ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪ್ರಾಚೀನ ಪರಂಪರೆಯ ತಿಮ್ಮಾಪುರದ ಮಾರುತೇಶ್ವರ, ಬಸವೇಶ್ವರ ಜಾತ್ರೆ

ಬಾಗಲಕೋಟೆ/ ಹುನಗುಂದ: ನಾಡಿನಲ್ಲಿಯೇ ಪ್ರಾಚೀನ ಪರಂಪರೆ, ಸಂಪ್ರದಾಯದ ಪ್ರತೀಕ, ಉತ್ತರಿ ಮಳೆಯಲ್ಲಿ ಬರುವ ಏಕೈಕ ಜಾತ್ರೆಯೇ ಹುನಗುಂದ ತಾಲೂಕಿನ ತಿಮ್ಮಾಪುರದ ಮಾರುತೇಶ್ವರ, ಬಸವೇಶ್ವರರ ಜಾತ್ರೆ. ಇಂದಿಗೂ ಅನೇಕ ಪವಾಡ ಸದೃಶ್ಯ ಘಟನೆಗಳು ಈ ಗ್ರಾಮದಲ್ಲಿ ನಡೆಯುತ್ತಿರುವುದು ವಿಶೇಷ ಹನಮಂತ ದೇವರಿಗೆ ಓಕುಳಿ ಮತ್ತು ಅಗ್ನಿಕುಂಡ ಮಾಡುವುದನ್ನು ಕೇಳಿದ್ದೇವೆ ಆದರೆ ಇಲ್ಲಿ ಹತಾರ ಸೇವೆಯ ಮೂಲಕ ಮಾರುತೇಶ್ವರ ಜಾತ್ರೆ ನಡೆಯುವುದು ವಿಶಿಷ್ಠವಾಗಿದೆ.


ಹೌದು, ಬಾಗಲಕೋಟೆ ವಿಜಯಪುರ ಜಿಲ್ಲೆಯಲ್ಲಿಯೇ ಐವರು ಪ್ರಾಣ ದೇವರನ್ನು ಜಾಗೃತ ದೇವರೆಂದು ಕರೆಯಲಾಗಿದೆ, ಅದರಲ್ಲಿ ಯಲಗೂರ, ಹಲಗಲಿ, ತುಳಸಿಗೇರಿ, ಅಚನೂರ ಹಾಗೂ ಕೋರವಾರ ದೇವರನ್ನು ಜಾಗೃತ ದೇವರೆಂದು ಕರೆಯುವ ವಾಡಿಕೆ. ಅದರಂತೆ ಹುನಗುಂದ ತಾಲೂಕಿನ ತಿಮ್ಮಾಪೂರದ ಮಾರುತೇಶ್ವರ ದೇವರು ಕೂಡಾ ಜಾಗೃತ ದೇವರೆಂದು ಹೆಸರಾಗಿದೆ. ಪ್ರಚಾರ ಸಿಗದ್ದಕ್ಕೆ ಜನ ಸಾಮಾನ್ಯರಿಗೆ ಈ ಮಾರುತಿ ದೇವರ ಮಹತ್ವದ ಬಗ್ಗೆ ಹೆಚ್ಚಿಗೆ ತಿಳಿದಿಲ್ಲ ಎಂಬುದೆ ಖೇದದ ಸಂಗತಿ.

