
ಸ್ಮಶಾನದಲ್ಲಿ ಸೌಲಭ್ಯಗಳಿಲ್ಲದೆ ಅಂತ್ಯಕ್ರಿಯೆಗೆ ಪರದಾಟ
ಗುರುಮಠಕಲ್: ಪಟ್ಟಣದ ವಾರ್ಡ್ ನಂ.23 ರ ಲಕ್ಷ್ಮೀನಗರ ಬಡಾವಣೆ ಫೇಸ್-2 ವ್ಯಾಪ್ತಿಯ ಸಾರ್ವಜನಿಕರ ರುದ್ರಭೂಮಿಯನ್ನು ನೋಡಿ ‘ನಿಮ್ಮೂರಲ್ಲಿ ಸತ್ತರೂ ನೆಮ್ಮದಿಯಿಲ್ಲ, ಸತ್ತ ನಂತರವೂ ಹೆಣ ಪರದಾಡಬೇಕಿದೆ’ ಎನ್ನುವುದು ಈಚೆಗೆ ಮೃತರೊಬ್ಬರ ಅಂತ್ಯಕ್ರಿಯೆಗೆ ಭಾಗಿಯಾಗಿದ್ದವರ ಅಸಹನೆಯ ಮಾತುಗಳಿವು.
ನೆಲಕ್ಕುರುಳಲು ಸಮಯ ಕಾಯುತ್ತಾ ನಿಂತ ತಡೆಗೋಡೆ, ಪ್ರವೇಶ ದ್ವಾರದಲ್ಲೇ ಮೂಗನ್ನು ಗಡಚಿಕ್ಕುವ ದುರ್ವಾಸನೆ, ತಗ್ಗಿನಲ್ಲಿ ಜಮೆಯಾದ ಕೊಳಚೆ ನೀರು, ಒಳಗೆ ಕಣ್ಣಾಡಿಸಿದರೆ ಪೊದೆಗಳನ್ನು ಬೆಳೆಸಲೆಂದು ‘ಮೀಸಲು ಪ್ರದೇಶವಾಗಿಸಿದ್ದಾರೇನೋ’ ಎನ್ನುವಷ್ಟು ಪೊದೆಗಳು, ಒಳ ಹೋಗಲು ಸ್ಥಳವೇ ಇಲ್ಲವೇನೋ ಎನ್ನುವಷ್ಟು ಜಾಲಿ ಮುಳ್ಳು…
- ಇದು ಪಟ್ಟಣದ ವಾರ್ಡ್-23 ವ್ಯಾಪ್ತಿಯ ಲಕ್ಷ್ಮೀನಗರ ಬಡಾವಣೆಯ ಸಾರ್ವಜನಿಕ ರುದ್ರಭೂಮಿ ಪ್ರದೇಶದಲ್ಲೊ ಸುತ್ತಾಡಿದರೆ ಕಂಡುಬರುವ ದೃಶ್ಯ ವೈಭವ !
ಈ ಸ್ಮಶಾನ ಭೂಮಿ ವಾರ್ಡ್-23ರಲ್ಲಿದೆಯಾದರೂ ಬಹುತೇಕ ಪಟ್ಟಣದ ಎಲ್ಲಾ ಬಡಾವಣೆಗಳಲ್ಲಿ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೂ ಈ ರುದ್ರಭೂಮಿಯನತ್ತ ಬರುವುದು ವಾಡಿಕೆ. ರುದ್ರಭೂಮಿಯು 6 ಎಕರೆ ಪ್ರದೇಶದಲ್ಲಿದೆ. ಆದರೆ, ರುದ್ರಭೂಮಿಗೆ. ‘ಮೀಸಲಿದ್ದ 6 ಎಕರೆ ಜಮೀನಿನಲ್ಲೂ ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ’ ಎಂದು ಹಿರಿಯ ನಾಗರಿಕರೊಬ್ಬರು ಅನುಮಾನ ವ್ಯಕ್ತಪಡಿಸಿದರು.
