
ಬೆಂಗಳೂರು : ಕರ್ನಾಟಕ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘದ ವತಿಯಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಹಾಗೂ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಎಂಬ ಚಲನಚಿತ್ರದ ಟೀಸರ್ ಬಿಡುಗಡೆ ಸಮಾರಂಭವು ಜ.6 ರಂದು ಬೆಂಗಳೂರಿನ ಟೌನ್ ಹಾಲ್ನಲ್ಲಿ ಅದ್ದೂರಿಯಾಗಿ ಜರುಗಿತು.

ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರಾದ ಟಿ. ಕೃಷ್ಣಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನ್ಯಾಯಬೆಲೆ ಅಂಗಡಿಗಳಲ್ಲಿ ಎದುರಾಗುತ್ತಿರುವ ಕುಂದುಕೊರತೆಗಳು ಹಾಗೂ ಪಡಿತರ ವಿತರಕರ ಕಮಿಷನ್ ಹಣ ಹೆಚ್ಚಳದ ಅಗತ್ಯತೆಯ ಕುರಿತು ಗಮನ ಸೆಳೆದರು.
ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಸನ್ಮಾನ್ಯ ಶ್ರೀ ಕೆ. ಎಚ್. ಮುನಿಯಪ್ಪ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಇಡೀ ದೇಶದಲ್ಲಿಯೇ ಪಡಿತರ ವಿತರಣೆಯಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದ್ದು, ಈ ಸಾಧನೆಗೆ ಕೇಂದ್ರ ಸರ್ಕಾರದಿಂದ ಪ್ರಶಸ್ತಿ ಲಭಿಸಿರುವುದು ಅತ್ಯಂತ ಸಂತೋಷದ ವಿಚಾರ ಎಂದು ಹೇಳಿದರು. ಈ ಗೌರವಕ್ಕೆ ಪಡಿತರ ವಿತರಕರ ಶ್ರಮವೇ ಮುಖ್ಯ ಕಾರಣವಾಗಿದ್ದು, ಎಲ್ಲರೂ ಅಭಿನಂದನಾರ್ಹರು ಎಂದು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಬಡ ಜನರಿಗೆ ಸರ್ಕಾರದ ವತಿಯಿಂದ ಇಂದಿರಾ ಕಿಟ್ ವಿತರಿಸಲಾಗಿದ್ದು, ಪಡಿತರ ವಿತರಕರ ಕಮಿಷನ್ ವಿಷಯದಲ್ಲಿ ಯಾವುದೇ ಕೊರತೆ ಆಗದಂತೆ ಈಗಿರುವ ಕಮಿಷನ್ ಹಣ ಮುಂದುವರಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು. ಮುಂದಿನ ದಿನಗಳಲ್ಲಿಯೂ ಪಡಿತರ ವಿತರಕರು ಇದೇ ರೀತಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ರಾಜ್ಯ ಸರ್ಕಾರಕ್ಕೆ ಉತ್ತಮ ಹೆಸರು ತರುವಂತೆ ವಿನಂತಿಸಿದರು.
ಈ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಮತ್ತು ಸರಕಾರಿ ಪಡಿತರ ವಿತರಕರ ಸಂಘದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ಟೌನ್ ಹಾಲ್ ನಲ್ಲಿ ನಡೆದಿರುವ ಸಮಾರಂಭದಲ್ಲಿ ಗಂಗಾವತಿ ತಾಲೂಕು ಸರಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಕೆ. ಮಂಜುನಾಥ್ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಈ ಕಾರ್ಯಕ್ರಮದಲ್ಲಿ ಗಂಗಾವತಿ ತಾಲೂಕು ಸರಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಕೆ. ಮಂಜುನಾಥ್, ಉಪಾಧ್ಯಕ್ಷ ಎಂ. ಪಿ. ಪಂಪನಗೌಡ, ಕೋಶಾಧ್ಯಕ್ಷರಾದ ರಾಜಶೇಖರ್ ಬೆಳಗೋಡ್, ಹಿರಿಯರಾದ ಟಿ. ಜಿ. ಬಾಬು, ನಾಗರಾಜ್ ನಾಯಕ್ ಸೇರಿದಂತೆ ಅನೇಕ ಪಡಿತರ ವಿತರಕರು ಭಾಗವಹಿಸಿ ಶುಭ ಹಾರೈಸಿದರು.
ವರದಿ ಹನುಮೇಶ ಭಾವಿಕಟ್ಟಿ



