ಶ್ರೀಮಾರುತೇಶ್ವರ ಸ್ಥಾಪನೆಯ ಹಿನ್ನೆಲೆ

ಈ ಊರಿನ ಪೂಜಾರಿಗಳು ಹರಪನಹಳ್ಳಿಯ ದೇಸಾಯಿ ಮನೆತನಕ್ಕೆ ಸೇರಿದವರೆಂಬ ಪ್ರತೀತಿ. ಅವರು ಒಂದು ಕಾಲದಲ್ಲಿ ಹರಪನಹಳ್ಳಿಯನ್ನು ಬಿಟ್ಟು ಬರುವ ವೇಳೆಯಲ್ಲಿ ಹುನಗುಂದ ತಾಲೂಕಿನ ದಮ್ಮೂರದ ಗುಡ್ಡದಲ್ಲಿ ಬರುತ್ತಿರುವಾಗ ಮಾರುತೇಶ್ವರನು “ಭಕ್ತನೇ. ನೀನು ಎಲ್ಲಿಗೆ ಹೋಗುವೆ? ನನ್ನನ್ನು ಅಲ್ಲಿಗೆ ಕರದುಕೊಂಡು ಹೋಗು, ನಾನು ನಿನ್ನ ಜೊತೆ ಬರುತ್ತೇನೆ” ಎಂದು ಒಂದು ಅಶರೀರವಾಣಿ ಕೇಳಿತಂತೆ ಆಗ ಆ ಭಕ್ತನು “ ನಿನ್ನನ್ನು ಒಯ್ಯುವುದು ಹೇಗೆ? ನೀನು ಭಾರವಾಗಿದ್ದಿಯಾ ಎಂದಾಗ ಮಾರುತೇಶ್ವರನು “ ನಾನು ರೋಟಿ ತೂಕದಲ್ಲಿ ಬರುತ್ತೇನೆ ” ಎನ್ನಲು, ಆ ವ್ಯಕ್ತಿ ನೆಲದಲ್ಲಿರುವ ಆ ಕಲ್ಲನ್ನು ಎತ್ತಿಕೊಳ್ಳಲು ಅದು ಬಹಳ ಹಗುರವಾಯಿತಂತೆ. ಅದನ್ನು ಎತ್ತಿಕೊಂಡು ಅಲ್ಲಿಂದ ಹುನಗುಂದ ತಾಲೂಕಿನ ತಿಮ್ಮಾಪೂರ ಕಡೆಗೆ ಹೊರಟನಂತೆ, ಊರ ಸಮೀಪಕ್ಕೆ ಬರು ಬರುತ್ತಾ ಮೂರ್ತಿ ಭಾರವಾಯಿತಂತೆ. ಆಗ ಕಲ್ಲಿನ ಮೂರ್ತಿಯನ್ನು ಕೆಳಗೆ ಇಟ್ಟು ಹೊರಟು ನಿಂತಾಗ, ಮತ್ತೆ ಮಾರುತೇಶ್ವರನ ಮೂರ್ತಿಯು ನನ್ನನ್ನು ಇಲ್ಲಿ ಬಿಟ್ಟು ಹೋಗಬೇಡ, ನನಗೆ ಡೊಳ್ಳು ಕಳಸದೊಂದಿಗೆ ಬಂದು ಕರೆದುಕೊಂಡು ಹೋಗು. ಸಂಗಟಿ ಎಡೆಯ ನೈವೇದ್ಯ ತೆಗೆದುಕೊಂಡು ಬರಲು ಊರಲ್ಲಿ ಹೇಳು ಎಂದನಂತೆ ಆ ಪ್ರಕಾರ ಅವನು ಗ್ರಾಮಕ್ಕೆ ತೆರಳಿ ಗ್ರಾಮದ ಕೆಲವು ಮನೆತನದವರನ್ನು ಕರೆದುಕೊಂಡು ಸಂಗಟಿ ಎಡೆಯ ನೈವೇದ್ಯವನ್ನು ಮಾಡಿ ಅದ್ದೂರಿ ಮೆರವಣಿಗೆ ಮೂಲಕ ಗ್ರಾಮಕ್ಕೆ ತಂದು ಮೂರ್ತಿಯನ್ನು ಪ್ರತಿಷ್ಠಾಪಿಸಿದರಂತೆ.

