
ಕೊಪ್ಪಳ :ಎಲ್ಲರೂ ಸಂವಿಧಾನವನ್ನು ಓದಿ ಅರ್ಥ ಮಾಡಿಕೊಳ್ಳಬೇಕು ಎಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದಿಂದ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ನಮ್ಮ ದೇಶ ವಿವಿಧ ಜಾತಿ, ಧರ್ಮ, ಸಂಸ್ಕೃತಿಯನ್ನು ಒಳಗೊಂಡಿದೆ. ಇದಕ್ಕೆ ಪೂರಕವಾದ ಸಂವಿಧಾನವನ್ನು ಡಾ. ಬಿ. ಆರ್. ಅಂಬೇಡ್ಕರ್ ಅವರು ಬರೆದಿದ್ದಾರೆ. ಮಹಿಳೆಯರಿಗೆ ಸಂವಿಧಾನದಲ್ಲಿ ಹಕ್ಕುಗಳು ಇವೆ. ಅವುಗಳ ಉಪಯೋಗ ಮಾಡಿಕೊಳ್ಳಬೇಕು. ಮಹಿಳೆಯರು ಹೆಚ್ಚು ಶಿಕ್ಷಣ ಪಡೆದು ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಸಬಲರಾಗಬೇಕು ಎಂದು ತಿಳಿಸಿದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಗವಿಸಿದ್ದಪ್ಪ ಮುತ್ತಾಳ ಅವರು ಮಾತನಾಡುತ್ತಾ ಇವತ್ತು ನಾವೆಲ್ಲರೂ ಸಂವಿಧಾನ ಮೂಲಕ ಉತ್ತಮವಾದ ಜೀವನ ಮಾಡುತ್ತಿದ್ದೇವೆ. ಸಂವಿಧಾನಕ್ಕಿಂತ ಮುಂಚೆ ನಮ್ಮ ದೇಶದಲ್ಲಿ ತಾರತಮ್ಯ, ಮೇಲು ಕೀಳು, ಅಸಮಾನತೆ ಇತ್ತು. ಇಂದು ಜಾತಿ ಆಧಾರದಲ್ಲಿ, ಧರ್ಮದ ಆಧಾರದಲ್ಲಿ ನಮ್ಮ ಸಮಾಜ ಒಡೆದು ಹೋಗುತ್ತಿದೆ. ಇದಕ್ಕೆ ಪರಿಹಾರ ನಮ್ಮ ಸಂವಿಧಾನದಲ್ಲಿ ಉತ್ತರವಿದೆ. ಎಲ್ಲರಿಗೂ ಗುಣ ಮಟ್ಟದ ಶಿಕ್ಷಣ ಮತ್ತು ಉತ್ತಮ ಆರೋಗ್ಯ ಕೊಡಬೇಕು
ವಿಜ್ಞಾನಕ್ಕೆ ಹೆಚ್ಚು ಮಹತ್ವ ಕೊಡಬೇಕು. ಎಲ್ಲರೂ ವೈಜ್ಞಾನಿಕವಾಗಿ ಮತ್ತು ವೈಚಾರಿಕವಾಗಿ ಆಲೋಚನೆ ಮಾಡಬೇಕು ಎಂದು ತಿಳಿಸಿದರು.
ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ವಿಠೋಬ ಅವರು ಮಾತನಾಡುತ್ತಾ ಸಂವಿಧಾನವು ನಮಗೆ ಹಕ್ಕುಗಳು, ಸಮಾನವಾದ ಅವಕಾಶಗಳು ಮತ್ತು ಜೀವನ ಮತ್ತು ಶಿಕ್ಷಣ ಕೊಟ್ಟಿದೆ. ಶ್ರಮಕ್ಕೆ ತಕ್ಕ ಅವಕಾಶಗಳು ಸಂವಿಧಾನವು ನೀಡಿದೆ. ಸಂವಿಧಾನವು ಮಹಿಳೆಯರ ಹಕ್ಕುಗಳು ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಿದೆ. ಎಲ್ಲರೂ ಸಂವಿಧಾನವನ್ನು ಅರ್ಥ ಮಾಡಿಕೊಂಡರೆ ನಿಮ್ಮ ಜೀವನದ ಕ್ರಮದ ವರ್ತನೆ, ನಿಮ್ಮ ಜ್ಞಾನದಲ್ಲಿ ಬದಲಾವಣೆ ಕಾಣುತ್ತಿರಿ ಎಂದು ತಿಳಿಸಿದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ನರಸಿಂಹ ಅವರು ಮಾತನಾಡುತ್ತಾ ಸಂವಿಧಾನವು ಎಲ್ಲರಿಗೂ ಓಟು ಹಾಕುವ ಹಕ್ಕು ಕೊಟ್ಟಿದೆ. ಮಹಿಳೆಯರಿಗೆ ಶಿಕ್ಷಣ ಸೇರಿದಂತೆ ಮಹಿಳೆಯರ ಪರ ಹಲವಾರು ಕಾನೂನುಗಳು ಸಂವಿಧಾನದಲ್ಲಿವೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಡಾ. ಹುಲಿಗೆಮ್ಮ, ಡಾ. ಅಶೋಕ ಕುಮಾರ್, ಶುಭ, ಡಾ. ಗೀತಾ ಮುತ್ತಾಳ, ಜಾಫರ್ ಸಾಧಿಕ್, ನಿಂಗಪ್ಪ ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾಜ್ಯ ಶಾಸ್ತ್ರ ವಿಭಾಗ ಉಪನ್ಯಾಸಕಿ ಡಾ. ಗೀತಾ ಮುತ್ತಾಳ ಅವರು ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆಯನ್ನು ಭೋಧಿಸಿದರು.
ಕಾರ್ಯಕ್ರಮವನ್ನು ರೇಖಾ ನಿರೂಪಿಸಿದರು, . ಪೂಜಾ ಸ್ವಾಗತಿಸಿದರು, ಪೀರಮ್ಮ ಪ್ರಾರ್ಥಿಸಿ, ವಂದಿಸಿದರು.
- ಕರುನಾಡ ಕಂದ ಪತ್ರಿಕೆ




















