
ಕೊಪ್ಪಳ / ಗಂಗಾವತಿ : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತಮ್ಮ ಕುಟುಂಬ ಸಮೇತ ಗಂಗಾವತಿ ತಾಲೂಕಿನ ಚಿಕ್ಕರಾಂಪೂರದ ಬಳಿ ಇರುವ ಅಂಜನಾದ್ರಿ ದೇಗುಲಕ್ಕೆ ಬುಧವಾರ ಭೇಟಿ ನೀಡಿದರು. ಹನುಮಂತ ದೇವರ ದರ್ಶನ ಪಡೆದ ಅವರು, ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಇದಕ್ಕೂ ಮೊದಲು ಪಾದಗಟ್ಟೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ರಾಜ್ಯಪಾಲರು, ಬಳಿಕ ಅಲ್ಲಿಂದ 575 ಮೆಟ್ಟಿಲುಗಳನ್ನು ಹತ್ತುವ ಮೂಲಕ ಗಮನ ಸೆಳೆದರು. ವಯಸ್ಸು 77 ಆದರೂ ರಾಜ್ಯಪಾಲರು ಹುಮ್ಮಸ್ಸಿನಿಂದಲೇ ತಮ್ಮ ಕುಟುಂಬ ಸದಸ್ಯರೊಂದಿಗೆ ಬೆಟ್ಟ ಹತ್ತಿದರು.
ಬೆಟ್ಟದ ಮೇಲಿನ ದೇಗುಲದಲ್ಲಿ ಪೂಜೆ ಸಲ್ಲಿಸಿ, ಬಳಿಕ ಬೆಟ್ಟದ ಮೇಲಿಂದ ಕಾಣುವ ಹಂಪೆಯ ಸುಂದರ ದೃಶ್ಯ ಹಾಗೂ ಬೆಟ್ಟಗುಡ್ಡಗಳ ಸಾಲಿನಲ್ಲಿ ಹರಿಯುವ ತುಂಗಭದ್ರಾ ನದಿಯನ್ನು ಕಣ್ತುಂಬಿಕೊಂಡರು.
ರಾಜ್ಯಪಾಲರಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ದೇಗುಲದಿಂದ ಶಾಲು ಹೊದಿಸಿ ಗೌರವಿಸಲಾಯಿತು. ರಾಜ್ಯಪಾಲರೊಂದಿಗೆ ಅವರ ಪತ್ನಿ, ಮಕ್ಕಳು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಒಟ್ಟು 40 ಸದಸ್ಯರು ಇದ್ದರು.
ಜಿಲ್ಲಾಧಿಕಾರಿ ಸುರೇಶ್ ಹಿಟ್ನಾಳ್, ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ, ಅ.ಪ.ರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ, ಸಹಾಯಕ ಆಯುಕ್ತ ಮಹೇಶ್ ಮಾಲಗತ್ತಿ, ಅರಸಿದ್ಧಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್., ದೇಗುಲದ ಆಡಳಿತಾಧಿಕಾರಿ ಪ್ರಕಾಶ್ ರಾವ್, ತಹಶಿಲ್ದಾರ್ ರವಿ ಅಂಗಡಿ ಸೇರಿದಂತೆ ತಾಲೂಕು ಹಂತದ ಅಧಿಕಾರಿಗಳಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















