
ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರ ರೈತರೊಂದಿಗೆ ನಡೆದ ಸಂಧಾನ ವಿಫಲ

ಒಂಬತ್ತನೇ ದಿನಕ್ಕೆ ಕಾಲಿಟ್ಟ ರೈತರ ಅಹೋರಾತ್ರಿ ಹೋರಾಟ

ಬೆಳಗಾವಿ/ ಮೂಡಲಗಿ : ರೈತರ ಹೋರಾಟಕ್ಕೆ ಪ್ರತಿಪಕ್ಷ ಬಿಜೆಪಿ, ವಕೀಲರ ಸಂಘ, ಕ. ರ. ವೇ. ಹಾಗೂ ಸ್ವಾಮೀಜಿಗಳು ಬೆಂಬಲ ವ್ಯಕ್ತಪಡಿಸಿದ್ದು, ಹೋರಾಟದ ಕಿಚ್ಚು ಹೆಚ್ಚಿಸಿದೆ. ಇದರ ಬೆನ್ನಲ್ಲೇ ಸರ್ಕಾರ ಪ್ರತಿಭಟನಾನಿರತ ರೈತರ ಜೊತೆ ಸಂಧಾನಕ್ಕೆ ಮುಂದಾಗಿದ್ದು, ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ಕಬ್ಬು ಬೆಳೆಗಾರರ ಜೊತೆ ಗುರುವಾರ ಮಾತುಕತೆ ನಡೆಸಿದರು. ಆದರೆ, ರೈತರು ತಮ್ಮ ಬೇಡಿಕೆ ಈಡೇರಿಕೆಗೆ ಪಟ್ಟು ಹಿಡಿದಿದ್ದರಿಂದ ಸಂಧಾನ ಸಭೆ ವಿಫಲಗೊಂಡಿದ್ದು, ಬೇಡಿಕೆ ಈಡೇರಿಕೆಗೆ ರೈತರು ಶುಕ್ರವಾರ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡುವ ಪ್ರತಿಭಟನೆಯನ್ನು ಕೈಬಿಟ್ಟು ಮತ್ತೆ ಶನಿವಾರ ಸಂಜೆಯವರೆಗೆ ಡೆಡ್ ಲೈನ್ ನೀಡಿದ್ದಾರೆ. ಬೇಡಿಕೆ ಈಡೇರದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಗುರ್ಲಾಪುರದಲ್ಲಿ ಕಳೆದ ಎಂಟನೇ ದಿನಗಳಿಂದ ಕಬ್ಬು ಬೆಳೆಗಾರರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸಕ್ಕರೆ ಸಚಿವ ಶಿವಾನಂದ ಪಾಟೀಲ ಸರ್ಕಾರದ ಪ್ರತಿನಿಧಿಯಾಗಿ ರೈತರೊಂದಿಗೆ ಸಂಧಾನ ನಡೆಸಲು ಇಲ್ಲಿಗೆ ಆಗಮಿಸಿದ್ದರು. ಸಂಜೆ 6ರ ವೇಳೆಗೆ ರೈತರೊಂದಿಗೆ ಸಂಧಾನ ಸಭೆ ಆರಂಭಿಸಿದರು.
ತಕ್ಷಣವೇ ಪ್ರತಿಟನ್ ಕಬ್ಬಿಗೆ ₹3,500 ದರ ನಿಗದಿ ಮಾಡಿ ಘೋಷಣೆ ಮಾಡಿ, ಕಾರ್ಖಾನೆ ಹಂಗಾಮು ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಪಟ್ಟು ಹಿಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಾನು ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ನಂಬಿಕೆ ಮೇಲೆ ಪ್ರತಿಭಟನಾ ಸ್ಥಳಕ್ಕೆ ಬರಲು ತಡವಾಗಿದೆ ಎಂದು ರೈತರ ಬಳಿ ಕ್ಷಮೆ ಕೇಳಿ ಮಾತನಾಡಿದ ಅವರು, ಸರ್ಕಾರವು ಎರಡು ದಿನ ಗಡವು ಕೇಳಿದೆ ಅದಕ್ಕೆ ತಾವುಗಳು ಸಹಕರಿಸಿ ಎಂದು ಮನವಿ ಮಾಡಿಕೊಡರು. ರೈತ ಮುಖಂಡರು ನೀವು ಬೆಂಗಳೂರಿಗೆ ಬನ್ನಿ, ಸಿ. ಎಂ. ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳೋಣ ಎಂದು ಭರವಸೆ ನೀಡಿ, ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.