ಮಳೆಯಿಂದಾಗಿ ರುದ್ರಭೂಮಿಯಲ್ಲಿ ಕಳೆ ಸಸಿ ಬೆಳೆದಿದ್ದು, ಪೊದೆಗಳೂ ಹೆಚ್ಚಿವೆ. ತಡೆಗೋಡೆ ನಿರ್ಮಿಸಿ 20 ವರ್ಷಗಳಾಗುತ್ತಿದೆ. ಈಗಾಗಲೇ ಅಲ್ಲಲ್ಲಿ ಕುಸಿಯುವ ಹಂತದಲ್ಲಿ ವಾಲಿದೆ ಮತ್ತು ಬಹುತೇಕ ಶಿಥಿಲಾವಸ್ಥೆಗೆ ತಲುಪಿದೆ. ಗೌರವಯುತ ಬದುಕು, ಗೌರವಯುತ ಸಾವಿನ ಹಕ್ಕು ಪ್ರತಿಯೊಬ್ಬರಿಗಿದೆ. ಆದರೆ, ನಿಧನರಾದವರ ಸಂಸ್ಕಾರಕ್ಕೆ ಪರದಾಡುವ ಸ್ಥಿತಿಯಿರುವುದು ವಿಪರ್ಯಾಸ.
ಜತೆಗೆ ಸುತ್ತಲೂ ವಸತಿ ಪ್ರದೇಶವಿದ್ದು, ಸ್ಮಶಾನದಲ್ಲಿನ ಕೊಳಚೆ ನೀರಿನಿಂದ ಸೊಳ್ಳೆ ಕಾಟ ಹೆಚ್ಚಿದೆ ಮತ್ತು ಪೊದಗಳು ಬೆಳೆದು ಕೀಟಗಳು, ಸರ್ಪಗಳೂ ಇರುವ ಸಾಧ್ಯತೆಯಿದೆ. ಆದ್ದರಿಂದ ಜನತೆಯಲ್ಲಿ ಭಯದ ವಾತಾವರಣ ಮೂಡಿಸಿದೆ.
ಪುರಸಭೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ‘ಸತ್ತವರಿಗೆ ಗೌರವಯುತ ಸಂಸ್ಕಾರಕ್ಕೆ’ ಅನುವಾಗಿಸುವ ನಿಟ್ಟಿನಲ್ಲಿ ರುದ್ರಭೂಮಿಗೆ ಮೂಕಸೌಕರ್ಯ ಮತ್ತು ಸ್ವಚ್ಛತೆ ಕಲ್ಪಿಸಬೇಕು ಎನ್ನುವುದು ರಾಘವೇಂದ್ರ ಮನ್ನೆ, ಮಲ್ಲಪ್ಪ ಬಿಚ್ಚಲ್, ನಾಗಪ್ಪ ನಿಂಗವೋಳ ಸೇರಿದಂತೆ ಸ್ಥಳೀಯರ ಮನವಿ.
ಲಕ್ಷ್ಮೀನಗರ ಬಡಾವಣೆಯಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ಅಂತ್ಯ ಸಂಸ್ಕಾರಕ್ಕೆ ಸಮಸ್ಯೆಯಾಗುತ್ತಿದೆ. ಕನಿಷ್ಟ ಬೆಳೆದ ಪೊದೆಗಳನ್ನು ಸ್ವಚ್ಛಗೊಳಿಸಿ, ಕೊಳಚೆ ನಿಲ್ಕದಂತೆ ವ್ಯವಸ್ಥೆ ಮಾಡಬೇಕು.
- ಮಹೇಶ ಗಡ್ಡಂ, ಸ್ಥಳೀಯ ನಿವಾಸಿ
ಶಿಥಿಲಾವಸ್ಥೆಗೆ ತಲುಪಿದ ತಡೆಗೋಡೆ ದುರಸ್ಥಿ ಮಾಡಿ. ಅಂತ್ಯಕ್ರಿಗೆ ಬಂದವರಿಗೆ ಕೂಡಲು ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಮನವಿ.
- ವಿಜಯಕುಮಾರ ಮನ್ನೆ
ವರದಿ: ಜಗದೀಶ್ ಕುಮಾರ್ ಭೂಮಾ



















