ಹಾಸ್ಟೆಲ್ ಹಾಗೂ ಶಾಲೆಗಳ ಭೇಟಿ, ಆಹಾರ ಗುಣಮಟ್ಟ ಪರಿಶೀಲನೆ
ಯಾದಗಿರಿ/ ಗುರುಮಠಕಲ್: ಪಟ್ಟಣದ ಪದವಿ ವಿದ್ಯಾರ್ಥಿಗಳ ವಸತಿನಿಲಯಕ್ಕೆ ಲವಿಶ್ ಓರ್ಡಿಯಾ, ಐಎಎಸ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ಯಾದಗಿರಿ ಹಾಗೂ ಸಮಾಜ ಕಲ್ಯಾಣ ಇಲಾಖೆ, ತಾಲೂಕ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ, ಪುರಸಭೆ ಕಾರ್ಯಾಲಯದ ಮುಖ್ಯಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಿನ್ನೆ ನಡೆದ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಶಾಸಕ ಶರಣಗೌಡ ಕಂದಕೂರು ಅವರಿಗೆ ವಿದ್ಯಾರ್ಥಿಗಳು ವಸತಿ ನಿಲಯಗಳಲ್ಲಿನ ಸಮಸ್ಯೆಗಳನ್ನು ಗಮನಕ್ಕೆ ತಂದಾಗ, ಜಿಲ್ಲಾ ಮುಖ್ಯಧಿಕಾರಿಗಳಿಗೆ ಮಾತನಾಡಿ ವೀಕ್ಷಿಸಲು ತಿಳಿಸಿದ ಪ್ರಯುಕ್ತ ಅಧಿಕಾರಿಗಳು ಇಂದು ಭೇಟಿ ಪರಿಶೀಲಿಸಿದರು.
ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ, ಡಾ. ಬಿ. ಅರ್. ಅಂಬೇಡ್ಕರ್ ಮೆಟ್ರಿಕ್ ನಂತರದ
ವಸತಿ ನಿಲಯದಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ಊಟದ ವ್ಯವಸ್ಥೆ, ಗ್ರಂಥಾಲಯ, ವಿದ್ಯುತ್ ಸಮಸ್ಯೆ, ಸೋಲಾರ್ ಬಿಸಿ ನೀರಿನ ವ್ಯವಸ್ಥೆ, ಸಂಗ್ರಹವಿದ್ದ ಧವಸ, ಧಾನ್ಯ, ತರಕಾರಿಗಳ ಗುಣಮಟ್ಟ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸಲಾಗುತ್ತದೆಯೇ ಎಂಬುದನ್ನು ಪರಿಶಿಲಿಸಿದರು. ಸರಿಯಾಗಿ ಆಹಾರ ನೀಡಲಾಗುತ್ತದೆಯೇ ಇಲ್ಲವೇ, ಇನ್ನೂ ಏನಾದರೂ ಸಮಸ್ಯೆ ಇದ್ದಲ್ಲಿ ನಿರ್ಭಯವಾಗಿ ತಮ್ಮ ಬಳಿ ಹೇಳಿ ಎಂದು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು.
ಸೋರುತ್ತಿರುವ ಸಿಂಟೆಕ್ಸ್ ಟ್ಯಾಂಕ್ ನೀರು, ಹಾಸ್ಟೆಲ್ ಸೋಲಾರ್ ಪ್ಯಾನೆಲ್ ದುರಸ್ತಿಗೊಳಿಸುವಂತೆ ಹಾಗೂ ವಸತಿನಿಲಯದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ವಾರ್ಡನ್ ಗೆ ಸೂಚಿಸಿದರು.
ಪುರಸಭೆ ಕಾರ್ಯಾಲಯದ ಮುಖ್ಯಾಧಿಕಾರಿಗಳಿಗೆ ಹಾಸ್ಟೆಲ್ ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿಡಲು ಹಾಗೂ ತ್ವರಿತ ಗತಿಯಲ್ಲಿ ಕಾಂಪೌಂಡ್ ಗೋಡೆ ನಿರ್ಮಾಣ ಮಾಡಲು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ಕಾರ್ಯನಿರ್ವಹಕ ಅಧಿಕಾರಿ ಅಂಬರೀಷ ಪಾಟೀಲ, ಪಿಡಿ. ಡಿಆರ್ಡಿಎ ಸಿ.ಬಿ. ದೇವರಮಣಿ, ಪುರಸಭೆ ಕಾರ್ಯಾಲಯದ ಮುಖ್ಯಾಧಿಕಾರಿ ಭಾರತಿ ದಂಡೋತಿ, ಹಿಂದುಳಿದ ವರ್ಗಗಳ ಉಪ ನಿರ್ದೇಶಕರು (DOBC)ಸದಾಶಿವ ನಾರಾಯಣಕರ, ತಾಲೂಕ ಹಿಂದುಳಿದ ವರ್ಗಗಳ ಅಧಿಕಾರಿ ಸಂತೋಷ ರೆಡ್ಡಿ, ಸಮಾಜ ಕಲ್ಯಾಣ ತಾಲೂಕಾಧಿಕಾರಿ ಬೇಬಿ, ಹಾಸ್ಟೆಲ್ ವಾರ್ಡನ್ ಶ್ರೀದೇವಿ ಹಾಜರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















