ಕಲಬುರಗಿ: ಮೈಸೂರಿನಲ್ಲಿ ಭಯಾನಕ ಸ್ಥಿತಿಯಲ್ಲಿ ಬಾಲಕಿ ದೌರ್ಜನ್ಯಕ್ಕೆ ಒಳಗಾಗಿ ಬರ್ಬರ ಕೊಲೆಯಾಗಿರುವ ಘಟನೆ ಖಂಡನೀಯ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷರಾದ ಶ್ರೀಮತಿ ಪದ್ಮಿನಿ ಹಾಗೂ ಕಾರ್ಯದರ್ಶಿ ಶಾಂತಾ ಸರಡಗಿ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ನಾಡಹಬ್ಬ ದಸರೆಯ ಸಡಗರ ಮರೆಯುವ ಮುನ್ನವೇ ಒಂದರ ಮೇಲೊಂದು ಕೊಲೆ, ಅತ್ಯಾಚಾರದ ಘಟನೆಗಳ ಸುದ್ದಿ ಕೇಳಿ ಜನರು ಬೆಚ್ಚಿ ಬೀಳುವ ಆತಂಕಕಾರಿ ಬೆಳವಣಿಗೆ ಸೃಷ್ಟಿಯಾಗಿದೆ. ಶಾಂತಿ, ಸುವ್ಯವಸ್ಥೆಯ ಸುರಕ್ಷಿತ ನಗರವೆಂದು ಖ್ಯಾತಿ ಪಡೆದಿದ್ದ ಮೈಸೂರು ನಗರದ ಒಡಲಲ್ಲಿ ಇತ್ತೀಚೆಗೆ ಡ್ರಗ್ಸ್ ಫ್ಯಾಕ್ಟರಿ ಕಾರ್ಯ ನಿರ್ವಹಿಸುತ್ತಿತ್ತು ಎಂಬ ಆಘಾತಕಾರಿ ಸುದ್ದಿ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಆ ನಂತರ ಒಂದರ ಮೇಲೊಂದರಂತೆ ಕೊಲೆ ಸುಲಿಗೆಯ ವರದಿಗಳು ಪ್ರಕಟವಾಗುತ್ತಿವೆ. ಮೊನ್ನೆಯಷ್ಟೇ ವಸ್ತು ಪ್ರದರ್ಶನ ಮೈದಾನದ ಬಳಿ ಯುವಕನೊಬ್ಬನ ಕೊಲೆಯಾದ ಸ್ಥಳದಲ್ಲೇ 10 ವರ್ಷದ ಹೆಣ್ಣು ಮಗು ಕೊಲೆಗೈದ ಘಟನೆ ಅತ್ಯಂತ ಹೇಯ ಹಾಗೂ ಮಾನವೀಯ ಹೃದಯವನ್ನು ಕಲಕುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಮುಗ್ಧ ಬಾಲೆಯ ಮೇಲೆ ಈ ರಾಕ್ಷಸಿ ಕೃತ್ಯ ವೆಸಗಿದ ಪಾತಕಿಗಳನ್ನು ಪತ್ತೆ ಹುಚ್ಚುವ ನಿಟ್ಟಿನಲ್ಲಿ ದುರುಳನೊಬ್ಬನ ಬಂಧನ ಹಾಗೂ ಆತನ ಮೇಲೆ ಗುಂಡು ಹಾರಿಸಿರುವ ಪೊಲೀಸರ ಕ್ರಮ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಬಾಲಕಿ ಮೇಲಿನ ಕ್ರೌರ್ಯಕ್ಕೆ ಬೆಚ್ಚಿಬಿದ್ದಿರುವ ಜನರು ಹಾಗೂ ಸಂಘ ಸಂಸ್ಥೆಗಳ ಆಕ್ರೋಶ ತಣ್ಣಗಾಗಿಸಲು ಪೊಲೀಸರು ಪ್ರಕರಣ ತಣ್ಣಗಾಗಿಸಲು ಕಥೆ ಹೆಣೆಯುತ್ತಿದ್ದಾರೆ ಎಂಬ ಮಾತು ಜನ ವಲಯದಲ್ಲಿ ಕೇಳಿಬರುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
- ಕರುನಾಡ ಕಂದ



















