
ದಿಶಾ ಸಮಿತಿ ಸದಸ್ಯ ಎ.ಸಿ.ದಾನಪ್ಪ ಭೇಟಿ : ದುರಸ್ಥಿಗೆ ಆಗ್ರಹ
ಬಳ್ಳಾರಿ/ ಕಂಪ್ಲಿ : ಕಂಪ್ಲಿ-ಕೋಟೆಯಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಕೆಳ ಭಾಗದ ಕಟ್ಟಡದಲ್ಲಿ ನೀರಿನ ತೇವದಿಂದಾಗಿ ನೀರು ಚಿಮ್ಮುತ್ತಿರುವ ಸ್ಥಳಕ್ಕೆ ಕರ್ನಾಟಕ ರಾಜ್ಯ ದಿಶಾ ಸಮಿತಿ ಸದಸ್ಯ ಎ.ಸಿ.ದಾನಪ್ಪ ಶನಿವಾರ ಭೇಟಿ ನೀಡಿ, ಪರಿಶೀಲಿಸಿದರು.
ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಕಂಪ್ಲಿ-ಗಂಗಾಗಾವತಿ ಮತ್ತು ಎರಡು ಜಿಲ್ಲೆಗಳ ಸಂಪರ್ಕ ಕಲ್ಪಿಸುವ ಹಿತದೃಷ್ಠಿಯಿಂದ ಬಹಳ ವರ್ಷಗಳ ಹಿಂದೆ ಇಲ್ಲಿನ ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗಿದೆ. ಈಗಾಗಲೇ ಬಹಳಷ್ಟು ಹಳೆಯದಾದ ಸೇತುವೆ ದುರಸ್ಥಿಯಲ್ಲಿ ಸಿಲುಕಿದೆ. ಆದರೆ, ಈಗ ಕಂಪ್ಲಿ-ಕೋಟೆ ಪ್ರದೇಶದ ಸೇತುವೆ ಕಳೆಗಡೆಯ ಕಟ್ಟಡದಲ್ಲಿ ನೀರು ಹರಿಯುತ್ತಿದೆ. ಇದರಿಂದ ಸೇತುವೆಯು ನೀರಿನ ತೇವದಿಂದ ಕುಸಿಯುವ ಆತಂಕ ಮನೆ ಮಾಡಿದೆ. ಇಲ್ಲಿನ ಸೇತುವೆ ಮೇಲೆ ಸಾಕಷ್ಟು ವಾಹನ ಸವಾರರು, ಸಾರ್ವಜನಿಕರ ಓಡಾಡುತ್ತಿದ್ದು, ಏನಾದರೂ ಸೇತುವೆ ಕುಸಿದರೆ ದೊಡ್ಡ ಅನಾಹುತೆವೇ ಸಂಭವಿಸಲಿದೆ. ಆದ್ದರಿಂದ ಎಚ್ಚರವಹಿಸಿ, ಸೇತುವೆ ದುರಸ್ಥಿ ಮಾಡಬೇಕು, ಭಾರೀ ಗಾತ್ರದ ವಾಹನಗಳ ಸಂಚಾರದಿಂದ ಇಲ್ಲಿನ ಸೇತುವೆ ಕಟ್ಟಡದಲ್ಲಿ ನೀರು ಲೀಕೇಜ್ ಆಗಿ ಪೂರ್ಣವಾಗಿ ಶಿಥಿಲಗೊಂಡಿದೆ. ರೈತರು ತಿಳಿಸಿದ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಗೊತ್ತಾಗಿದೆ ಇಲ್ಲಿನ ಸೇತುವೆ ಅವನತಿಗೆ ಸಾಗುತ್ತಿರುವ ವಿಷಯ. ಯಾವ ಕ್ಷಣದಲ್ಲಾದರೂ ಕೂಡ ಸೇತುವೆ ಕುಸಿಯಬಹುದಾಗಿದೆ. ಇದರಿಂದ ತುಂಬಾ ಗಂಭೀರದ ಸಮಸ್ಯೆ ಉಂಟಾಗಿದ್ದು, ಕೂಡಲೇ ಸ್ಥಳೀಯ ಶಾಸಕರ ಗಮನಕ್ಕೆ ತಂದು ಸಂಬಂಧಪಟ್ಟ ಅಧಿಕಾರಿಗಳಿಂದ ದುರಸ್ಥಿ ಕಾರ್ಯ ಮಾಡುವಂತೆ ಒತ್ತಡ ಹಾಕುತ್ತೇನೆ ಈಗಾಗಲೇ ಇಲ್ಲಿನ ಕಂಪ್ಲಿ ಸೇತುವೆ ಸ್ಥಳಕ್ಕೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿ ಭೇಟಿ ನೀಡಿ ಪರಿಶೀಲಿಸಿದ್ದಾರೆ ಮತ್ತು ಹಲವು ಬಾರಿ ಸದನದಲ್ಲಿ ಹೊಸ ಸೇತುವೆ ಮಾಡುವಂತೆ ಶಾಸಕ ಗಣೇಶ ಧ್ವನಿ ಎತ್ತಿದ್ದಾರೆ. ಆದರೂ ಸಹ ಸೇತುವೆ ಆಗುತ್ತಿಲ್ಲ. ಮುಂದಿನ ತಿಂಗಳಲ್ಲಿ ನಡೆಯುವ ದಿಶಾ ಸಮಿತಿ ಸಭೆಯಲ್ಲಿ ಸಿಎಂ ಅವರ ಗಮನಕ್ಕೆ ತರಲಾಗುವುದು. ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಲ್ಲಾದರೂ ಕೂಡ ಈ ಸೇತುವೆಗೆ ಅನುದಾನ ಬಿಡುಗಡೆ ಮಾಡಿಸಿ, ಸೇತುವೆಗೆ ಪೂರಕವಾದ ವಾತಾವರಣ ಸೃಷ್ಠಿಸಲಾಗುವುದು ಎಂದರು.
ವರದಿ : ಜಿಲಾನಸಾಬ್ ಬಡಿಗೇರ್



















