
ಬಳ್ಳಾರಿ / ಕಂಪ್ಲಿ : ಸರ್ಕಾರ ಮಾಡದಂತಹ ಕೆಲಸಗಳನ್ನು ಧರ್ಮಸ್ಥಳ ಟ್ರಸ್ಟ್ನವರು ಅಚ್ಚುಕಟ್ಟಾಗಿ ಮಾಡುವ ಮೂಲಕ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಅನುವು ಮಾಡಿಕೊಟ್ಟಿದೆ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.
ಪಟ್ಟಣದ ವೀರಶೈವ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಂಪ್ಲಿ ತಾಲೂಕು, ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಮಾರುತಿನಗರ ವಲಯ, ಪ್ರಗತಿ ಬಂಧು ಸ್ವ-ಸಹಾಯಕ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿ, ಧರ್ಮಸ್ಥಳ ಸಂಘವು ಬಹಳಷ್ಟು ಕುಟುಂಬಗಳಿಗೆ ಆಧಾರಸ್ತಂಬವಾಗಿದೆ, ಮಹಿಳೆಯರಿಗೆ ಸಕಾಲಯದಲ್ಲಿ ಸಾಲ ಸೌಲಭ್ಯ ನೀಡಿ, ಅರ್ಥಿಕವಾಗಿ ಅಭಿವೃದ್ಧಿ ಹೊಂದಲು ಮತ್ತು ಸ್ವಾವಲಂಬನೆಯ ಬದುಕಿಗೆ ಸಾಕ್ಷಿಯಾಗಿದೆ. ಸಿದ್ದರಾಮಯ್ಯ ಸರ್ಕಾರ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕಿಗೆ ಅನ್ನಭಾಗ್ಯ, ಗೃಹ ಲಕ್ಶ್ಮೀ, ಗೃಹ ಜ್ಯೋತಿ, ಯುವ ನಿಧಿ, ವಿದ್ಯುತ್ ಸೇರಿಂತೆ ನಾನಾ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದು, ಇದರಿಂದ ಸಾಕಷ್ಟು ಕುಟುಂಬಗಳು ನೆಮ್ಮದಿಯ ಬದುಕು ಸಾಗಿಸಲು ಸಾಧ್ಯವಾಗಿದೆ. ಸರ್ಕಾರದ ಜೊತೆ ಜೊತೆಗೆ ಧರ್ಮಸ್ಥಳ ಸಂಘವು ಬಡವರ ಬದುಕಿಗೆ ಆಶಕಿರಣವಾಗಿದೆ ಎಂದರು.
ಹೆಬ್ಬಾಳ್ ಬೃಹನ್ಮಠದ ನಾಗಭೂಷಣ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿ ಇವರು ದಿವ್ಯ ಸಾನಿಧ್ಯವಹಿಸಿ ಮಾತನಾಡಿ, ಧರ್ಮಸ್ಥಳ ಟ್ರಸ್ಟ್ವತಿಯಿಂದ ನೀಡುವ ಸಾಲ ಸೌಲಭ್ಯಗಳನ್ನು ಪಡೆದು, ಸಕಾಲದಲ್ಲಿ ತುಂಬುವ ಮೂಲಕ ಆರ್ಥಿಕವಾಗಿ ಸಬಲರಾಗಲು ಅನುವು ಮಾಡಿಕೊಟ್ಟಿದೆ. ದುಡಿಮೆಯಲ್ಲಿ ಬರುವಂತಹ ಹಣದಲ್ಲಿ ಸ್ವಲ್ಪ ಹಣವನ್ನು ಕೂಡಿಟ್ಟರೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಸಮೃದ್ಧಿಯ ಜೀವನ ನಿರ್ವಾಹಣೆಗೆ ಅನುಕೂಲವಾಗಿದೆ ಎಂದರು.
ನಂತರ ತಾಲೂಕು ಯೋಜನಾಧಿಕಾರಿ ಎಲ್.ರಾಘವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಧರ್ಮಸ್ಥಳ ಟ್ರಸ್ಟ್ವತಿಯಿಂದ ಇಂತಹ ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮಗಳ ಮೂಲಕ ಒಗ್ಗೂಡಿಸುವ ಜೊತೆಗೆ ಅವರ ಬದುಕಿಗೆ ನೆಮ್ಮದಿ ತರುವಂತಹ ಕೆಲಸವನ್ನು ಮಾಡಲಾಗುತ್ತಿದೆ. ದೇವರ ಭಕ್ತಿ ಇದ್ದರೆ, ಇಷ್ಟಾರ್ಥಗಳು ಲಭಿಸಲು ಸಾಧ್ಯ ಎಂದರು.
ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಡಾ.ವೆಂಕಟೇಶ ಸಿ.ಭರಮಕ್ಕನವರ್ ಅಧ್ಯಕ್ಷತೆ ವಹಿಸಿದ್ದರು.
250ಕ್ಕೂ ಹೆಚ್ಚು ಜೋಡಿಗಳಿಂದ ಸಾಮೂಹಿಕ ಸತ್ಯಾನಾರಾಯಣ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ತದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದಿಶಾ ಸಮಿತಿ ಸದಸ್ಯ ಎ.ಸಿ.ದಾನಪ್ಪ, ಪುರಸಭೆ ಸದಸ್ಯರಾದ ಎನ್.ರಾಮಾಂಜಿನೇಯಲು, ಸಿ.ಆರ್.ಹನುಮಂತ, ಮುಖಂಡರಾದ ಕೆ.ಎಂ.ಹೇಮಯ್ಯಸ್ವಾಮಿ, ಅರವಿ ಬಸವನಗೌಡ, ಚನ್ನಯ್ಯಸ್ವಾಮಿ, ಜಗದೀಶ ರಾಯ್ಕರ್, ಬಿ.ಸಿದ್ದಪ್ಪ, ಎಚ್.ಮಹೇಶ್ವರಿ, ಸಂಜೀವಕುಮಾರ, ವಿದ್ಯಾಶಂಕರ್, ರಾಮು, ಎಸ್.ಡಿ.ಬಸವರಾಜ, ಮಂಜುನಾಥ, ಶೋಭಾ, ಮಂಜುಳಾ ಐಹೊಳ್ಳಿ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















