ಬಳ್ಳಾರಿ / ಕಂಪ್ಲಿ : ಸಣಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಇಟಗಿ ಗ್ರಾಮದಲ್ಲಿರುವ ನೂರು ವರ್ಷದ ಇತಿಹಾಸವುಳ್ಳ ಸಾರ್ವಜನಿಕ ರಸ್ತೆ ಇದ್ದು, ಈ ರಸ್ತೆಯನ್ನು ಬಿಟ್ಟು ಅಳತೆ ಮಾಡಬೇಕೆಂದು ಮತ್ತು ಒತ್ತುವರಿ ರಸ್ತೆ ತೆರವುಗೊಳಿಸುವಂತೆ ಆಗ್ರಹಿಸಿ, ಗ್ರಾಪಂ ಕೆಲ ಸದಸ್ಯರು, ಗ್ರಾಮಸ್ಥರು ಕಂಪ್ಲಿ ಪಟ್ಟಣದ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಕಾರ್ಯಾಲಯದಲ್ಲಿ ಸರ್ವೆ ಮೇಲ್ವಿಚಾರಕಿ ಶಾಂತಮ್ಮ ಇವರಿಗೆ ಸೋಮವಾರ ಅಳತೆ ಮತ್ತು ತಕರಾರು ಅರ್ಜಿ ಸಲ್ಲಿಸಿದರು.
ನಂತರ ಮುಖಂಡ ಈ. ಸಂಜೀವಪ್ಪ ಮಾತನಾಡಿ, ಇಟಗಿ ಗ್ರಾಮದ ಹಳೆ ಊರಿನಲ್ಲಿ ಬರುವ ಸರ್ವೆ ನಂ.176ರ 22ಎಕರೆ 22 ಸೆಂಟ್ಸ್ ವಿಸ್ತೀರ್ಣದ ಗ್ರಾಮ ಠಾಣೆಯಲ್ಲಿ ಬರುವ ಆಸ್ತಿ 163ರ ಸಾರ್ವಜನಿಕರ ರಸ್ತೆಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಇಲ್ಲಿನ ರಸ್ತೆಯನ್ನು ಜುಮ್ಮಾ ಮಸೀದಿ ಅಧ್ಯಕ್ಷ ದಾದಾ ಖಲಂದರ ಇವರು ಅಧಿಕಾರಿಗಳ ಮೇಲೆ ಪ್ರಭಾವ ಬೀರಿ, ರಸ್ತೆ ಅತಿಕ್ರಮಣ ಮಾಡಿಕೊಂಡಿದ್ದಾರೆ. ಇಲ್ಲಿನ ರಸ್ತೆಗೆ ಕಲ್ಲು, ಮಣ್ಣು ಹಾಕಿ ಸಾರ್ವಜನಿಕರು ಓಡಾಡದಂತೆ ಮುಚ್ಚಿಸಿದ್ದಾರೆ. ಮೂಲ ದಾಖಲೆಗಳು ಇಲ್ಲದೇ ಆಸ್ತಿ ಸಂಖ್ಯೆಯ 193ರ ಸಾರ್ವಜನಿಕರ ರಸ್ತೆಯ ಜಾಗವನ್ನು ಕಂಪ್ಲಿ ಉಪನೋಂದಣಿ ಕಛೇರಿಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಈಗ 9/11ಎ ಮುಟೇಶನ್ ಮಾಡಿಸಿಕೊಳ್ಳಲು ಸಣಾಪುರ ಗ್ರಾಪಂಗೆ ಅರ್ಜಿ ಸಲ್ಲಿಸಿದ್ದಾರೆ. ಆದ್ದರಿಂದ ಗ್ರಾ. ಪಂ ಅಧಿಕಾರಿಗಳು ಮೂಲ ದಾಖಲೆಗಳಿಲ್ಲದ ಅರ್ಜಿಗೆ ಮುಟೇಶನ್ ಮಾಡಿಕೊಡಬಾರದು. ಇಲ್ಲಿನ ಸಾರ್ವಜನಿಕರಿಗೆ ತುಂಬಾ ಸಮಸ್ಯೆಯಾಗಿದ್ದು, ಮತ್ತು ಅತಿಕ್ರಮಣ ಮಾಡಿಕೊಳ್ಳಲು ಮುಂದಾಗಿರುವುದು ಖಂಡನೀಯವಾಗಿದ್ದು, ಕೂಡಲೇ ಸರ್ವೆ ಅಧಿಕಾರಿಗಳು ಅಳತೆ ಮತ್ತು ನಕ್ಷೆ ಮಾಡಿಕೊಡಬಾರದು. ಇಲ್ಲಿನ ಜನರಿಗೆ ನ್ಯಾಯ ಸಿಗಬೇಕೆಂದರೆ, ಅತಿಕ್ರಮಣ ರಸ್ತೆಯನ್ನು ಬಿಡಿಸಬೇಕೆಂದು ಒತ್ತಾಯಿಸಿದರು.
ಇಲ್ಲಿನ ಇಟಗಿ ಗ್ರಾಮದಲ್ಲಿ ಸರ್ವೆಗೆ ತೆರಳಿದ್ದ ಸರ್ವೆ ಅಧಿಕಾರಿ ಶೈಲಜಾ ವಿ. ಇವರಿಗೆ ಸರ್ವೆ ಮಾಡದಂತೆ ತಕರಾರು ಮಾಡಿದ ಪರಿಣಾಮ ಅಧಿಕಾರಿಗಳು ಸರ್ವೆ ಕಾರ್ಯ ಬಿಟ್ಟು, ಕಚೇರಿಗೆ ಹಿಂದುರುಗಿದರು.
ಈ ಸಂದರ್ಭದಲ್ಲಿ ಗ್ರಾ. ಪಂ. ಸದಸ್ಯ ಮೀನುಗಾರು ಪಕ್ಕೀರಪ್ಪ, ಮುಖಂಡರಾದ ಅಗೆದಾಳ್ ವಿರೇಶ, ಗೋವಿಂದಪ್ಪ, ಹರಿಜನ ಕೆಂಚಪ್ಪ. ಚಲುವಾದಿ ಹುಲುಗಪ್ಪ, ಕಂಬಾರ ನಿಂಗಪ್ಪ, ವಡ್ಡರ ತಿಪ್ಪಣ್ಣ, ಈ.ಮಾರೆಪ್ಪ, ವೆಂಕಟೇಶ, ಯಲ್ಲಪ್ಪ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















