ಗದಗ : ಶಿರಹಟ್ಟಿ ತಾಲೂಕಿನ ಗಡಿಭಾಗದ ಹಳ್ಳಿಯ ರೈತರು ಯೂರಿಯಾ ಗೊಬ್ಬರಕ್ಕಾಗಿ ಪರದಾಡುವಂತಾಗಿದ್ದು, ರಾತ್ರಿ ಕೊರೆವ ಚಳಿಯಲ್ಲಿ, ರೈತರು ಯೂರಿಯಾ ಗೊಬ್ಬರಕ್ಕಾಗಿ ಶಿರಹಟ್ಟಿಯ ಜನತಾ ಬಜಾರ್ ಮುಂದೆ ಹಾಸಿಗೆ ಸಮೇತವಾಗಿ ಬಂದಿರುವುದೂ ಸಾಮಾನ್ಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಗದಗ ಜಿಲ್ಲಾ ಯುವ ರೈತ ಸಂಘದ ಅಧ್ಯಕ್ಷರಾದ ‘ ಪ್ರಕಾಶ್ ಕಲ್ಯಾಣಿ ‘ ರವರು ಕೃಷಿ ಅಧಿಕಾರಿಗಳ ವಿರುದ್ಧ ಬೇಸರ ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿದ್ದು ಇಲ್ಲಿ ಅಧಿಕಾರಿಗಳ ನಿರ್ಲಕ್ಷ್ಯತನವೇ ಇದಕ್ಕೆ ಪ್ರಮುಖ ಕಾರಣ. ಕೃಷಿ ಅಧಿಕಾರಿಗಳು ಬೆಚ್ಚಗೆ ಮಲಗಿದ್ದಾರೆ ರೈತರು ಬೀದಿಗೆ ಬಂದಿದ್ದಾರೆ ಜೊತೆಗೆ ರೈತರಿಗೆ ಮೆಕ್ಕೆ ಜೋಳದ ಬೀಜ ನೀಡಿರುವ ಲೆಕ್ಕ ಗೊತ್ತಿದ್ದು ಇದರ ವರದಿಯ ಅನುಸಾರವಾಗಿ ಯೂರಿಯಾ ಗೊಬ್ಬರ ಪೂರೈಕೆಯ ನಿರ್ವಹಣೆಯೂ ಅಚ್ಚುಕಟ್ಟಾಗಿ ನಡೆದಿಲ್ಲವೆಂದು ರೈತ ಸಂಘದ ಅಧ್ಯಕ್ಷರು ಈ ಸಂದರ್ಭದಲ್ಲಿ ತಿಳಿಸಿರುತ್ತಾರೆ. ಇದು ಕೇವಲ ಒಂದು ತಾತ್ಕಾಲಿಕ ಸಮಸ್ಯೆಯಲ್ಲ, ಬದಲಾಗಿ ನಮ್ಮ ರೈತ ಸಮುದಾಯ ಎದುರಿಸುತ್ತಿರುವ ಒಂದು ಗಂಭೀರ ಸವಾಲಾಗಿದೆ, ಗೊಬ್ಬರದ ಕೊರತೆ ಮತ್ತು ವಿತರಣಾ ವ್ಯವಸ್ಥೆಯಲ್ಲಿನ ಲೋಪಗಳು ಈ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ. ಸರ್ಕಾರವು ಗೊಬ್ಬರವನ್ನು ಪೂರೈಸುತ್ತಿದ್ದರೂ, ಅದು ಬೇಡಿಕೆಗೆ ತಕ್ಕಂತೆ ಇರುವುದಿಲ್ಲ. ಇದರಿಂದಾಗಿ, ಗೊಬ್ಬರ ವಿತರಣಾ ಕೇಂದ್ರಗಳ ಮುಂದೆ ಗಂಟೆಗಟ್ಟಲೆ ಕಾಯುವುದು ರೈತರಿಗೆ ಅನಿವಾರ್ಯವಾಗಿದೆ. ಬೆಳೆಗಳಿಗೆ ಸರಿಯಾದ ಸಮಯಕ್ಕೆ ಗೊಬ್ಬರ ಸಿಗದೆ ಹೋದರೆ, ಇಳುವರಿ ಕಡಿಮೆಯಾಗಿ ರೈತರಿಗೆ ಆರ್ಥಿಕ ನಷ್ಟವಾಗುತ್ತದೆ.
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ತುರ್ತು ಅಗತ್ಯವಾಗಿದೆ. ಸರ್ಕಾರವು ಗೊಬ್ಬರ ಪೂರೈಕೆಯನ್ನು ಹೆಚ್ಚಿಸಬೇಕು ಮತ್ತು ವಿತರಣಾ ವ್ಯವಸ್ಥೆಯನ್ನು ಸುಧಾರಿಸಬೇಕು. ಹಾಗೆ ಕೃಷಿ ಅಧಿಕಾರಿಗಳು ಬೀಜ ನೀಡಿರುವ ವರದಿ ಅನುಸಾರವಾಗಿ ಗೊಬ್ಬರ ಪೂರೈಸುವುದು. ಇದರೊಂದಿಗೆ, ರೈತರಿಗೆ ಪರ್ಯಾಯ ಮತ್ತು ಸಾವಯವ ಗೊಬ್ಬರಗಳ ಬಗ್ಗೆ ಅರಿವು ಮೂಡಿಸಬೇಕು. ಈ ಮೂಲಕ, ರೈತರ ಕಷ್ಟಕ್ಕೆ ಪರಿಹಾರ ನೀಡಿ ಅವರ ಬದುಕಿಗೆ ಆಧಾರವಾಗಬೇಕಾಗಿದೆ.
ವರದಿಗಾರರು : ರಾಕೇಶ್ ಬೂದಿಹಾಳ, ಶಿರಹಟ್ಟಿ



