ಅಲ್ಲಿಂದ ಇಲ್ಲಿಯವರೆಗೂ ಮಾರುತೇಶ್ವರನಿಗೆ ಸಂಗಟಿ ನೈವೇದ್ಯವನ್ನು ಹಿಡಿಯುವ ವಾಡಿಕೆ ಇಂದಿಗೂ ನಡೆದುಕೊಂಡು ಬಂದಿದೆ. ಆಕರ್ಷಣೀಯ ಜೋಡಿ ಗುಡಿಗಳು-ಈ ಗ್ರಾಮದ ದಕ್ಷಿಣಾಭಿಮುಖವಾಗಿ ಮಾರುತೇಶ್ವರ ಮತ್ತು ಬಸವೇಶ್ವರ ದೇವಾಲಯ ಇರುವುದು ವಿಶೇಷ.
ಈ ಎರಡೂ ದೇವರ ಜಾತ್ರೆ ಒಂದೇ ದಿನ ನಡೆಯುವುದು ಮತ್ತೊಂದು ವಿಶೇಷವಾಗಿದೆ. ಮಾರುತೇಶ್ವರ ದೇವಾಲಯವನ್ನು ಹುನಗುಂದದ ಜನಾದ್ರಿ ಮನೆತನದ ಹಿರಿಯರೊಬ್ಬರು ಕಟ್ಟಿಸಿದರು. ಗ್ರಾಮಸ್ಥರು ದೇವಾಲಯಕ್ಕೆ ಗೋಪುರ ಕಟ್ಟಿ ಆ ದೇವಾಲಯವನ್ನು ಮತ್ತೊಮ್ಮೆ ಜೀರ್ಣೋದ್ದಾರ ಮಾಡಲಾಯಿತು ಎಂದು ಹೇಳಲಾಗುತ್ತಿದೆ.

ದೇವಾಲಯದ ಹಿನ್ನೆಲೆ

ಹುನಗುಂದದ ಜನಾದ್ರಿ ಮನೆತನದ ಹಿರಿಯರೊಬ್ಬರು ವೈಶ್ಯ ಧರ್ಮದಂತೆ ವ್ಯಾಪಾರ ಮಾಡಿಕೊಂಡಿದ್ದರು. ಹಳ್ಳಿ ಹಳ್ಳಿಗೆ ತಿರುಗಿ ಹತ್ತಿ ತುಂಬುವುದು ವಗೈರಿ ವ್ಯವಹಾರ ಮಾಡುವ ಅವರು ಒಮ್ಮೆ ತಿಮ್ಮಾಪುರಕ್ಕೆ ಹೋಗಿದ್ದರಂತೆ, ಅಲ್ಲಿ ಗಿಡದ ಬುಡದಲ್ಲಿ ಬಂದು ಹನಮಪ್ಪನ ಮೂರ್ತಿ ಇತ್ತಂತೆ ಅಲ್ಲಿಯೇ ಕುಳಿತು ವಿಶ್ರಾಂತಿಗಾಗಿ ಮಲಗಿದಾಗ ಹನಮಪ್ಪನು ಕನಸಿನಲ್ಲಿ ಬಂದು ನೀನು ನನ್ನ ದೇವಸ್ಥಾನ ಕಟ್ಟಿಸು ನಿನಗೆ ಒಳ್ಳೆಯದಾಗುತ್ತದೆ ಎಂದು ಹೇಳಿದನಂತೆ. ಕನಸೋ ನನಸೋ ತಿಳಿಯದು ಒಟ್ಟಿನಲ್ಲಿ ಹುನಗುಂದದ ಜನಾದ್ರಿ ಮನೆತನದ ಹಿರಿಯರೊಬ್ಬರು ಈ ದೇವಸ್ಥಾನ ಕಟ್ಟಿಸಿದರು ಎಂಬ ಪ್ರತೀತಿ ಇದೆ. ಆದರೆ ಮುಂದಿನ ದಿನಮಾನದಲ್ಲಿ ತಿಮ್ಮಾಪುರ ಗ್ರಾಮಸ್ತರು ಜೀರ್ಣೋದ್ದಾರ ಮಾಡಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ವಿಶಿಷ್ಠ ಹತಾರ ಸೇವೆ

