ಶಿವಮೊಗ್ಗ : ಭಾರತೀಯ ಜೀವ ವಿಮಾ ನಿಗಮ, ಶಿವಮೊಗ್ಗ ವಿಭಾಗೀಯ ಕಚೇರಿಯಲ್ಲಿ ನಿನ್ನೆ ಸಂಜೆ ವಿಮಾ ಸಪ್ತಾಹಕ್ಕೆ ಅದ್ಧೂರಿ ತೆರೆ ಎಳೆಯಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಮಾರುಕಟ್ಟೆ ವ್ಯವಸ್ಥಾಪಕ ಶ್ರೀ ಸುಜಿತ್ ಕುಮಾರ್ , ಭಾರತೀಯ ಜೀವ ವಿಮಾ ನಿಗಮವು ನಡೆದು ಬಂದ 69 ವರ್ಷಗಳ ಹಾದಿಯಲ್ಲಿ ಸಾಕಷ್ಟು ಸವಾಲುಗಳು ಎದುರಾಗಿದ್ದು ಅವೆಲ್ಲವನ್ನೂ ಯಶಸ್ವಿಯಾಗಿ ಎದುರಿಸಿ ಇಂದೂ ಕೂಡ ಭಾರತದ ನಂಬರ್ ಒನ್ ಸ್ಥಾನದಲ್ಲಿ ನಿಂತಿದೆ. ಇದಕ್ಕೆಲ್ಲಾ ಕಾರಣ ಗ್ರಾಹಕರು ನಿಗಮದ ಮೇಲೆ ಇಟ್ಟಿರುವ ನಂಬಿಕೆ, ಸಿಬ್ಬಂಧಿವರ್ಗ ಹಾಗೂ ಪ್ರತಿನಿಧಿಗಳ ಅವಿರತ ಸೇವೆಯೇ ಕಾರಣ ಎಂದರು.
ಶ್ರೀ ಯೋಗೆಂದ್ರರವರು ನಿಗಮದಿಂದ ಕೈಗೊಳ್ಳುವ ಸಮಾಜ ಪರ ಸೇವೆಗಳ ಕುರಿತು ತಿಳಿಸುತ್ತಾ, ಈ ವರ್ಷ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನದ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಶ್ರೀ ಮಾಲತೇಶ ಕುಲಕರ್ಣಿಯವರು ನಿಗಮವು ನಡೆದು ಬಂದ ದಾರಿಯ ಇತಿಹಾಸವನ್ನು ಸ್ಮರಿಸಿದರು.
ಸಪ್ತಾಹದ ಸಲುವಾಗಿ ಸಾರ್ವಜನಿಕ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು, ಸಿಬ್ಬಂದಿವರ್ಗ ಹಾಗೂ ಅವರ ಕುಟುಂಬದವರಿಗೆ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸುವ ಜೊತೆಗೆ ಬರುವ ವರ್ಷದಲ್ಲಿ ಸೇವೆಯಿಂದ ನಿವೃತ್ತರಾಗುವವರಿಗೆ ಗೌರವಿಸಲಾಯಿತು.
ಕಾರ್ಯಕ್ರಮಕ್ಕೆ ಎಸ್. ಎ. ರವಿಯವರು ಸ್ವಾಗತಿಸಿದರೆ, ಸಪ್ತಾಹದ ವರದಿಯನ್ನು ನಿರಂಜನ ಮೂರ್ತಿಯವರು ವಾಚಿಸಿದರು, ಶ್ರೀಧರ ಹೆಗಡೆಯವರು ವಂದನಾರ್ಪಣೆ ಸಲ್ಲಿಸಿದರು ಹಾಗೆಯೇ ಕಾರ್ಯಕ್ರಮದ ನಿರೂಪಣೆಯನ್ನು ಬಿ.ಜಿ. ಹರೀಶ್ ರವರು ಮಾಡಿದರು. ಕಾರ್ಯಕ್ರಮದಲ್ಲಿ ಮಾರುಕಟ್ಟೆ ವಿಭಾಗದ ಪಂಕಜಾ, ಸುಧಾ, ರೇಖಾ ಮತ್ತು ಕಚೇರಿಯ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್



















