
ಕೊಪ್ಪಳ: ಕನಕಗಿರಿ ಎಪಿಎಂಸಿ ಸಮುದಾಯ ಭವನದಲ್ಲಿ ಸಾಕಷ್ಟು ಬಡತನದ ಮಧ್ಯೆಯೇ ಹಲವಾರು ತೊಂದರೆ ತಾಪತ್ರಯಗಳನ್ನು ಎದುರಿಸಿ ಉನ್ನತ ಶಿಕ್ಷಣ ಪಡೆಯುವ ಮೂಲಕ ಜೀವನದಲ್ಲಿ ಸಾಧನೆಯ ಹಾದಿಯ ಜೊತೆಗೆ ದೇಶಕ್ಕೆ ಮಹಾನ್ ಸಂವಿಧಾನ ರಚಿಸಿದ ಡಾ. ಬಿ. ಆರ್ ಅಂಬೇಡ್ಕರ್ ರ ಆದರ್ಶಗಳನ್ನು ಜೀವನದಲ್ಲಿ ಪ್ರತಿಯೊಬ್ಬರೂ ಪ್ರೇರಣೆ ಪಡೆದು ಮುನ್ನೆಡೆಯಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೋ. ಬಿ. ಕೃಷ್ಣಪ್ಪ ಸ್ವಾಭಿಮಾನಿ ಸಂಘಟನೆ ಜಿಲ್ಲಾಧ್ಯಕ್ಷ ಪರಶುರಾಮ್ ಕೆರೆಹಳ್ಳಿ ಕರೆ ನೀಡಿದರು.
ಅವರು ಕನಕಗಿರಿ ಎಪಿಎಂಸಿ ಸಮುದಾಯ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ. ಕೃಷ್ಣಪ್ಪ ಸ್ಥಾಪಿತ ಸ್ವಾಭಿಮಾನಿ ಸಂಘಟನೆ ಆಯೋಜಿಸಿದ್ದ ಶ್ರೀ ಛತ್ರಪತಿ ಶಾಹೋ ಮಹಾರಾಜ್ ಅವರ 151ನೇ ಜಯಂತೋತ್ಸವ ಮತ್ತು ಕನಕಗಿರಿ ತಾಲೂಕು ಕೆ ಡಿ ಎಸ್ ಎಸ್ ಪದಾಧಿಕಾರಿಗಳ ಆಯ್ಕೆ ಸಮಾರಂಭದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಆಚಾರ ವಿಚಾರಗಳಿಂದ ಬೆಳೆಸಲು ಮುಂದಾಗಬೇಕು, ಮಕ್ಕಳಿಗೆ ಆಸ್ತಿ ಮಾಡದೇ, ಉತ್ತಮ ಶಿಕ್ಷಣ ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಕಿವಿ ಮಾತು ಹೇಳುವ ಮೂಲಕ ಸಂಘಟನೆಗಳು ಕೇವಲ ತಮ್ಮ ವೈಯಕ್ತಿಕ ಹಿತಾಸಕ್ತಿಗಳಿಗೆ ಉಪಯೋಗಿಸದೇ ತುಳಿತಕ್ಕೊಳಗಾದ ವ್ಯಕ್ತಿಗಳ ಹಿಂದೆ ನಿಲ್ಲುವ ಕೆಲಸ ಮಾಡಬೇಕು ಹಾಗೂ ನಮ್ಮ ಸಮಾಜ ಆರ್ಥಿಕವಾಗಿ ಶೈಕ್ಷಣಿಕವಾಗಿ ಬಲಿಷ್ಠರಾಗಲು ಶಿಕ್ಷಣದೊಂದಿಗೆ ಹೋರಾಟ ಮನೋಭಾವನೆ ಒಂದು ಬೇಕು ಎಂದು ಪರಶುರಾಮ್ ಕೆರೆಹಳ್ಳಿ ಹೇಳಿದರು.
