕೊನೆಯುಸಿರೆಳೆದರು. ಧೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 123 ನೆಯ ಒಂದು “ಸ್ಮರಣೋತ್ಸವ” ಕಾರ್ಯಕ್ರಮವು ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಆವರಣದಲ್ಲಿ 2025 ಜುಲೈ 4 ರಂದು ಮುಂಜಾನೆ 11 ಗಂಟೆಗೆ ಜರುಗಲಿದೆ. “ಸ್ವಾಮಿ ವಿವೇಕಾನಂದರ ಬದುಕು” ವಿಷಯಾಧಾರಿತವಾಗಿ ತುಮಕೂರಿನ ಪರಮಪೂಜ್ಯ ದಯಾಶಂಕರ ಮಹಾಸ್ವಾಮೀಜಿಯವರು ಉಪನ್ಯಾಸವನ್ನು ನೀಡಲಿದ್ದಾರೆ. ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪ. ಪೂ.ಶರಣಬಸವ ಶಾಸ್ತ್ರಿಗಳು ಸನ್ನಿಧಾನವನ್ನು ವಹಿಸುವರು.
ಸರಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ಪಿ.ಎಂ.ಹಲಗಿ. ಸಭೆಯ ಅಧ್ಯಕ್ಷತೆಯನ್ನು ವಹಿಸುವರು. ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಎಲ್ ಶಾಮಲಾ ಅವರು ಜ್ಯೋತಿಯನ್ನು ಬೆಳಗಿಸುವರು. ಯುವ ಗಾಯಕ ಎಲ್. ಶ್ರೀನಿವಾಸ ಪ್ರಸಾದ್ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗುವುದು. ಇದೆ ಸಂದರ್ಭದಲ್ಲಿ ಸಾಧಕರನ್ನು ಗೌರವಿಸಲಾಗುವುದು. ಸಕಾಲಕ್ಕೆ ಬಂದ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗುವುದು. ವಿಶ್ವ ಜನನಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಗ್ರಾಮೀಣ ಅಭಿವೃದ್ಧಿ ಹಾಗೂ ಜನಪದ ಕಲಾ ಸಂಸ್ಥೆಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮಗಳು ನಡೆಯುವವು. ಭಾಗವಹಿಸಿದ ಕಲಾವಿದರಿಗೆ ಪ್ರಮಾಣ ಪತ್ರಗಳನ್ನು ಕೊಡಲಾಗುವುದು ಎಂದು ಆಶ್ರಮದ ಕುಮಾರ್ ಸ ಗುರುಪ್ರಸಾದ್ ಸ್ವಾಮೀಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕರುನಾಡ ಕಂದ



















