ಬಳ್ಳಾರಿ/ ಕಂಪ್ಲಿ : ನಾಡಿನ ಸಮೃದ್ಧ ಮಳೆ, ಬೆಳೆ ಹಾಗೂ ಲೋಕಕಲ್ಯಾಣಕ್ಕಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ನೇತೃತ್ವದಲ್ಲಿ ಪದಾಧಿಕಾರಿಗಳು ಮತ್ತು ರೈತರು ಗುರು ಪೂರ್ಣಿಮ ದಿನವಾದ ಗುರುವಾರದಂದು ಕಂಪ್ಲಿ-ಕೋಟೆ ಪ್ರದೇಶದ ತುಂಗಭದ್ರಾ ನದಿಗೆ ಬಾಗಿನ ಅರ್ಪಿಸಿದರು.
ಜಲಾಶಯದ ಮೇಲ್ಭಾಗದ ಮಲೆನಾಡಿನಲ್ಲಿ ಸಮೃದ್ಧ ಮಳೆಯಿಂದಾಗಿ ರೈತರ ಜೀವನಾಡಿ ತುಂಗಭದ್ರೆಯ ಒಡಲು ತುಂಬಿದ್ದು, ಇದರಿಂದ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಹರಿಸಲಾಗಿದೆ. ಇಲ್ಲಿನ ನದಿಯಲ್ಲಿ ಮೈದುಂಬಿ ಗಂಗಾದೇವಿ ಹರಿಯುತ್ತಿದ್ದು, ರೈತರಲ್ಲಿ ಸಂತಸ ತಂದಿದೆ. ಒಂದು ಕಡೆ ಸಿಹಿಯಾದರೆ ಇನ್ನೊಂದು ಕಡೆ ಕಸಿಯಾಗಿದೆ. ಯಾಕೆಂದರೆ ಜಲಾಶಯದ ನೀರಿನ ಮಟ್ಟವನ್ನು 80 ಟಿಎಂಸಿಗೆ ಇಳಿಸಿದೆ. ಹೊಸ ಗೇಟ್ ಅಳವಡಿಕೆ ಮಾಡುವ ಹಿನ್ನಲೆ ಬೇಸಿಗೆ ನೀರು ಕಡಿತ ಮಾಡಿ, ಕಾಮಗಾರಿ ಕೈಗೆತ್ತಿಕೊಳ್ಳುವ ಪರಿಣಾಮ ಜಲಾಶಯದಲ್ಲಿ ನೀರಿನ ಸಂಗ್ರಹವನ್ನು ಕಡಿತಗೊಳಿಸಿ, ಉಳಿದ ನೀರನ್ನು ಯಥಾವತ್ತಾಗಿ ನದಿಗೆ ಹರಿಸುವ ಕೆಲಸ ಮಾಡಲಾಗುತ್ತಿದೆ. ಜಲಾಶಯದಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿರುವ ಖುಷಿ ತಂದಿದೆಯಾದರೂ ಮತ್ತೊಂದು ಕಡೆ ಮುಂಗಾರು ಹಂಗಾಮಿನ ಒಂದೇ ಬೆಳೆಗೆ ನೀರು ಹರಿಸುತ್ತಿರುವುದು ಕಹಿಯಾಗಿದೆ. ಈಗಾಗಲೇ ಸಾಕಷ್ಟು ಟಿಎಂಸಿ ನೀರನ್ನು ಅನಾವಶ್ಯಕವಾಗಿ ನದಿಗೆ ಪೋಲು ಮಾಡಲಾಗುತ್ತದೆ. ಇದರ ಬದಲು ಎಲ್ಎಲ್ ಮತ್ತು ಎಚ್ಎಲ್ ಕಾಲುವೆಗೆ ನೀರು ಹರಿಸಿದರೆ ಭತ್ತ ಸೇರಿದಂತೆ ನಾನಾ ಬೆಳೆಗಳನ್ನು ರೈತರು ಬೆಳೆಯಲಿದ್ದಾರೆ. ಆದರೆ, ಟಿಬಿ ಬೋರ್ಡ್ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ರೈತರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ನಾಲೆಗಳಿಗೆ ನೀರು ಬಿಡಬೇಕು. ಕಳೆದ ಕೆಲ ವರ್ಷದಿಂದ ನೀರಾವರಿ ಸಲಹಾ ಸಮಿತಿ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತಿದೆ. ಇದನ್ನು ಮುನಿರಾಬಾದ್ ಟಿಬಿ ಬೋರ್ಡ್ನಲ್ಲೇ ನಡೆಸಬೇಕೆಂಬುದು ಪ್ರತಿಯೊಬ್ಬ ರೈತರ ಹಕ್ಕೋತ್ತಾಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಕೆ.ಎಂ.ಹೇಮಯ್ಯಸ್ವಾಮಿ, ಬಿ.ನಾರಾಯಣಪ್ಪ, ಕೊಟ್ಟೂರು ರಮೇಶ, ವಿರೇಶ, ತಿಮ್ಮಪ್ಪ ನಾಯಕ, ಡಿ.ಮುರಾರಿ, ಕೆ.ಸುದರ್ಶನ ಸೇರಿದಂತೆ ಮಹಿಳೆಯರು ಹಾಗೂ ರೈತರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ



