ಈ ದೇವಾಲಯದ ಎದುರಿಗೆ ಭರಮದೇವರ ಕಟ್ಟಿ ಇದ್ದು. ಜಾತ್ರೆಯ ದಿನವಾದ ಸೆ-21 ರಂದು ಮಧ್ಯಾಹ್ನ ೧೨ಕ್ಕೆ ಹಾಗೂ ಸಂಜೆ ೬ಕ್ಕೆ ಗುಡಿಯ ಪ್ರದಕ್ಷಿಣೆ ಹಾಕುತ್ತಾ ಪೂಜಾರಿ ಹತಾರ ಸೇವೆಗೈಯುವರು. ಹರಿತವಾದ ಖಡ್ಗದ ಪೆಟ್ಟು ತಿನ್ನುವ ಪೂಜಾರಿಯ ಮೈ ಮೇಲೆ ಸ್ವಲ್ಪವೂ ಗಾಯ ಕಾಣೋದಿಲ್ಲ. ತೊಟ್ಟು ರಕ್ತದ ಕಲೆಯು ಇರೋದಿಲ್ಲ, ಇದು ಹನಮಂತ ದೇವರ ಪವಾಡವೇ ಸರಿ. ಇನ್ನು ಹತಾರವನ್ನು ಹೊಟ್ಟೆಗೆ ಇಟ್ಟು ಕೊಂಡು ಬಾಗುವ ಮೂಲಕ ಖಡ್ಗವನ್ನು ಮಣಿಸಲು ಪ್ರಯತ್ನಸುವುದು ಒಂದು ರೋಚಕ ದೃಶ್ಯ. ಇದೊಂದು ಅದ್ಭುತ ಪವಾಡ ಸದೃಶ್ಯ ಅಷ್ಟೇ ಅಲ್ಲ ಅದು ನೋಡಗರಿಗೆ ಒಂದು ರೋಮಾಂಚನಕಾರಿಯಾಗಿದೆ. ಇದಾದ ನಂತರ ಮಳೆ ಬೆಳೆಯ ಬಗ್ಗೆ ಹೇಳಿಕೆ ಹೇಳುವ ಸಂಪ್ರದಾಯವಿದೆ.

