ಬೀದರ್ : ತೀವ್ರ ಅಸ್ವಸ್ಥಗೊಂಡ ವಯೋವೃದ್ಧ ಭಿಕ್ಷುಕನೊಬ್ಬನಿಗೆ ಬಿಮ್ಸ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ ಕೈತುತ್ತು ತಿನ್ನಿಸಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮರೆದರು.
ಇಲ್ಲಿಯ ಉದಗೀರ ರಸ್ತೆಯಲ್ಲಿರುವ ಮಡಿವಾಳೇಶ್ವರ ವೃತ್ತ ಹತ್ತಿರದ ಮೊಬೈಲ್ ಅಂಗಡಿಯೊಂದರ ಮುಂಭಾಗದ ರಸ್ತೆ ಬದಿಯಲ್ಲಿರುವ ಚರಂಡಿ ಪಕ್ಕ ಕಳೆದ ಮೂರ್ನಾಲ್ಕು ದಿನದಿಂದ ಕುಳಿತ್ತಿದ್ದ ಭಿಕ್ಷುಕನು ಮಂಗಳವಾರ ಸಂಜೆ ಸುರಿದ ಧಾರಾಕಾರ ಮಳೆಯಲ್ಲಿ ನರಳಾಡುತ್ತಿದ್ದನು. ಇದನ್ನು ನೋಡಿದ ವಿದ್ಯಾರ್ಥಿನಿಯರ ತಂಡವು ಆತನ ನೆರವಿಗೆ ಧಾವಿಸಿ ರಕ್ಷಣೆ ಮಾಡಿರುವುದು ಶ್ಲಾಘನೆಗೆ ಕಾರಣವಾಯಿತು.
ಭಿಕ್ಷುಕನ ಕಾಲಿಗೆ ದೊಡ್ಡ ಗಾಯವಾಗಿದ್ದನ್ನು ವೀಕ್ಷಿಸಿದ ವಿದ್ಯಾರ್ಥಿನಿಯರು ಮಾತನಾಡಿಸಲು ಪ್ರಯತ್ನಿಸಿದರು. ಆದರೆ ಆತನು ಮಳೆ ನೀರಿನಲ್ಲಿ ನೆನೆದು ಚಳಿಯಿಂದ ನಡಗುತ್ತಾ ಮಾತನಾಡದೇ ಗಾಬರಿಯಿಂದ ನೋಡುತ್ತಿದ್ದ. ತಕ್ಷಣ ವಿದ್ಯಾರ್ಥಿನಿ ಪ್ರೀತಿ ತನ್ನ ಬ್ಯಾಗ್ನಲ್ಲಿದ್ದ ಊಟದ ಡಬ್ಬಿ ತೆಗೆದು ಅನ್ನ ಮತ್ತು ಸಾರು ಮಿಶ್ರಣ ಮಾಡಿ ಕೈ ತುತ್ತು ತಿನ್ನಿಸುವ ಮೂಲಕ ಮಾನವೀಯತೆ ಮೆರೆದು ಮಾದರಿಯಾದರು.
ನಗರ ಸೇರಿ ವಿವಿಧ ಜಿಲ್ಲೆಯ ನಾನಾ ಕಡೆ ಅಪರಚಿತ ವಯೋವೃದ್ಧ ಭಿಕ್ಷುಕರು ಕಾಯಿಲೆಯಿಂದ ನರಳಾಡುತ್ತಾ ರಸ್ತೆಯಲ್ಲಿ ಜೀವನ ಕಳೆಯುತ್ತಿದ್ದಾರೆ. ಇವರ ರಕ್ಷಣೆಗೆ ಜಿಲ್ಲಾಡಳಿತಗಳು ವಿಶೇಷ ಕಾಳಜಿ ವಹಿಸಬೇಕಿದೆ.
ವಿವಿಧ ಜಿಲ್ಲೆಯಲ್ಲಿ ನಿರ್ಗತಿಕರು, ಭಿಕ್ಷುಕರ ಸಂಖ್ಯೆ ಹೆಚ್ಚಾಗಿದೆ. ಇವರ ಸೇವೆಗಾಗಿಯೇ ಸರಕಾರ ಪ್ರತ್ಯೇಕ ಇಲಾಖೆಯೂ ಇದೆ. ಆದರೆ ಅಧಿಕಾರಿಗಳು ಇಂತಹವರನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಜಿಲ್ಲಾಡಳಿತಗಳು ಗಮನಹರಿಸಿ ತಪ್ಪಿತಸ್ಥರ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆನ್ನುವುದು ನಮ್ಮ ಕರುನಾಡ ಕಂದ ಪತ್ರಿಕೆಯ ಅಗ್ರಹ.
ವರದಿ : ಜಿಲಾನಸಾಬ್ ಬಡಿಗೇರ್



















