
ಪುರಸಭೆ ಮೇಲ್ದರ್ಜೆಯಾಗಿ ಏಳು ವರ್ಷ ಕಳೆದರೂ ಮೂಲಭೂತ ಸೌಕರ್ಯದಿಂದ ವಂಚಿತಗೊಂಡ ತರಕಾರಿ ಮಾರುಕಟ್ಟೆ.
ಗುರುಮಠಕಲ್: ಪಟ್ಟಣದ ಐತಿಹಾಸಿಕ ನಗರೇಶ್ವರ ದೇವಸ್ಥಾನದ ಹಿಂಬದಿಯಲ್ಲಿನ ಇಂದಿರಾಗಾಂಧೀ ತರಕಾರಿ ಮಾರುಕಟ್ಟೆ ಈಗ ಮದ್ಯ ಪ್ರೇಮಿಗಳ ನೆಚ್ಚಿನ ತಾಣವಾಗಿದೆ. ಇದರಿಂದಾಗಿ ತರಕಾರಿ ಮಾರುಕಟ್ಟೆಯ ಅವರಣಕ್ಕೆ ಹೋದವರಿಗೆ ವಿವಿಧ ಬ್ರಾಂಡಿಂಗ್ ನ ಮದ್ಯದ ಖಾಲಿ ಬಾಟಲಿಗಳ ದರ್ಶನವಾಗುತ್ತಿದೆ.

ವಾರದ ಸೋಮವಾರ ಮಾತ್ರ ಹಗಲು ತರಕಾರಿ ಮಾರುಕಟ್ಟೆ ಅನಿಸಿದರೆ ಬೇರೆ ದಿನಗಳಲ್ಲಿ ಅನೈತಿಕ ಚಟುವಟಿಕೆ ತಾಣವಾಗಿದೆ. ‘ನಮ್ಮಲ್ಲಿ ಯಾವ ಯಾವ ಮದ್ಯದ ಬ್ರಾಂಡಿಂಗ್ ಇವೆ ಎನ್ನುವುದರ ಕುರಿತು ಜ್ಞಾನ ಬೆಳೆಸಿಕೊಳ್ಳಲು ಇಚ್ಚಿಸುವವರಿಗೆ ಇಂದಿರಾಗಾಂಧಿ ತರಕಾರಿ ಮಾರುಕಟ್ಟೆ ಒಂದು ಸಂಗ್ರಹಾಲಯದಂತೆ ಸಹಕಾರಿಯಾದೀತು’ ಎನ್ನುವ ವ್ಯಂಗ್ಯದ ಮಾತುಗಳು ಸುತ್ತಲಿನ ಪರಿಸರದಲ್ಲಿನ ಜನರಿಂದ ಕೇಳಿಬಂದವು.
ವಾರಕೊಮ್ಮೆ ಜರುಗುವ ಸಂತೆ ಸೋಮವಾರ ದಿನ ಗ್ರಾಮೀಣ ಭಾಗದಿಂದ ಬರುವ ವ್ಯಾಪಾರಸ್ಥರು ಮಾರುಕಟ್ಟೆ ಒಳಗೆ ಕೂಡುವದಕ್ಕಿಂತ ರಸ್ತೆಯುದ್ದಕ್ಕೂ ಪಕ್ಕದಲ್ಲಿ ಕೂತು ವ್ಯಾಪಾರ ಮಾಡುವದೇ ಟ್ರಾಫಿಕ್ ಸಮಸ್ಯೆಗೆ ಕಾರಣವಾಗಿದೆ.
- ವೀರೇಶ್ ಅವಂಟಿ, ಸ್ಥಳೀಯ ವ್ಯಾಪಾರಸ್ಥರು.
ತರಕಾರಿ ಮತ್ತು ಹಣ್ಣು ಮಾರುಕಟ್ಟೆಯಲ್ಲಿರುವ ಮಳಿಗೆಗಳು ವ್ಯಾಪಾರ ಮಾಡಲು ಬಳಕೆ ಆಗುವುದರ ಬದಲು ಖಾಸಗಿ ವ್ಯಕ್ತಿಗಳ ಕಟ್ಟಿಗೆ ಇನ್ನಿತರ ಸಾಮಾನುಗಳ ಜೋಪಾನಕ್ಕೆ ಉಪಯೋಗವಾಗುತ್ತಿದೆ.
ಸತತ ಮಳೆಯಿಂದ ಮಾರುಕಟ್ಟೆ ತಡೆಗೋಡೆ ಕೆಲವೆಡೆ ಕುಸಿದ ಕಾರಣ, ಜೀವಹಾನಿ ಆಗದಂತೆ ಪುರಸಭೆ ವತಿಯಿಂದ ತಡೆಗೋಡೆ ತೆರವುಗೋಳಿಸಲಾಗಿದೆ ಎನ್ನುವುದು ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಅವರು ತಿಳಿಸಿದರು. ಆದರೆ, ತಡೆಗೋಡೆ ತೆರವುಗೊಳಿಸಿದ ಪುರಸಭೆ ಮರು ನಿರ್ಮಾಣ ಮಾಡದ್ದರಿಂದ ರಾತ್ರಿ ವೇಳೆ ಅನೈತಿಕ ಚಟುವಟಿಕೆ ಮತ್ತು ಶೌಚಕ್ಕೂ ಬಳಕೆ ಮಾಡುವವರಿಗೆ ಅನುಕೂಲ ಮಾಡಿದಂತಾಗಿದೆ. ಉಣ್ಣುವ ತರಕಾರಿಯನ್ನು ಮಲ ವಿಸರ್ಜನೆ ಮಾಡಿದ ಸ್ಥಳದಲ್ಲೇ ಮತ್ತು ಅದರ ವಾಸನೆಯಲ್ಲೇ ಕೂತು ಮಾರಬೇಕೇ? ಎನ್ನುತ್ತಾರೆ ವರ್ತಕರು.
ಗುರುಮಠಕಲ್ ಪಟ್ಟಣ ಪಂಚಾಯತಿಯಿಂದ ಪುರಸಭೆ ಕಾರ್ಯಾಲಯಕ್ಕೆ ಮೇಲ್ದರ್ಜೆಗೆ ಏರಿ 7 ವರ್ಷ ಕಳೆದರೂ ತರಕಾರಿ ಮಾರುಕಟ್ಟೆ ಯಾವುದೇ ಸರಿಯಾದ ವ್ಯವಸ್ಥೆ ಇಲ್ಲದಿರುವುದು ವ್ಯಾಪಾರಿಗಳಿಗೆ ಕಷ್ಟವಾಗಿದೆ.
ಪಟ್ಟಣದ ತರಕಾರಿ ಮಾರುಕಟ್ಟೆ ಅಭಿವೃದ್ಧಿಗೆ ಪುರಸಭೆ ಅಧಿಕಾರಿಗಳು ಯಾವಾಗ ಕ್ರಮ ಕೈಗೊಳ್ಳುವರೊ ಕಾದು ನೊಡಬೇಕಿದೆ.
ವರದಿ: ಜಗದೀಶ್ ಕುಮಾರ್ ಭೂಮಾ




















