ಬಳ್ಳಾರಿ / ಕಂಪ್ಲಿ : ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ತಾಲೂಕು ಸಮಿತಿಯಿಂದ ಪಟ್ಟಣದ ಕಾರ್ಮಿಕರ ಕಲ್ಯಾಣ ಇಲಾಖೆ ಕಚೇರಿಯಲ್ಲಿ ತಾಂತ್ರಿಕ ಸಲಹೆಗಾರ ವಿ.ವಿಘ್ನೇಶ ಇವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.
ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಫೆಡರೇಷನ್ ತಾಲೂಕು ಅಧ್ಯಕ್ಷ ಐ. ಹೊನ್ನೂರಸಾಬ್ ಮಾತನಾಡಿ, ಅರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಇವರ ಅಭಿವೃದ್ಧಿಗಾಗಿ ಬೇಡಿಕೆಗಳನ್ನು ಈಡೇರಿಸುವ ಮೂಲಕ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ. ಕಟ್ಟಡ ನಿರ್ಮಾಣದ ವೇಳೆ ಕಾರ್ಮಿಕರಿಗೆ ಅಗತ್ಯ ಸುರಕ್ಷತೆ ಒದಗಿಸಲಾದ ಬಗ್ಗೆ ಕಾರ್ಮಿಕ ಅಧಿಕಾರಿಗಳು ಖದ್ದು ಭೇಟಿ ನೀಡಿ ಪರಿಶೀಲಿಸಿ ಸುರಕ್ಷತೆ ಒದಗಿಸದ ಮಾಲೀಕರ ಮೇಲೆ ದೂರು ದಾಖಲಿಸಬೇಕು. ಪ್ರತಿ ಕಟ್ಟಡ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗುವ ಪ್ರತಿ ಕಾರ್ಮಿಕ/ಳೂ ಕಡ್ಡಾಯವಾಗಿ ಕಲ್ಯಾಣ ಮಂಡಳಿಯಲ್ಲಿ ನೋಂದಣಿ/ನವೀಕರಣ ಮಾಡಿಕೊಂಡಿರುವುದನ್ನು ಕಾರ್ಮಿಕ ಇಲಾಖೆ ಖಾತ್ರಿಪಡಿಸಬೇಕು ಹಾಗೂ ಅಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರಿಗೆ ಸಮಾನ ಕೂಲಿ/ವೇತನ ಖಾತ್ರಿಪಡಿಸಬೇಕು. ಪಿಂಚಣಿ ಪಡೆಯುತ್ತಿರುವ ಕಾರ್ಮಿಕರಿಗೆ ವೈದ್ಯಕೀಯ ಸಹಾಯಧನ ಮುಂದುವರಿಸಬೇಕು, ವಯಸ್ಸಿನ ವ್ಯತ್ಯಾಸದಿಂದ ತಿರಸ್ಕೃತವಾದ ಪಿಂಚಣಿ ಅರ್ಜಿ ಸಲ್ಲಿಸಲು ಸಾಧ್ಯವಾಗದವರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು. ಹಿಂದೆ ಪಿಂಚಣಿಗೆ ಅರ್ಜಿ ಸಲ್ಲಿಸಲು 60 ವರ್ಷದ ಬಳಿಕ 6 ತಿಂಗಳು ಅವಕಾಶವಿತ್ತು. ಈಗ ಅದನ್ನು 1 ವರ್ಷಕ್ಕೆ ಏರಿಸಲಾಗಿದೆ. ಆದರೆ, ಈ ನಡುವೆ ಸಲ್ಲಿಸಲಾದ ಅರ್ಜಿಗಳನ್ನು ತಿಸ್ಕರಿಸಲಾಗಿದೆ. ಅವುಗಳನ್ನು ಇತ್ಯರ್ಥಪಡಿಸಲು ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ನೀಡಿದ ಭರವಸೆ ಈಡೇರಿಲ್ಲ .ಈ ಬಗ್ಗೆ ಕೂಡಲೇ ಕ್ರಮವಹಿಸಬೇಕು. ಸಂಚಾರಿ ಆರೋಗ್ಯ ಘಟಕ ಮುಖಾಂತರ ನಕಲಿ ಕಾರ್ಮಿಕರನ್ನು ತಪಾಸಣೆಗೆ ಒಳಪಡಿಸುವುದನ್ನು ನಿಲ್ಲಿಸಬೇಕು. ಮನೆ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ ಸಹಾಯಧನ ನೀಡಬೇಕು. ಸ್ಲಂ ಬೋರ್ಡ್ ಗೆ ನೀಡಿರುವ 54 ಕೋಟಿ ಮಂಡಳಿ ಹಣವನ್ನು ಹಿಂಪಡೆಯಲು ಕ್ರಮವಹಿಸಬೇಕು. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾನೂನು 1996 ಮತ್ತು ಸೆಸ್ ಕಾನೂನು 1996 ಈ ಎರಡೂ ಕಾನೂನುಗಳನ್ನು ಪುನರ್ ಸ್ಥಾಪನೆಯಾಗಬೇಕು. ಹೀಗೆ ಹಲವು ಬೇಡಿಕೆಗಳನ್ನು ಇತ್ಯಾರ್ಥಪಡಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕಾರ್ಯದರ್ಶಿ ಆರ್.ನಾಗರಾಜ, ಖಜಾಂಚಿ ಗಂಗಪ್ಪ, ಪದಾಧಿಕಾರಿಗಳಾದ ಮಂಜು, ತಬರೇಜಾ, ಕೆ.ಶಾಂತರಾಜ, ವಿ.ರುದ್ರಪ್ಪ, ಭೀಮಪ್ಪ, ವೆಂಕಟೇಶ, ಕೆ.ಮಲ್ಲೇಪ್ಪ, ಪರಶುರಾಮ, ಎನ್.ನಾಗರಾಜ, ದೇವ ಸೇರಿದಂತೆ ಕಾರ್ಮಿಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















