
ಬೆಳಗಾವಿ: ಲೋಕೋಪಯೋಗಿ ಇಲಾಖೆ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕಾಗವಾಡ ಕ್ಷೇತ್ರದ ಅಭಿವೃದ್ಧಿಗಾಗಿ ವಿಶೇಷ ಕಾಳಜಿ ವಹಿಸಿದ್ದಾರೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.

ಅವರು ಶೇಡಬಾಳ ಪಟ್ಟಣದಲ್ಲಿ 4367 ಲಕ್ಷ ರೂ. ಅನುದಾನದಲ್ಲಿ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಹಾಗೂ ಪೌರಾಡಳಿತ ಇಲಾಖೆ ಆಶ್ರಯದ ಅಮೃತ 2.0 ಯೋಜನೆಯಡಿ ಮಂಜೂರಾದ ಕೃಷ್ಣಾ ನದಿ ಮೂಲದಿಂದ ಕಾಗವಾಡ, ಶೇಡಬಾಳ, ಉಗಾರ ಖುರ್ದ ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಿ ಮಾತನಾಡುತ್ತಾ ಸಚಿವ ಸತೀಶ ಜಾರಕಿಹೊಳಿಯವರು ಈಗಾಗಲೇ ಕಾಗವಾಡ ಕ್ಷೇತ್ರಕ್ಕೆ ನೂರಾರು ಕೋಟಿ ಅನುದಾನವನ್ನು ರಸ್ತೆ ಕಾಮಗಾರಿ ಯೋಜನೆಗಳಿಗೆ ಕೊಟ್ಟಿದ್ದು, ಈ ಎಲ್ಲಾ ಕಾಮಗಾರಿಗಳು ಮುಕ್ತಾಯ ಹಂತ ತಲುಪಿವೆ ಎಂದ ಅವರು ಕಾಗವಾಡ ಕ್ಷೇತ್ರದ ಸಮಸ್ಯೆಗಳ ಬಗೆಗೆ ಮತ್ತು ಇಲ್ಲಿಯ ಬೇಡಿಕೆಗಳ ಕುರಿತು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿಯವರು ತಮ್ಮ ತಂದೆ ಸಚಿವ ಸತೀಶ ಜಾರಕಿಹೊಳಿಯವರ ಗಮನಕ್ಕೆ ತಂದು ಇನ್ನಷ್ಟು ಅನುದಾನ ಮಂಜೂರು ಮಾಡಿಸಬೇಕು,
ಅಮೃತ್ 2.0 ಯೋಜನೆಯಡಿ ಶೇಡಬಾಳ, ಕಾಗವಾಡ, ಉಗಾರ ಖುರ್ದ ಗ್ರಾಮಗಳಿಗೆ ಶುದ್ಧವಾದ ಕುಡಿಯುವ ನೀರು ಪೂರೈಕೆ ಆಗುತ್ತದೆ ಈ ಯೋಜನೆಯ ಅನುಷ್ಠಾನಕ್ಕೆ ಈ ಎಲ್ಲಾ ಪಟ್ಟಣಗಳ ಸಾರ್ವಜನಿಕರು ಸಹಕಾರ ಮಾಡಬೇಕು ಎಂದು ಮನವಿ ಮಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಕಾಗವಾಡ ಕ್ಷೇತ್ರದ ಜನರ ಕಾಳಜಿ ವಹಿಸುತ್ತಿರುವ ಶಾಸಕ ರಾಜು ಕಾಗೆ ಜನಪರ ಹಾಗೂ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಶಾಸಕರ ಕಾರ್ಯಗಳಿಗೆ ಸಂಸದಳಾಗಿ ನಾನು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ಶೇಡಬಾಳ ಗ್ರಾಮದ ಗ್ರಾಮಸ್ಥರು ಸಿಸಿ ಕ್ಯಾಮರಾಗಳನ್ನು ಗ್ರಾಮದಲ್ಲಿ ಅಳವಡಿಸಲು ಅನುದಾನ ಕೇಳಿದ್ದು, ಈ ಕಾರ್ಯಕ್ಕೆ ಅನುದಾನ ಕೊಡುವುದಾಗಿ ಹೇಳಿದ ಸಂಸದರು ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ಕಾಗವಾಡ ಕ್ಷೇತ್ರದ ಅಭಿವೃದ್ಧಿಗೆ ಕೊಡುವುದಾಗಿ ಹೇಳಿದರು.
ಇದೇ ಕಾರ್ಯಕ್ರಮದಲ್ಲಿ ಶೇಡಬಾಳ ಪಟ್ಟಣ ಪಂಚಾಯತ ಅಧ್ಯಕ್ಷ ಉತ್ಕರ್ಷ ಪಾಟೀಲ, ಶೇಡಬಾಳ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಗಳಾದ ಸುರೇಶ್ ಪತ್ತಾರ್, ಪಿ.ಎಸ್.ಐ ಸಾಹೇಬರಾದ ರಾಘವೇಂದ್ರ ಖೋತ, ಕುಡಿಯುವ ನೀರು ಪೂರೈಕೆ, ಒಳ ಚರಂಡಿ ಮಂಡಳಿಯ ಆರ್.ಕೆ.ಉಮೇಶ, ಗುತ್ತಿಗೆದಾರ ಸಹ್ಯಾದ್ರಿ ಕನ್ ಸ್ಟ್ರಕ್ಷನ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸತ್ಯಜಿತ್ ನಲವಡೆ, ಕಾಂಗ್ರೆಸ್ ಮುಖಂಡರಾದ ವಿನೋದ ಬರಗಾಲೆ, ರಮೇಶ ಸಿಂದಗಿ, ಸಮುದಾಯ ಭವನ ಗುತ್ತಿಗೆದಾರ ಜ್ಯೋತಿಬಾ ಚವ್ಹಾಣ ಸೇರಿದಂತೆ ಕಾಗವಾಡ ಶೇಡಬಾಳ, ಉಗಾರ ಪಟ್ಟಣದ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿಗಾರ. ವಿಠ್ಠಲ ಖೋಕಾಟೆ ಕರುನಾಡ ಕಂದ ಅಥಣಿ.



