ನಂತರ ಕಲ್ಯಾಣ ಕರ್ನಾಟಕ ವಿಭಾಗೀಯ ಸಂಚಾಲಕ ಹಂಪೇಶ್ ಹರಿಗೋಲ ಮಾತನಾಡಿ ಮಹಾನ್ ನಾಯಕರ ಜಯಂತಿಗಳು ಆಚರಣೆಗೆ ಸೀಮಿತವಾಗದೇ ಅವರ ಆದರ್ಶ ಪ್ರತಿಯೊಬ್ಬರಿಗೂ ದಾರಿ ದೀಪವಾಗಬೇಕು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಉನ್ನತ ವ್ಯಾಸಾಂಗಕ್ಕೆ ಶ್ರೀ ಛತ್ರಪತಿ ಸಾಹು ಮಹಾರಾಜ ಅವರು ಬೆನ್ನೆಲುಬಾಗಿ ನಿಂತು ಸಹಾಯ ಸಹಕಾರ ನೀಡಿದವರು ಅಂತವರ ಆದರ್ಶ ಪರಿಪಾಲನೆ ಮಾಡಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.
ಪಂಪಾಪತಿ ಸಿದ್ದಾಪುರ ಮಾತನಾಡಿ ಶ್ರೀ ಛತ್ರಪತಿ ಶಾಹೂ ಮಹಾರಾಜರವರು ಶೋಷಿತರ, ಬಡವರ ಪರ ಧ್ವನಿ ಎತ್ತಿ ನಿಲ್ಲುವ ಮೂಲಕ ಕೃಷಿ ಮತ್ತು ಆರ್ಥಿಕ ಸುಧಾರಣೆಯ ಜೊತೆಗೆ ಸಮಾಜದಲ್ಲಿ ಸಮಾನತೆ ತರುವಲ್ಲಿ ಶ್ರಮಿಸಿದವರು ಇಂತಹ ಮಹನೀಯರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಜೀವನ ಸಾಗಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಂತರ ಹನುಮಂತಪ್ಪ ವಡ್ಡರಹಟ್ಟಿ ಮಾತನಾಡಿ ತಮ್ಮ ಜೀವನವನ್ನೇ ಪರರಿಗೆ ಮುಡುಪಾಗಿಟ್ಟ ಏಕೈಕ ವ್ಯಕ್ತಿ ಯಾರಾದರೂ ಇದ್ದರೆ ಅವರ ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಅವರು, ಬೌದ್ಧ ಬಸವ ತತ್ವ ಆದರ್ಶ ಪರಿಪಾಲನೆ ಮಾಡುವ ಮೂಲಕ ದೇಶಕ್ಕೆ ಮಹಾನ್ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕ. ಕ. ವಿಭಾಗೀಯ ಉಪಾಧ್ಯಕ್ಷ ಹನುಮಂತಪ್ಪ ನಾಯಕ್ ವಡ್ರಟ್ಟಿ, ಯಮನೂರಪ್ಪ ನಾಯಕ ಹುಲಿಹೈದರ, ದುರ್ಗೇಶಪ್ಪ ಐಹೊಳಿ, ವೆಂಕಟೇಶ ಕನಕಗಿರಿ, ದುರ್ಗಪ್ಪ ಹೊಸಳ್ಳಿ, ಸಣ್ಣದುರ್ಗಪ್ಪ ಕನಕಗಿರಿ, ಹನುಮ ಗೌಡ ವಿಠಲಾಪುರ, ಘಟ್ಟೆಪ್ಪ ಹಿರೇಕುರುಬರ, ವೀರಪ್ಪ ನಾಯಕ ಗಟಾರಿ, ರಾಘವೇಂದ್ರ ಭಂಡಾರಿ ಸೇರಿದಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನ ಸಂಘಟನೆ ಜಿಲ್ಲಾ, ಹಾಗೂ ತಾಲೂಕ ಪದಾಧಿಕಾರಿಗಳು, ಸಮಾಜದ ಹಿರಿಯರು, ಯುವಕರು, ಮುಖಂಡರು ಉಪಸ್ಥಿತರಿದ್ದರು.
- ಕರುನಾಡ ಕಂದ ಪತ್ರಿಕೆ



















