ಲಾಭಕ್ಕಿಂತ ಸೇವೆಯೇ ಮುಖ್ಯ ಎಂಬ ಧ್ಯೇಯದೊಂದಿಗೆ ನಮ್ಮ ಸಂಘ ನಡೆಯುತ್ತಿದೆ – ಶ್ರೀಧರ್
ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಅರೇಮಲ್ಲೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 50ನೇ ವರ್ಷದ ವರ್ಷಾಚರಣೆ ಹಾಗೂ ಗೋದಾಮು ಕಟ್ಟಡ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಶ್ರೀಧರ್ ರವರು ನಮ್ಮ ಸಹಕಾರ ಸಂಘವು 1960 ರಲ್ಲಿ ಕೇವಲ 1500 ಶೇರು ಹಣದಿಂದ ಪ್ರಾರಂಭವಾಗಿ ಇಂದು ಹೆಮ್ಮರವಾಗಿ ಬೆಳೆದಿದೆ. ಸುಮಾರು ನಾಲ್ಕು ವರ್ಷಗಳ ಹಿಂದೆ ಕಟ್ಟಡವನ್ನು ನಿರ್ಮಿಸಲು ಪ್ರಾರಂಭಿಸಿ ಹಲವಾರು ಕಾನೂನು ಅಡೆತಡೆಗಳ ನಡುವೆ ಇಂದು ಸಂಪೂರ್ಣವಾಗಿ ನಿರ್ಮಾಣಗೊಂಡಿದೆ. ನಮ್ಮ ಸಂಘದಿಂದ ಕಾರ್ಯದರ್ಶಿಯವರ ಮುಂದಾಲೋಚನೆ ಹಾಗೂ ಸಹಕಾರಿಗಳ ಮಾರ್ಗದರ್ಶನದಲ್ಲಿ ಎ ಟಿ ಎಂ, ಎಣ್ಣೆಗಾಣ, ಸೇರಿದಂತೆ 10 ಹಲವು ವೈವಿಧ್ಯಮಯ ಸೇವೆಗಳನ್ನು ನೀಡುತ್ತಾ ಬಂದಿದ್ದೇವೆ. ನಮ್ಮ ಸಂಘಕ್ಕೆ ಲಾಭಕ್ಕಿಂತ ಸದಸ್ಯರ ಸೇವೆಯೇ ಮುಖ್ಯ ಎಂಬ ಧ್ಯೇಯದೊಂದಿಗೆ ಸೇವೆ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕರಾದ ಸಿದ್ದಲಿಂಗಪ್ಪನವರು ಈ ಸಂಘವು ಹಲವಾರು ಏಳುಬೀಳುಗಳ ನಡುವೆ ನಡೆದು ಇಂದು ತಾಲೂಕಿನಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಸಹಕಾರ ಸಂಘವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕಾರ್ಯಕ್ಕೆ ಆಡಳಿತ ಮಂಡಳಿಯವರ ಹಾಗೂ ನೌಕರರ ಶ್ರಮ ಶ್ಲಾಘನೀಯ ಎಂದು ತಿಳಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಮಾತನಾಡಿ ಸಹಕಾರ ರತ್ನ ಮಾಜಿ ಸಚಿವರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷರಾದ ಕೆ. ಎನ್. ರಾಜಣ್ಣನವರ ಮಾರ್ಗದರ್ಶನದಲ್ಲಿ ನಮ್ಮ ಸಹಕಾರ ಸಂಘವು ನಡೆಯುತ್ತಿದ್ದು ಹೊಸ ಕಟ್ಟಡದಲ್ಲಿ ರಾಗಿ ಖರೀದಿ ಹಾಗೂ ಕೊಬ್ಬರಿ ವ್ಯಾಪಾರ ನಡೆಸಲು ಶೀಘ್ರವೇ ಪ್ರಾರಂಭಿಸಲಾಗುವುದು. ನಮ್ಮ ಸಂಘದಲ್ಲಿ ಹತ್ತು ಹಲವು ಸೇವೆಗಳು ದೊರೆಯುತ್ತಿದ್ದು, ಇದರ ಸದುಪಯೋಗವನ್ನು ಸದಸ್ಯರು ಹಾಗೂ ಗ್ರಾಹಕರು ಪೂರ್ಣವಾಗಿ ಬಳಸಿಕೊಳ್ಳಬೇಕೆಂದು ಕರೆ ನೀಡಿದರು.
ಸಮಾರಂಭದಲ್ಲಿ ಸಂಘಕ್ಕೆ ನೆರವಾಗಿ ನಿಂತ ಹಲವಾರು ಮಹನೀಯರಿಗೆ ಹಾಗೂ ಪಿ ಯು ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ತುಮಕೂರು ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷರಾದ ವಿಜಯ ಕುಮಾರ್ ಸಹಕಾರ ಸಂಘದ ಉಪಾಧ್ಯಕ್ಷರಾದ ಕೆಂಪೇಗೌಡ, ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಮೇಲ್ವಿಚಾರಕರಾದ ಹರೀಶ್, ವಕೀಲ ನಾಗೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರಾಜು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಸೇರಿದಂತೆ ಸದಸ್ಯರು ಹಾಜರಿದ್ದರು.
- ಕರುನಾಡ ಕಂದ



















