ಶಿವಮೊಗ್ಗ: ಒತ್ತಡ ನಿವಾರಣೆಗೆ ಒಳ್ಳೆಯ ಸ್ನೇಹಿತರೆ ನಿಜವಾದ ಔಷಧ ಎಂದು ಬಣ್ಣಿಸಿದರು ವಿಧಾನ ಪರಿಷತ್ ಸದಸ್ಯ ಡಾ. ಧನಜಂಯ ಸರ್ಜಿ.
ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಗುರುವಾರ ಆಯೋಜಿಸಿದ್ದ ಎಂಸಿಸಿ ಕಪ್ ಸೀಸನ್-೩ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿ
ಹಸಿವಾಗ್ತಿಲ್ಲ, ನಿದ್ದೆ ಬರ್ತಿಲ್ಲ, ಜೀರ್ಣ ಆಗ್ತಿಲ್ಲ… ಎಂದು ಹೀಗೆ ಪ್ರತಿಯೊಂದಕ್ಕೂ ಮಾತ್ರೆ ಕೊಡಿ ಎಂದು ವೈದ್ಯರನ್ನು ಎಡತಾಕುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಸ್ನೇಹಿತರು, ಕುಟುಂಬದ ಸದಸ್ಯರೊಂದಿಗೆ ಒಳ್ಳೆಯ ಸಮಯ ಕಳೆಯುವುದೇ ಇಂತಹ ಸಮಸ್ಯೆಗಳಿಗೆ ದಿವ್ಯೌಷಧ. ಪ್ರತಿಯೊಂದಕ್ಕೂ ಔಷಧಗಳನ್ನು ಅವಲಂಬಿಸುವುದು ಸೂಕ್ತವಲ್ಲ ಎಂದು ಕಿವಿಮಾತು ಹೇಳಿದರು.
ಇತ್ತೀಚೆಗೆ ಹೃದಯಾಘಾತ ಹೆಚ್ಚಾಗುತ್ತಿದೆ. ಸಣ್ಣ ಸಣ್ಣ ವಯಸ್ಸಿನವರು ಉಸಿರು ಚೆಲ್ಲುತ್ತಿದ್ದಾರೆ. ಆದ ಕಾರಣ ವಾಕಿಂಗ್, ಧ್ಯಾನದತ್ತ ಗಮನ ಹರಿಸಬೇಕು. ನಿತ್ಯ ವಾಕಿಂಗ್ ಮಾಡಬೇಕು. ಬೆಳಿಗ್ಗೆ ಎದ್ದ ಬಳಿಕ ಒಂದು ತಾಸು ಆಗುವವರೆಗೂ, ಮಲಗುವ ಒಂದು ತಾಸು ಮೊದಲು, ಊಟ ಮಾಡುವಾಗ ಮೊಬೈಲ್ ನೋಡಬಾರದು ಎಂದರು.
ನಮ್ಮ ಆಲೋಚನೆಗಳು ಸದಾ ಉತ್ತುಂಗದಲ್ಲಿರಬೇಕು ಒಳ್ಳೆಯ ಆಲೋಚನೆಗಳು ದೇಶ ಕಟ್ಟಲು ಪೂರಕ. ನಮ್ಮ ಹೆಜ್ಜೆಗಳು ಸದಾ ಗೆಲುವಿನೆಡೆಗೆ ಇರಬೇಕು ಎಂದು ಉತ್ಸಾಹದ ನುಡಿಗಳನ್ನಾಡಿದರು ಶಾಸಕ ಎಸ್.ಎನ್.ಚೆನ್ನಬಸಪ್ಪ.
ಕ್ರೀಡೆಗಳು ಜೀವನದ ಪಾಠ ಕಲಿಸುತ್ತವೆ. ಇಂದಿನಗಳಲ್ಲಿ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದರು ಜಿಲ್ಲಾ ಯುವ ಸಬಲೀಕರಣ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ರೇಖ್ಯಾ ನಾಯ್ಕ್.
ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎಂ.ಡಿ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಹಿಂದುಳಿದ ವರ್ಗಗಳ ಸಂಯೋಜಕ ಜಿ.ಡಿ.ಮಂಜುನಾಥ್, ಉದ್ಯಮಿ ಟಿ.ಎಸ್.ಸಿದ್ದೇಶ್, ಬಿಜೆಪಿ ನಗರ ಘಟಕದ ಉಪಾಧ್ಯಕ್ಷ ಎಸ್.ಕುಮಾರ್, ಸಂಘದ ಹಿರಿಯ ಸದಸ್ಯರಾದ ಮೋಹನ್ ಶೆಟ್ಟಿ, ಚಂದ್ರಣ್ಣ, ಎಂ.ಗೋವಿಂದರಾಜು ಸೇರಿದಂತೆ ಅನೇಕುರು ಉಪಸ್ಥಿತರಿದ್ದರು.
ಸ್ಕೂಟರಲ್ಲಿ ಎಂಟ್ರಿ
ಕ್ರಿಕೆಟ್ ಪಂದ್ಯಾವಳಿ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ ಶಾಸಕ ಚೆನ್ನಬಸಪ್ಪ ಅವರು ಯಾವುದೇ ಅಂಗರಕ್ಷರು, ಸಿಬ್ಬಂದಿ ಇಲ್ಲದೆ ಏಕಾಂಗಿಯಾಗಿ ಸ್ಕೂಟರ್ನಲ್ಲಿ ಮೈದಾನದಕ್ಕೆ ಆಗಮಿಸಿ ಎಲ್ಲರ ಗಮನ ಸೆಳೆದರು. ಶಾಸಕರ ಸರಳತನಕ್ಕೆ ಕ್ರೀಡಾಭಿಮಾನಿಗಳು, ಸಾರ್ವಜನಿಕರು ಫಿದಾ ಆದರು.
ಶಿವಮೊಗ್ಗದಲ್ಲಿ ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಆಯೋಜಿಸಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಚಾಲನೆ ನೀಡಿದರು. ಎಂ.ಡಿ.ಶ್ರೀನಿವಾಸ್, ಟಿ.ಎಸ್.ಸಿದ್ದೇಶ್, ಜಿ.ಡಿ.ಮಂಜುನಾಥ, ಎಸ್.ಕುಮಾರ್ ಸೇರಿದಂತೆ ಇತರರಿದ್ದರು.



















