ಯಾದಗಿರಿ/ಗುರುಮಠಕಲ್ : ಸತತ ಮಳೆಯಿಂದ ನೀರಿನಲ್ಲಿ ಮುಳುಗುತ್ತಿರುವ ಬೆಳೆಗೆ ಕಂದಾಯ ಮತ್ತು ಕೃಷಿ ಇಲಾಖೆ ಜಂಟಿಯಾಗಿ ಸಮಿಕ್ಷೆ ಮಾಡಿ ತಕ್ಷಣ ಪರಿಹಾರ ನೀಡಬೇಕೆಂದು ತಾಲೂಕಿನ ತಹಶೀಲ್ದಾರ್ ರವರಿಗೆ ಕ. ರ. ವೇ ಅಧ್ಯಕ್ಷ ಶರಣಬಸಪ್ಪ ಎಲ್ಹೇರಿ ಮನವಿ ನೀಡಿದರು.
ತಾಲೂಕಿನಲ್ಲಿ ಸತತವಾಗಿ ಸರಿಯುತ್ತಿರುವ ಮಳೆಯಿಂದ ಅಪಾರ ಬೆಳೆ ಹಾನಿಯಾಗಿದ್ದು, ಕಳೆದ ನಾಲ್ಕು ದಿನಗಳಿಂದ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಬೆಳೆದ ಹೆಸರು, ಹತ್ತಿ, ತೊಗರಿ, ಇನ್ನಿತರೆ ಬೆಳೆಗಳು ನೀರಿನಲ್ಲಿ ನಿಂತಿವೆ. ಸಾಲ-ಸೂಲ ಮಾಡಿ ಒಂದು ಎಕರೆಗೆ ೪೦ ರಿಂದ ೫೦ ಸಾವಿರ ರೂಪಾಯಿಗಳು ಖರ್ಚು ಮಾಡಿ ಬೆಳೆದ ರೈತರಿಗೆ ಮಳೆರಾಯರ ಮುನಿಸಿಂದಾಗಿ ಹೊಲಗಳಲ್ಲಿ ನೀರು ನಿಂತು ಬೆಳೆದ ಬೆಳೆ ಕೊಳೆತು ಹೋಗುವ ಸ್ಥಿತಿಯಲ್ಲಿದೆ ಹಾಗಾಗಿ ರೈತರು ಕೃಷಿಯನ್ನು ಬಿಟ್ಟು ಬದುಕಲು ಗುಳೆ ಹೋಗಬೇಕು ಇಲ್ಲವೇ ಆತ್ಮಹತ್ಯೆಗೆ ಶರಣಾಗಬೇಕೆಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ವರ್ಷ ರೈತರಿಗೆ ರಸಗೊಬ್ಬರ ಸಿಗದೆ ಪರದಾಡುವ ಪರಿಸ್ಥಿತಿಯಲ್ಲಿ ಇದ್ದರೂ ಕೂಡಾ ರೈತರು ಕೃಷಿಯನ್ನು ಬಿಡದೇ ಅತಿಹೆಚ್ಚು ಬಿತ್ತನೆ ಮಾಡಿ ಬೆಳೆದಿದ್ದರು. ಆದ ಕಾರಣ ಸರಕಾರ ಎಚ್ಚೆತ್ತುಕೊಂಡು ಕಂದಾಯ ಹಾಗೂ ಕೃಷಿ ಇಲಾಖೆಗಳ ಜಂಟಿ ಸಮಿಕ್ಷೆಯನ್ನು ಕೈಗೊಂಡು ನೊಂದ ರೈತರಿಗೆ ತ್ವರಿತವಾಗಿ ಎಕರೆಗೆ ಸುಮಾರು ೫೦ ಸಾವಿರ ರೂಪಾಯಿಗಳಂತೆ ಪರಿಹಾರ ವಿತರಿಸಲು ಮುಂದಾಗಬೇಕು, ಸಂಕಷ್ಟಕ್ಕೆ ಸಿಲುಕಿದ ಅನ್ನದಾತರ ಬೆನ್ನಿಗೆ ಸರಕಾರ ನಿಂತು ರೈತರಿಗೆ ಶೀಘ್ರವಾಗಿ ಪರ್ಯಾಯ ನೀಡಬೇಕು, ಸೂಕ್ತ ಪರಿಹಾರ ನೀಡುವುದರಲ್ಲಿ ವಿಳಂಬವಾದರೆ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಯಾವತ್ತೂ ರೈತರ ಪರ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡುತ್ತೇವೆಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಶರಣಬಸಪ್ಪ ಯಲ್ಹೆರಿಯವರು ಸರಕಾರಕ್ಕೆ ಅಗ್ರಹ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಗೌರವಧ್ಯಕ್ಷ ಭೀಮಾಶಂಕರ ಪಡಿಗೆ, ಜಗದೀಶ್ ನಸಲವಾಯಿ, ಶರಣು ಮೇಧಾ, ವೆಂಕಟೇಶ ಚಿಟಿಕನಪಲ್ಲಿ, ಮೋನೇಶ್ ಮಾಧ್ವರ, ತಾಯಪ್ಪ ಕಾಳಬೆಳಗುಂದಿ, ದೇವಸಿಂಗ್ ಮಾಧ್ವರ, ಇನ್ನೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ.



