ಸಚಿವರ ಮನವಿಗೆ ರೈತರು ಒಪ್ಪಲಿಲ್ಲ ನಾವ್ಯಾರೂ ಮುಖ್ಯಮಂತ್ರಿ ಬಳಿ ಬರುವುದಿಲ್ಲ. ನೀವೇ ಮುಖ್ಯಮಂತ್ರಿ ಜೊತೆಗೆ ಚರ್ಚಿಸಿ, ಶನಿವಾರ ಸಂಜೆಯೊಳಗೆ ನಿರ್ಧಾರ ಪ್ರಕಟಿಸಬೇಕು. ಸರ್ಕಾರದ ನಿರ್ಧಾರ ಸ್ಪಷ್ಟವಾದರೆ ನಾವು ಹೋರಾಟ ನಿಲ್ಲಿಸುತ್ತೇವೆ. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ. ನ.9 ರಂದು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇದೆ ವೇಳೆ ಮಾತನಾಡಿದ ಸಚಿವರು, ಇಂತಹ ದು:ಸ್ಥಿತಿಗೆ ಕೇಂದ್ರ ಆಗಲಿ ರಾಜ್ಯ ಸರ್ಕಾರ ಆಗಲಿ ಬರಬಾರದು ರೈತರ ಬಗ್ಗೆ ನಮಗೂ ಕಾಳಜಿ ಇದೆ. 27ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ನಾನು ಸಾಲ ಕೊಟ್ಟಿದ್ದೇನೆ. 34ಸಹಕಾರಿ ಸಕ್ಕರೆ ಕಾರ್ಖಾನೆಗಳಲ್ಲಿ ಬಂದ್ ಆಗಿ ಕೇವಲ 12 ಉಳಿದಿವೆ. ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭ ಮಾಡ್ತೀನಿ ಖಾಸಗಿ ಕಾರ್ಖಾನೆ ಬಂದ್ ಮಾಡ್ತೇನಿ. ಮೊದಲು ಸಹಕಾರಿ ಸಕ್ಕರೆ ಕಾರ್ಖಾನೆ ಅಂತಾರೆ ರಾಜಕಾರಣಿಗಳು. ಆದ್ರೇ ಎರಡೇರು ಕಾರ್ಖಾನೆ ಕಟ್ಟುಕೊಂಡ ಗಂಡು ಮಕ್ಕಳು ನಮ್ಮಲ್ಲಿದ್ದಾರೆ. ಎಫ್ಆರ್ಪಿ ದರದಲ್ಲಿ ಎನೂ ತಪ್ಪಿದೆ ಅನ್ನೋದು ತೋರಿಸಿದ್ದು ರೈತರು. ಆದ್ರೇ ಅದನ್ನ ನಿಗದಿ ಮಾಡುವವರು ಕೇಂದ್ರದವರು. ಆದರೆ ನನ್ನನ್ನು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಬೈಯ್ಯುತ್ತಿದೀರಿ ಬೈಯ್ಯರಿ ಆದ್ರೇ ಸೌಮ್ಯವಾಗಿ ಬೈಯಿರಿ ಎಂದು ಮನವಿ ಮಾಡಿಕೊಂಡ ಸಚಿವರು, ಮುಖ್ಯಮಂತ್ರಿಗಳು ಇಡೀ ಸಚಿವರನ್ನ ಕೂಡಿಸಿಕೊಂಡು ರೈತರಿಗೆ ಎನಾದ್ರೂ ಕೊಡಲು ಸಿದ್ದರಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರನ್ನು ನಂಬಿ ನಾನು ತಡವಾಗಿ ಬಂದಿದ್ದೇನೆ ಪರೋಕ್ಷವಾಗಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಅಸಮಾಧಾನ ಹೊರ ಹಾಕಿದ ಸಚಿವ ಶಿವಾನಂದ ಪಾಟೀಲ್ ನಿಮಗೆ ಯೋಗ್ಯ ಬೆಲೆ ಕೊಡಿಸುವುದು ನನ್ನ ಕರ್ತವ್ಯ ಮತ್ತು ನಾಳೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ಹೋಗುವ ವಿಚಾರ ಪ್ರಸ್ತಾಪ ಮಾಡಿದೀರಿ ಅದನ್ನ ಕೇವಲ ಒಂದು ಅಥವಾ ಎರಡು ದಿನ ಮುಂದೆ ಹಾಕಿ ಎಂದು ಮನವಿನೊಂದಿಗೆ ರಸ್ತೆ ಮೇಲೆ ಹೋಗಿ ನಿಂತಾಗ ಎನೇನೋ ಅನಾಹುತ ಆಗ್ತವೆ. ಎರಡು ದಿನದಲ್ಲಿ ಬಗೆ ಹರಿಸೋಣ ಅಂತಾ ಸಿಎಂ ಅವರು ಹೇಳಿ ಕಳ್ಸಿದ್ದಾರೆ ಎಂದರು.
ರೈತರು ಬಿಗಿ ಪಟ್ಟು ಹಿಡಿದಿದ್ದರಿಂದ ಮುಖ್ಯಮಂತ್ರಿ ಜೊತೆ ಚರ್ಚಿಸಿ, ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿ, ಸಚಿವರು ಅಲ್ಲಿಂದ ಹೊರಟರು. ಈ ಮಧ್ಯೆ ಸಚಿವರು ಮರಳುವಾಗ ರೈತರು ಅವರ ವಾಹನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವ ಯತ್ನ ವನ್ನು ರೈತರು ಮಾಡಿದರು. ಇದೇ ವೇಳೆ ಸಚಿವರ ಕಾರಿಗೆ ಚಪ್ಪಲಿ ಹಾಗೂ ನೀರಿನ ಬಾಟಲಗಳನ್ನು ಎಸೆದರು. ಪೊಲೀಸರು ಪ್ರತಿಭಟನಾಕಾರರನ್ನು ತಡೆದು, ಸಚಿವರಿಗೆ ತೆರಳಲು ಅನುವು ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಕೃಷಿ ಆಯೋಗದ ಅಧ್ಯಕ್ಷ ಅಶೋಕ ದಳವಾಯಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಎಸ್ಪಿ ಭೀಮಾಶಂಕರ್ ಗುಳೇದ, ಮುಗಳಖೋಡದ ಮುರುಗರಾಜೇಂದ್ರ ಸ್ವಾಮೀಜಿ ಸೇರಿದಂತೆ ಅನೇಕ ಸ್ವಾಮೀಜಿಗಳು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.
ವರದಿ ವಿಲ್ಸನ್ ಡವಳೇಶ್ವರ




















