ಬೆಂಗಳೂರು: ಭಾರತೀಯ ರೈಲ್ವೆಯು ವಿಕಲಚೇತನರ ರೈಲ್ವೆ ರಿಯಾಯತಿ ಪಾಸು ವಿತರಿಸುವಲ್ಲಿ ತಾರತಮ್ಯ
ಧೋರಣೆ ನಡೆಸುತ್ತಿದ್ದು ಅದನ್ನು ಸರಿಪಡಿಸಿ ವಿಕಲಚೇತನರಿಗೆ ನ್ಯಾಯ ಒದಗಿಸಲು ಕೇಂದ್ರ ರೈಲ್ವೇ ರಾಜ್ಯ ಸಚಿವ ಶ್ರೀ ವಿ. ಸೋಮಣ್ಣ ಅವರೊಂದಿಗೆ ಚರ್ಚಿಸಿ ಅಂಗವಿಕಲರ ಮಸೂದೆಯಲ್ಲಿ ಗುರುತಿಸಲ್ಪಟ್ಟಿರುವ ಎಲ್ಲಾ ತರಹದ ವಿಕಲಚೇತನರಿಗೆ ರೈಲ್ವೆ ರಿಯಾಯತಿ ಪಾಸು ಸಿಗಲು ಸಹಾಯ ಮಾಡಬೇಕೆಂದು ಶಿವಮೊಗ್ಗ ಶಾಸಕ ಶ್ರೀ ಎಸ್ ಎನ್ ಚನ್ನಬಸಪ್ಪ ಅವರಿಗೆ ಇಂಡಿಯನ್ ದಿವ್ಯಾಂಗ್ ಎಂಪವರ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು ಮನವಿ ಮಾಡಿದರು.
ಬೆಂಗಳೂರಿನ ಶಾಸಕರ ಭವನದ ಅವರ ಕಚೇರಿಯಲ್ಲಿ ಈ ದಿನ ಭೇಟಿ ಮಾಡಿ ಅಂಗವಿಕಲರ ಮುಖ್ಯ ಆಯುಕ್ತರ ನ್ಯಾಯಾಲಯವು ರೈಲ್ವೆ ಇಲಾಖೆಯ ತಾರತಮ್ಯ ಧೋರಣೆಯನ್ನು ಪ್ರಶ್ನಿಸಿ ಆನ್ಲೈನ್ ಕೋರ್ಟ್ ವಿಚಾರಣೆ ನಡೆಸಿದ್ದು ಎಲ್ಲಾ ವಿಧದ ವಿಕಲಚೇತನರಿಗೆ ತಾರತಮ್ಯ ತೋರದೆ ರಿಯಾಯತಿ ಪಾಸ್ ವಿತರಿಸಬೇಕೆಂದು ಕೋರ್ಟ್ ಆದೇಶ ನೀಡಿದ್ದರೂ ಸರಕಾರದಿಂದ ಅನುದಾನ ಬಾರದಿರುವುದರಿಂದ ತೊಂದರೆಯಾಗಿದೆ ಎಂಬ ಕಾರಣವನ್ನು ಮುಂದಿಟ್ಟು ಹಠ ಮಾರಿ ಧೋರಣೆ ತಳೆದಿದೆ ಎಂದು ವಿವರಿಸಿದರು.
ಮನವಿಯನ್ನು ಮುತುವರ್ಜಿಯಿಂದ
ಆಲಿಸಿದ ಶಾಸಕರು ಈ ಬಗ್ಗೆ ಕೇಂದ್ರ ರೈಲ್ವೇ ಮಂತ್ರಿ ಶ್ರೀ ವಿ. ಸೋಮಣ್ಣ ಅವರಲ್ಲಿ ಚರ್ಚಿಸಿ ಸಮಸ್ಯೆ ಸರಿಪಡಿಸಲು ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.
- ಕರುನಾಡ ಕಂದ



















