ಬಳ್ಳಾರಿ / ಕಂಪ್ಲಿ: ಪ್ರಸ್ತುತ ದಿನಗಳಲ್ಲಿ ಕಣ್ಮರೆಯಾಗುತ್ತಿರುವ ಪರಿಸರವನ್ನು ಉಳಿಸಿ ಬೆಳೆಸುವ ಜತೆಗೆ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಬೇರು ಸಂಸ್ಥೆ ಅಧ್ಯಕ್ಷ ಯಶಸ್ಸು ಹೇಳಿದರು.
ಕುಡತಿನಿ ಪಟ್ಟಣದ 3ನೇ ವಾರ್ಡಿನ ಬುಡುಗ ಜಂಗಮ ಕಾಲೋನಿಯಲ್ಲಿ ಸಾಲು ಮರದ ತಿಮ್ಮಕ್ಕ ಅವರ ಸವಿ ನೆನಪಿಗಾಗಿ ಕುಡತಿನಿ ಪ. ಪಂ, ಪೊಲೀಸ್ ಇಲಾಖೆ, ಬೇರು ಸಂಸ್ಥೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಸಸಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಮಾನವನ ದುರಾಸೆಯಿಂದಾಗಿ ಬಹತ್ ಅರಣ್ಯ ಪ್ರದೇಶಗಳು ಕೈಗಾರಿಕಾ ಕಟ್ಟಡಗಳು, ಮನೆ, ರೆಸಾರ್ಟ್ಗಳೂ ಸೇರಿದಂತೆ ವಿವಿಧ ಬಗೆಯ ಉದ್ಯಮ ಕೇಂದ್ರಗಳಾಗಿ ಮಾರ್ಪಾಡಾಗುತ್ತಿರುವ ದಿನಗಳಲ್ಲಿ ಪ್ರತಿಯೊಬ್ಬರು ಎಚ್ಚೆತ್ತುಕೊಂಡು ಪರಿಸರ ಉಳಿವಿಗೆ ಮುಂದಾಗುವ ಮೂಲಕ ಪ್ರಾಕೃತಿಕ ಸಂಪತ್ತನ್ನು ಉಳಿಸಲು ಪಣತೊಡಬೇಕು. ಈಗಾಗಲೇ ಸಾಕಷ್ಟು ಸಸಿಗಳನ್ನು ನೆಟ್ಟು, ಪರಿಸರ ಬೆಳೆಸುವ ನಿಟ್ಟಿನಲ್ಲಿ ನಿಗಾವಹಿಸಲಾಗಿದೆ. ಮುಂದಿನ ದಿನದಲ್ಲಿ ಬಟ್ಟೆ, ಬ್ಯಾಗ್ ವಿತರಣೆ ಮಾಡಲಾಗುವುದು, ಸರ್ಕಾರಿ ಶಾಲೆಗಳು, ಪರಿಸರ ಉಳಿಸಲು ಹಾಗೂ ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನಾಗಿಸಲು ಹಲವು ಅಭಿಯಾನಗಳನ್ನು ಮುಂದಿನ ದಿನದಲ್ಲಿ ಮಾಡಲಾಗುವುದು ಎಂದು ಹೇಳಿದರು.
ಕುಡತಿನಿ ಪಟ್ಟಣದಲ್ಲಿ 114ಕ್ಕೂ ಹೆಚ್ಚು ಸಸಿ ನೆಡಲಾಯಿತು.
ಈ ಸಂದರ್ಭದಲ್ಲಿ ಸ್ವಯಂ ಸೇವಕ ಚಂದ್ರಶೇಖರ, ಪಪಂ ಸಿಬ್ಬಂದಿಗಳಾದ ಯಾಸ್ಮೀನ್, ನಳನಿ ಸೇರಿದಂತೆ ಸ್ಥಳೀಯ ನಿವಾಸಿಗಳಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















