ಬಾಗಲಕೋಟೆ/ ಹುನಗುಂದ : ಮಕ್ಕಳ ಸಂಪೂರ್ಣ ಬೆಳವಣಿಗೆಯಲ್ಲಿ ತಂದೆ ತಾಯಿ ಇಬ್ಬರೂ ಸಮಾನರು ಎಂದು ಕನಕಗಿರಿಯ ಸುವರ್ಣ ಗಿರಿ ಸಂಸ್ಥಾನ ಮಠದ ಚನ್ನಮಲ್ಲ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಗಚ್ಚಿನಮಠದ ಲಿಂಗೈಕ್ಯ ಮುರುಗೇಂದ್ರ ಮಹಾಸ್ವಾಮಿಗಳ 60ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಸಾಧಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಎರಡನೇ ದಿನದ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ತಂದೆಯ ತ್ಯಾಗ ತಾಯಿಯ ಪ್ರೀತಿ ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಮಕ್ಕಳಿಗೆ ಆಧ್ಯಾತ್ಮಿಕ ಸಂಸ್ಕಾರದಿಂದ ವಿಶ್ವ ಭ್ರಾತತ್ವ ಹಾಗೂ ಮಾನವೀಯ ಮೌಲ್ಯಗಳು ಬೆಳಗುತ್ತವೆ ಈಗಾಗಿ ಮಗು ಸಂಸ್ಕಾರವಂತ ನಾಗರಿಕರನ್ನಾಗಿ ರೂಪಗೊಳ್ಳುತ್ತಾನೆ, ಎಂದರು.
ಅಂಕಲಿಮಠ ನಿರುಪಾದೇಶ್ವರ ಮಠದ ಫಕೀರೇಶ್ವರ ಶ್ರೀಗಳು, ಸಾನಿಧ್ಯ ವಹಿಸಿ ಮಾತನಾಡಿ ಶಿವಶರಣೆ ಗುಡ್ಡಾಪುರದ ದಾನಮ್ಮ ಶ್ರೇಷ್ಠ ಶಿವಶರಣೆ. ಭಗವಂತನ ನಾಮ ಸ್ಮರಣೆಯಿಂದ ದೇವರನ್ನು ಭಕ್ತಿಯಿಂದ ಒಲಿಸಿಕೊಂಡವಳು. ಭಗವಂತನನ್ನೇ ಆರಾಧಿಸಿ ಬದುಕಿನ ಸಂಪೂರ್ಣ ಜೀವನದಲ್ಲಿ ಬಂದಂತಹ ನೋವು ನಲಿವು ಧೈರ್ಯದಿಂದ ಎದುರಿಸಿ ಈ ಭವ ಬಂಧನವನ್ನು ದಾಟಿ ಸದ್ಗತಿ ಪಡೆದ ಶರಣೆ ದಾನಮ್ಮ ಎಂದರು ಮುಂದುವರೆದು 12ನೇ ಶತಮಾನದಲ್ಲಿ ಬಡವರ ದೀನದಲಿತರ ಕಷ್ಟಗಳಿಗೆ ಸ್ಪಂದಿಸಿ ಪ್ರಥಮ ಬಾರಿಗೆ ಸಾಮೂಹಿಕ ವಿವಾಹವನ್ನು ಮಾಡುವುದರ ಮೂಲಕ 12ನೇ ಶತಮಾನದ ವಚನಕಾರರ ಆಶಯವಾದ ದಾನ ಪರಂಪರೆಯನ್ನು ಮುಂದುವರೆಸಿದ ಕೀರ್ತಿ ಗುಡ್ಡಾಪುರದ ದಾನಮ್ಮ ನವರಿಗೆ ಸಲ್ಲುತ್ತದೆ ದಾನ ಮಾಡಿದ್ದರಿಂದಲೇ ಅವರಿಗೆ ದಾನಮ್ಮ ಎಂದು ಹೆಸರು ಬಂದಿತ್ತು ಎಂದರಲ್ಲದೆ ಎಲ್ಲಾ ಮಹಿಳೆಯರು ದಾನಮ್ಮಳ ಆದರ್ಶ ಜೀವನ ಅನುಸರಿಸಿಕೊಂಡು ಬಾಳಿರಿ ಎಂದರು.
