ಶಿರಸಿ: ಪ್ರಧಾನವಾಗಿ ಆಹಾರ, ವಿಹಾರ ಮತ್ತು ವಿಚಾರದ ಕುರಿತು ಸ್ಪಷ್ಟ ಬೆಳಕನ್ನು ಚೆಲ್ಲುವ ಆಯುರ್ವೇದ ಶಾಸ್ತ್ರವು ನಮ್ಮಲ್ಲಿರಬೇಕಾದ ಜೀವನಶೈಲಿಯನ್ನು ತಿಳಿಸುತ್ತದೆ. ವಿಶೇಷವಾಗಿ ಹಿರಿಯ ನಾಗರಿಕರಿಗೆ ಅಂತೆಯೇ ಎಲ್ಲರಿಗೂ ಆರೋಗ್ಯ ಸಮಸ್ಯೆ ಉಂಟಾಗುತ್ತಿರುವುದೇ ಇವುಗಳಲ್ಲಾದ ವ್ಯತ್ಯಯದಿಂದ. ಯಾವ ಆಹಾರವನ್ನು ಎಷ್ಟು ಪ್ರಮಾಣದಲ್ಲಿ ಯಾವಾಗ ಮತ್ತು ಹೇಗೆ ಸೇವಿಸಬೇಕು?; ನಡಿಗೆ, ಆಟೋಟ, ಯೋಗ ಮುಂತಾದವುಳಿಗೆ ಏಕೆ ಪ್ರತಿನಿತ್ಯ ಕನಿಷ್ಠ ಒಂದು ಗಂಟೆಯನ್ನಾದರೂ ವಿನಿಯೋಗಿಸಬೇಕು? ಹಾಗೂ ಸಾತ್ವಿಕ ವಿಚಾರ ಮತ್ತು ಮನಸ್ಥಿತಿ ಹೇಗೆ ಆರೋಗ್ಯಕ್ಕೆ ಪೂರಕ? ಎಂಬುದನ್ನು ಸಮೀಪದ ಭೈರುಂಭೆಯ ಆಯುಷ್ಮಾನ್ ಆರೋಗ್ಯ ಮಂದಿರದ ವೈದ್ಯಾಧಿಕಾರಿ ಡಾ. ಪೂರ್ಣಿಮಾ ಎಸ್.ಬಿ. ಉದಾಹರಣೆಗಳೊಂದಿಗೆ ತಿಳಿಸಿಕೊಟ್ಟರು.
ಅವರು ಜಸ್ಟೀಸ್ ಜಿ.ಎನ್. ಸಭಾಹಿತ ಮತ್ತು ಜಸ್ಟೀಸ್ ವಿ.ಜಿ. ಸಭಾಹಿಹಿತರ ಸ್ಮರಣಾರ್ಥ, ಶಿರಸಿಯ ಗಾಯತ್ರಿ ಬಳಗದವರು ಸಂಘಟಿಸಿದ್ದ ಆರೋಗ್ಯ ಸಲಹೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಪವರ್ ಪಾಯಿಂಟ್ ಮೂಲಕ “ಹಿರಿಯ ನಾಗರಿಕರ ಆರೋಗ್ಯ ಸಂರಕ್ಷಣೆಯಲ್ಲಿ ಆಯುರ್ವೇದದ ಪಾತ್ರ ಹಾಗೂ ವಿಶೇಷ ಪ್ರಾಣಾಯಾಮದ ಪ್ರಾತ್ಯಕ್ಷಿಕೆ” ವಿಷಯವಾಗಿ ಮಾತನಾಡುತ್ತಿದ್ದರು. ಮುಂದುವರಿದು ಅವರು, 40 ವರ್ಷದ ತರುವಾಯ ನಮ್ಮ ಆರೋಗ್ಯ ಸಂರಕ್ಷಣೆಗೆ ಮಹತ್ವ ನೀಡಬೇಕು, ಬಿಸಿಯಾದ ಮತ್ತು ತಾಜಾ ಆಹಾರ ಸೇವಿಸಬೇಕು, ಸ್ಥಳೀಯವಾದ ಹಣ್ಣು, ಜಿಡ್ಡಿನ ಪದಾರ್ಥ, ಹಿತಮಿತವಾಗಿ ತುಪ್ಪ ಮತ್ತು ಕೊಬ್ಬರಿ ಎಣ್ಣೆ ಇತ್ಯಾದಿಯನ್ನು ಅವಸರ ಮಾಡದೇ, ಸಂತೋಷಯುಕ್ತ ಮನಸ್ಥಿತಿಯಲ್ಲಿ ಸೇವಿಸಬೇಕು. ರಾತ್ರಿ ಊಟದ ಬಳಿಕ ಹಾಲನ್ನು ಸೇವಿಸಬಾರದು, ವಿರುದ್ಧ ಆಹಾರದ ತಿಳುವಳಿಕೆಯೊಂದಿಗೆ ಆಹಾರಕ್ರಮ ಪಾಲಿಸಿದಲ್ಲಿ ಉತ್ತಮ ಆರೋಗ್ಯ ಶತ:ಸಿದ್ಧ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ನಮ್ಮನ್ನು ಅಗಲಿದ ಕಾದಂಬರಿಕಾರ ಎಸ್ ಎಲ್ ಭೈರಪ್ಪ ಹಾಗೂ ಗಾಯತ್ರಿ ಬಳಗದ ರೂವಾರಿ ಡಿ ಎಂ ಭಟ್ಟ ಕುಳವೆ ಅವರಿಗೆ ಶೃದ್ಧಾ0ಜಲಿ ಸಲ್ಲಿಸಲಾಯಿತು. ನಂತರ
“ಪಾದುಕಾ ಪ್ರದಾನ” ತಾಳಮದ್ದಲೆಯನ್ನು, ಯಕ್ಷಗೆಜ್ಜೆ ಮುಖ್ಯಸ್ಥೆ ಶ್ರೀಮತಿ ನಿರ್ಮಲಾ ಗೋಳಿಕೊಪ್ಪ ನಿರ್ದೇಶನದಲ್ಲಿ ಮಕ್ಕಳಾದ ರೋಹಿತ್, ಸನ್ನಿಧಿ, ಅನುಷಾ, ಅನ್ವಿತಾ, ಮನಸ್ವಿ ಮತ್ತು ಮನ್ವಿತ್ ಸಾದರಪಡಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಗಜಾನನ ಭಟ್ ತುಳಗೇರಿ ಮತ್ತು ಮದ್ದಳೆಯಲ್ಲಿ ಮಂಜುನಾಥ ಹೆಗಡೆ ಕಂಚೀಮನೆ ಸಹಕರಿಸಿದರು. ಕನ್ನಡ ಉಳಿಸಿ, ಬೆಳೆಸುತ್ತಿರುವ, ಮುಂದಿನ ಜನಾಂಗಕ್ಕೆ ಪ್ರೇರಣೆ ನೀಡುತ್ತಿರುವ ಪುಟಾಣಿ ಕಲಾವಿದರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ರವಿ ಹೆಗಡೆ ಗಡಿಹಳ್ಳಿ ಅತಿಥಿ ಪರಿಚಯದೊಂದಿಗೆ ನಿರ್ವಹಿಸಿ ವಂದಿಸಿದರು. ಬಳಗದ ಮುಖ್ಯಸ್ಥ ಎಂ.ಎಸ್. ಹೆಗಡೆ, ದಾಮೋದರ ಭಂಡಾರಿ, ಸಂಧ್ಯಾ ಭಂಡಾರಿ ಗೌರವಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಪ್ರೊ.ಕೆ ಎನ್ ಹೊಸಮನಿ, ಡಾ. ಆರ್ ಎನ್ ಹೆಗಡೆ ಭಂಡೀಮನೆ, ಪಾರ್ವತಿ ಹೆಗಡೆ, ತಾರಾ ಹೆಗಡೆ, ತ್ರಿವೇಣಿ ಹೆಗಡೆ, ಆಶಾ ಸಭಾಹಿತ ,ಲಕ್ಷ್ಮಣ ಶಾನಭಾಗ, ಗುರುಪಾದ ಹೆಗಡೆ, ಆರ್ ಎಸ್ ಬೈಲಕೇರಿ, ಡಿ ಎ ರಾಯ್ಕರ್, ಆರ್ ಎಸ್ ಹೆಗಡೆ, ಎಸ್ ವಿ ಹೆಗಡೆ, ಎಲ್ ಜಿ ಭಟ್ಗದ್ದೆ, ಎಸ್ ಎಸ್ ಹೆಗಡೆ, ವಿ ವಿ ಭಟ್ಟ, ಆರ್ ಆರ್ ಹೆಗಡೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ



















