ಬಳ್ಳಾರಿ/ ಕಂಪ್ಲಿ : ಅನ್ಯ ಸಮಾಜದವರನ್ನು ಪರಿಶಿಷ್ಟ ಪಂಗಡ (ಎಸ್ ಟಿ) ಗೆ ಸೇರಿಸುವುದನ್ನು ವಿರೋಧಿಸಿ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಕಂಪ್ಲಿ ತಾಲೂಕು ಘಟಕದಿಂದ ಪಟ್ಟಣದಲ್ಲಿ ಗುರುವಾರ ಬೃಹತ್ ಪ್ರತಿಭಟನೆಯೊಂದಿಗೆ ಆಕ್ರೋಶ ಹೊರ ಹಾಕಲಾಯಿತು. ಇಲ್ಲಿನ ವಾಲ್ಮೀಕಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಹಾಕುತ್ತಾ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟಿಸಲಾಯಿತು. ನಂತರ ತಹಶೀಲ್ದಾರ್ ಜೂಗಲ್ ಮಂಜುನಾಥಗೆ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು. ನಂತರ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕಾಧ್ಯಕ್ಷ ನೀರ್ಗಂಟಿ ವಿರೇಶ ಮಾತನಾಡಿ, ಪರಿಶಿಷ್ಟ ಪಂಗಡವು ಅತ್ಯಂತ ಹಿಂದುಳಿದ ಸಮಾಜವಾಗಿದೆ. ಸಮಾಜದಲ್ಲಿ ಶೈಕ್ಷಣಿಕ, ರಾಜಕೀಯ, ಆರ್ಥಿಕವಾಗಿ ಸಾಕಷ್ಟು ಹಿಂದುಳಿದಿದೆ. ಇದರ ನಡುವೆ ಕುರುಬ ಸಮುದಾಯ ಮತ್ತು ಇತರೆ ಜಾತಿಗಳನ್ನು ಎಸ್ಟಿಗೆ ಸೇರಿಸಲು ಮುಂದಾಗಿರುವುದು ಖಂಡನಿಯ. ಕೆಲ ಜಾತಿಯವರು ನಕಲಿ ಜಾತಿ ಪತ್ರ ಪಡೆಯುತ್ತಿದ್ದಾರೆ. ಇದರಿಂದ ನಿಜವಾದ ನಾಯಕರಿಗೆ ಅನ್ಯಾಯವಾಗುತ್ತಿದೆ. ಕೂಡಲೇ ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಇತರ ಜಾತಿ ಸೇರಿಸುವ ಕಾರ್ಯಕ್ಕೆ ಕೈಹಾಕಬಾರದು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಹೋರಾಟ ರೂಪ ದೊಡ್ಡಮಟ್ಟದಲ್ಲಿ ತಾಳಲಿದೆ ಎಂದರು. ತದ ನಂತರ ಹಿರಿಯ ಮುಖಂಡ ಬಿ.ನಾರಾಯಣಪ್ಪ ಮಾತನಾಡಿ, ನಮ್ಮ ಸಮಾಜವು ರಾಜ್ಯದಲ್ಲಿ 40 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದೆ. ಸುದೀರ್ಘ ಹೋರಾಟದ ಫಲವಾಗಿ ಶೇ. 3ರಷ್ಟು ಇರುವ ಮೀಸಲಾತಿ ಶೇ. 7ಕ್ಕೆ ಏರಿಕೆಯಾಗಿದೆ ನಮ್ಮ ಸಮಾಜದ ಅಭಿವೃದ್ಧಿ ಸಹಿಸದೇ ಬೇರೆ ಜಾತಿಯವರನ್ನು ಪರಿಶಿಷ್ಟ ಪಂಗಡ ಸೇರಲು ಪ್ರಯುತ್ನಿಸುತ್ತಿರುವುದು ಖಂಡನೀಯವಾಗಿದೆ ಎಂದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಎನ್.ರಾಮಾಂಜನೇಯಲು, ಮುಖಂಡರಾದ ವೆಂಕಟೇಶ ಸಿ.ಭರಮಕ್ಕನವರ್, ಹಾಲುಮಾರೋ ಈರಣ್ಣ, ಬೂದಗುಂಪಿ ಅಂಬಣ್ಣ, ದುರುಗಪ್ಪ, ಟ್ಯಾಕ್ಸಿ ಈರಣ್ಣ, ರಘುನಾಯಕ, ಪಿ.ವಿರೇಶ, ಪಿ.ದೇವರಾಜ, ಫ್ಯಾಕ್ಟಿ ಶೇಖರ, ಕೊಟ್ಟಾಲ್ ವಿರೇಶ, ನಾಯಕರ ವೆಂಕೋಬ, ಕೊಟ್ಟಾಲ್ ನಾಗಭೂಷಣ, ಹೊನ್ನಳ್ಳಿ ದೇವಣ್ಣ, ಬೆಳಗೋಡ್ ನಾಗರಾಜ, ತಿಮ್ಮಲಾಪುರ ದೇವು, ಪೈಲ್ವಾನ್ ವಿರೇಶ, ಸುಗ್ಗೇನಹಳ್ಳಿ ರಾಮಾಂಜಿನಿ, ಜಡೆಪ್ಪ, ಜಾನೂರು ಗೋವಿಂದಪ್ಪ, ಉಪ್ಪಾರಹಳ್ಳಿ ಪರಶುರಾಮ, ಸೋಮಲಾಪುರ ಹನುಮಯ್ಯ, ವೆಂಕಟೇಶ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