ಸುತಗಾಯಿ ಸಂಪ್ರದಾಯ

ಜಾತ್ರೆಯ ದಿನ ಸಂಜೆ ಸಕಲ ವಾಧ್ಯ ವೈಭವದೊಂದಿಗೆ ದೇವಾಲಯ ಪ್ರದಕ್ಷಿಣೆ ಹಾಕುತ್ತಾ ಪ್ರತಿ ಸುತ್ತಿಗೆ ಪ್ರತಿ ಮನೆಯವರು ಹಾಗೂ ಜಾತ್ರೆಗೆ ಬಂದವರು ೫ ರಿಂದ ೧೦೧ ಸುತಗಾಯಿ (ಟೆಂಗಿನಕಾಯಿ) ಒಡೆಯುವ ಸಂಪ್ರದಾಯವಿದೆ. ಇನ್ನು ಸುತಗಾಯಿ ಒಡೆಯುವಾಗ ಗುಡಿಯ ಎದರು ನಾಲ್ಕು ಜನರು ಕಂಬಳಿ ಹಿಡಿದು ನಿಂತಿರುತ್ತಾರೆ ಅದರ ಒಳಗೆ ಜೋರಾಗಿ ತೆಂಗಿನಕಾಯಿಯನ್ನು ಒಗೆದು ಒಡೆಯುವ ಹರಸಾಹಸ ಮಾಡುತ್ತಿರುವ ದೃಶ್ಯ ನೋಡುಗರ ಮನ ತಣಿಸುತ್ತದೆ.
ಉತ್ತರಿ ಮಳೆಯಲ್ಲಿ ನಡೆಯುವ ವಿಶೇಷ ಜಾತ್ರೆ-ಹುಬ್ಬಿ ಮಳೆಯ ಕೊನೆಯ ಪಾದದಲ್ಲಿ ಬರುವ ಶನಿವಾರದಂದು ದೇವರಿಗೆ ನೀರು ಹನಿಸುವ ಮೂಲಕ ಪ್ರಾರಂಭವಾಗುವ ಈ ಜಾತ್ರೆಯು ಉತ್ತರಿ ಮಳೆಯು ಶುಭಾರಂಭವನ್ನು ಕಾಣಬಹುದು. ಈ ಮಳೆಯು ತಾಲೂಕಿನ ಯಾವ ಭಾಗದಲ್ಲೂ ಆಗದಿದ್ದರೂ ತಿಮ್ಮಾಪೂರ ಮತ್ತು ಅದರ ಸುತ್ತಮುತ್ತಲು ಜಾತ್ರೆ ಮುಗಿಯುವರಿಗೂ ಬಿಟ್ಟು ಬಿಡದಂತೆ ಮಳೆ ಸುರಿಸುವ ಮೂಲಕ ಹಿಂಗಾರು ಬಿತ್ತನೆಯ ಮುನ್ಸೂಚನೆಯನ್ನು ನೀಡುತ್ತದೆ. ಇದೆಲ್ಲಾ ಪವಾಡ ಪುರುಷ ಹನಮಂತ ಮತ್ತು ಬಸವೇಶ್ವರರ ಕೃಪೆ ಎಂದು ಗ್ರಾಮಸ್ಥರು,ಸುತ್ತ ಮುತ್ತಲ ಊರಿನವರು ತಿಳಿದುಕೊಂಡಿದ್ದಾರೆ.
22 ರಂದು ಜೋಡಿ ದೇವರ ರಥೋತ್ಸವ-ಸೆ-೨0ರಿಂದ 22ರವರಗೆ ಮೂರು ದಿನಗಳ ಕಾಲ ಅನೇಕ ಧಾರ್ಮಿಕ ಕೈಂಕರ್ಯ ನಡೆಯುತ್ತವೆ ಸೆ-22ರಂದು ಜೋಡಿ ದೇವರುಗಳ ರಥೋತ್ಸವವು ಜರುಗುವುದು.

” ನಾಡಿನ ಹಲವು ಜಾತ್ರೆ ಉತ್ಸವಗಳಲ್ಲಿ ಭವಿಷ್ಯವಾಣಿಯನ್ನು ನುಡಿಯುವ ಪದ್ದತಿ ಆಯಾ ಪ್ರಾದೇಶಿಕತೆ ಅನುಗುಣವಾಗಿ ನಡೆದುಕೊಂಡು ಬಂದಿದೆ ಅಂತೇ ತಿಮ್ಮಾಪುರದ ಮಾರುತೇಶ್ವರನ ಜಾತ್ರೆಯಲ್ಲಿ ಕಾರಣಿಕ ವಾಣಿಯನ್ನು ಕೇಳಲು ಭಕ್ತರು ಕಾತುರದಿಂದ ಕಾಯುತ್ತಾರೆ. ನಾಡಿನಲ್ಲಿ ಮಳೆ, ಬೆಳೆ ಪ್ರಕೃತಿ ವಿಕೋಪ ಕುರಿತು ಭವಿಷ್ಯ ನುಡಿಯುತ್ತಾರೆ ಇಲ್ಲಿ ನುಡಿಯುವ ಕಾರಣಿಕ ನುಡಿಗಳು ನಿಜವಾಗಿವೆ “.

  • ಎಸ್. ಎಸ್. ಹಳ್ಳೂರ, ಹಿರಿಯ ಸಾಹಿತಿಗಳು ತಿಮ್ಮಾಪುರ.

ಲೇಖಕರು ಜಗದೀಶ ಮಲ್ಲಪ್ಪ ಹದ್ಲಿ,
ಎಲ್.ಐ.ಸಿ ಏಜೆಂಟರು, ತಿಮ್ಮಾಪುರ. ಹುನಗುಂದ ತಾಲೂಕು. ಜಿಲ್ಲೆ ಬಾಗಲಕೋಟೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!