ಕಂಪ್ಲಿ: ಸ್ಥಳೀಯ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಳೆದ 20ರಿಂದ 25 ದಿನಗಳಿಂದ ಕಾಯಂ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರಿಲ್ಲದೆ ಇರುವುದರಿಂದ ಹೆರಿಗೆ ಪ್ರಮಾಣ ಕುಸಿದಿದೆ.
ಕಳೆದ ಸೆಪ್ಟಂಬರ್ ತಿಂಗಳ 25ರಂದು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆರಿಗೆಯ ಸಂದರ್ಭದಲ್ಲಿ ನವಜಾತ ಶಿಶು ಮತ್ತು ನಂತರ ಬಳ್ಳಾರಿ ಬಿಮ್ನ್ ನಲ್ಲಿ ಬಾಣಂತಿಯ ಸಾವಿನ ನಂತರ ಇಲ್ಲಿಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರನ್ನು ದಿಢೀರ್ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ಹೆರಿಗೆ ಪ್ರಮಾಣದಲ್ಲಿ ಕಡಿಮೆಯಾಗಿದೆ.
ಸುರಕ್ಷಿತ ಹೆರಿಗಾಗಿ ಹೆಸರು ವಾಸಿಯಾಗಿ 2024ರ ಜನವರಿಯಲ್ಲಿ ಲಕ್ಷ್ಯ ರಾಷ್ಟ್ರೀಯ ಪ್ರಶಸ್ತಿಯನ್ನು ಗಳಿಸಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈಗ ನಿರೀಕ್ಷೆಯಂತೆ ಹೆರಿಗೆಗಳಾಗುತ್ತಿಲ್ಲ. ಹೆರಿಗೆಗೆ ಗಂಗಾವತಿ ಸೇರಿದಂತೆ ಬೇರೆ ಬೇರೆ ನಗರದ ಆಸ್ಪತ್ರೆಗಳಿಗೆ ತೆರಳವಂತಾಗಿದೆ.
ಸೆ.26ರಂದು ನಡೆದ ತಾಯಿ ಮತ್ತು ಮಗುವಿನ ಸಾವಿನ ನಂತರ ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರನ್ನು ಬೇರೆಡೆ ವರ್ಗಾಯಿಸಿದ ನಂತರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಆಗುವವರ ಸಂಖ್ಯೆಯಲ್ಲಿ ಕಡಿಮೆಯಾಗಿದೆ. ಪಟ್ಟಣದ ಖಾಯಂ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರು ಇಲ್ಲದ ಕಾರಣ ಹೆರಿಗೆ ಮಾಡಿಸಲು ಸಿಬ್ಬಂದಿಗಳು ಭಯಗೊಳ್ಳುತ್ತಿದ್ದಾರೆ. ಇದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೆರಿಗೆಗಾಗಿ ಬರುವ ಬಡ ಮಧ್ಯಮ ವರ್ಗದ ಗರ್ಭಿಣಿಯರಿಗೆ ಆರ್ಥಿಕವಾಗಿ ಹೊರೆಯಾಗಿ ಪರಿಣಮಿಸಿದೆ.
2025ರ ಏಪ್ರಿಲ್ನಲ್ಲಿ 52 ಹೆರಿಗೆ, ಮೇನಲ್ಲಿ 29, ಜೂನ್ನಲ್ಲಿ 41, ಜುಲೈನಲ್ಲಿ 64, ಆಗಸ್ಟ್ ನಲ್ಲಿ 47 ಹೆರಿಗೆಗಳು ಆಗಿವೆ. ಸೆ.30ರಿಂದ ಇಲ್ಲಿಯವರೆಗೂ ಕೇವಲ 5 ಹೆರಿಗೆಗಳು ಆಗಿವೆ. ಏಪ್ರೀಲ್ನಿಂದ ಆಗಸ್ಟ್ ತನಕ ಒಟ್ಟಾರೆ ಟ್ಯೂಬೆಕ್ಟಮಿ 50, ಲ್ಯಾಪ್ರೋಸ್ಕೋಪಿಕ್ ಟಿಒ 168 ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಗಿದೆ. ಸೆ.29ರಿಂದ 12 ಜನ ಗರ್ಭಿಣಿಯರನ್ನು ಹೆರಿಗಾಗಿ ಬೇರೆಡೆಗೆ ತೆರಳಲು ಶಿಫಾರಸ್ಸು ಮಾಡಲಾಗಿದೆ.
ವಾರಕ್ಕೆ ಮೂರು ದಿನಗಳಂತೆ ಒಬ್ಬ ಸ್ತ್ರೀರೋಗ ತಜ್ಞರನ್ನು ರೂಪನಗುಡಿಯಿಂದ ಮತ್ತೊಬ್ಬರು ತೋರಣಗಲ್ಲಿನಿಂದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದು ಕಾರ್ಯ ನಿರ್ವಹಿಸುತ್ತಿದ್ದಾರೆ. ಸೆ.25ರಂದು ಹೆರಿಗೆ ಸಂದರ್ಭದಲ್ಲಿ ಆದ ತಾಯಿ ಮಗುವಿನ ಮರಣ ಗಲಾಟೆಯ ನಂತರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಪ್ರಮಾಣ ಕ್ಷೀಣಿಸಿದೆ. ಗುತ್ತಿಗೆ ಆಧಾರಿತ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರನ್ನು ನೇಮಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
- ಡಾ.ವೈ.ರಮೇಶಬಾಬು. ಡಿಎಚ್ಒ. ಬಳ್ಳಾರಿ.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಮಾಡಿಸಲು ಹೆದರದಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ಕಂಪ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉತ್ತಮ ದರ್ಜೆಯ ಹೆರಿಗೆ ಸೌಲಭ್ಯಗಳಿವೆ.
- ಡಾ.ಜಿ.ಆರುಣ್. ತಾಲ್ಲೂಕು ಆರೋಗ್ಯ ಮೇಲ್ವಿಚಾರಣಾಧಿಕಾರಿ. ಕಂಪ್ಲಿ.
ವರದಿ : ಜಿಲಾನಸಾಬ್ ಬಡಿಗೇರ್



