ಮುದ್ದೇಬಿಹಾಳದ ಸಾವಯವ ಕೃಷಿ ತಜ್ಞ ಅರವಿಂದ ಕೊಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಿ ಸಾವಯವ ಕೃಷಿ ಒಂದು ಚಿಂತನೆ ಎಂಬ ವಿಷಯದ ಮೇಲೆ ಮಾತನಾಡಿ ನನ್ನ ಇಬ್ಬರು ಚಿಕ್ಕ ಮಕ್ಕಳನ್ನು ಕೃಷಿ ಬಗ್ಗೆ ತಿಳುವಳಿಕೆ ನೀಡುತ್ತಾ ಕೃಷಿಯ ಬಗ್ಗೆ ಆಸಕ್ತಿಯನ್ನು ತುಂಬುತ್ತಿದ್ದೇನೆ ಅವರಿಂದಲೂ ಸಹ ಆದಾಯ ಬರುವ ರೀತಿಯನ್ನು ಹೇಳಿಕೊಟ್ಟರೆ ಅವರ ಜೀವಮಾನವಿಡೀ ಕೃಷಿ ಬಗ್ಗೆ ಕೇಳರಿಮೆ ಇರುವುದಿಲ್ಲ ಎಂದು ಹೇಳಿದ ಅವರು ಅವರಿಂದಲೇ ಆದಾಯ ಗಳಿಸುತ್ತಿದ್ದು ಅವರ ಶಿಕ್ಷಣವನ್ನು ಸಹ ಮಾತೃಭಾಷೆ, ಕನ್ನಡದಲ್ಲಿಯೇ ಸರ್ಕಾರಿ ಶಾಲೆಯಲ್ಲಿ ಕಲಿಸುತ್ತಿದ್ದೇನೆ ಎಂದರು. ಕೃಷಿ ಲಾಭವಿಲ್ಲ ಎಂದು ಹೇಳುವ ಕೃಷಿಕ ಕಷ್ಟವಿಲ್ಲದೆ ಕೃಷಿ ಇಲ್ಲ ಎಂದ ಅವರು ಪಂಚಗುಣಗಳನ್ನು ಹೊಂದಿದವ ರೈತ ಎಂದರಲ್ಲದೆ ಬೆಳೆದ ಬೆಳೆಗಳಲ್ಲಿ ಎಲ್ಲಾ ಆಯುಗಾರರಿಗೆ ದಾನ ಮಾಡಿದ ನಂತರ ಉಳಿದ ಫಸಲಿನಲ್ಲಿ ತನಗೆ ಇಟ್ಟುಕೊಂಡು ಬದುಕುವ ರೈತ ದೇಶಕ್ಕೆ ಅನ್ನ ಕೊಡುವವ ಜಗತ್ತಿನಲ್ಲಿ ರೈತನೊಬ್ಬನೇ ಆಗಿದ್ದಾನೆ ಎಂದರು. ನಮ್ಮ 12ನೇ ಶತಮಾನದ ವಚನಕಾರರು ಶರಣರು ಕಾಯಕದ ಜೊತೆಗೆ ದಾಸೋಹ ಪರಂಪರೆಯನ್ನು ನಂದಿ ಕೃಷಿ (ಎತ್ತುಗಳು) ಮೂಲಕ ಕೃಷಿ ಮಾಡಿ ಜಗತ್ತಿಗೆ ಅನ್ನವನ್ನು ನೀಡುವ ಮೂಲಕ ಆಳುವ ಸರ್ಕಾರಗಳು ಕೃಷಿ ಉತ್ಪನ್ನಗಳಿಗೆ ಸೂಕ್ತವಾದ ಬೆಂಬಲ ಬೆಲೆಯನ್ನು ನೀಡಿ ಕೃಷಿಕರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಬೇಕಾಗಿದೆ ಎಂದು ಅವರು ಕೃಷಿ ಉತ್ಪನ್ನ ಗಳನ್ನು ಕೃಷಿ ಉದ್ಯಮಿಯನಾಗಿ ಬದಲಾಯಿಸಿಕೊಂಡು ಆರ್ಥಿಕ ಸಬಲರಾಗಲು ರೈತರಿಗೆ ಕರೆ ನೀಡಿದರು. ಪ್ರವಚನಕಾರರಾದ ಕಮತಗಿಯ ಗಣೇಶ ಶಾಸ್ತ್ರಿಗಳು ಮಾತನಾಡಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪುರಾಣ ಕೇಳಲಿಕ್ಕೆ ಆಗಮಿಸಿದ್ದೀರಿ ಇದು ಬರಿ ಕೇಳಿ ಬಿಡುವದಲ್ಲ, ದಾನಮ್ಮಳಂತೆ ಭಕ್ತಿ ಭಾವದಿಂದ ಸಾಗಿ ಶರಣೆರಾಗಿ ಬಾಳಲು ಪ್ರಯತ್ನಿಸಿರಿ ಸಂಸಾರ ಜಂಜಾಟದೊಂದಿಗೆ ಇಂತಹ ಪುರಾಣಗಳನ್ನು ಕೇಳಿ ನಿಮ್ಮ ಬಾಳು ಸಾರ್ಥಕ ಮಾಡಿಕೊಳ್ಳಿರಿ ಎಂದರು. ಮಹಾಂತೇಶ ಮಠ ಸ್ವಾಗತಿಸಿದರು, ಗೀತಾ ತಾರಿವಾಳ ನಿರೂಪಿಸಿದರು ಅರುಣೋದಯ ದುಡ್ಗಿ ವಂದಿಸಿದರು.
- ಕರುನಾಡ ಕಂದ ಪತ್ರಿಕೆ



















