ಹನೂರು: ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ
ವಹಿಸಿಕೊಂಡ ಬಳಿಕ ಪ್ರಥಮ ಬಾರಿಗೆ ಹನೂರು ಪಟ್ಟಣಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಶ್ರೀರೂಪ ಅವರಿಗೆ ರೈತ ಸಂಘಟನೆಗಳ ಮುಖಂಡರು ವಿವಿಧ ಸಮಸ್ಯೆ ಮತ್ತು ಬೇಡಿಕೆಗಳನ್ನು ಬಗೆಹರಿಸಬೇಕೆಂದು ಮನವಿ ಸಲ್ಲಿಸಿದರು.
ಪಟ್ಟಣದ ಲೋಕೋಪಯೋಗಿ ವಸತಿ ಗೃಹ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿಯಾದ ವೇಳೆ ರೈತ ಸಂಘದ ತಾಲೂಕು ಅಧ್ಯಕ್ಷ ಅಹ್ಮದ್ ಖಾನ್ ಮಾತನಾಡಿ, ಹನೂರು ತಾಲೂಕಿನ ಸೂಳೇರಿಪಾಳ್ಯ ಗ್ರಾ.ಪಂ.ವ್ಯಾಪ್ತಿಗೆ ಸೇರಿದ ಉಡುತೊರೆ ಹಳ್ಳ ಜಲಾಶಯ ಮತ್ತು ಮಾರ್ಟಳ್ಳಿ ಗ್ರಾ.ಪಂ.ಗೆ ಸೇರಿದ ಕೀರಪಾತಿ ಡ್ಯಾಮ್ಗೆ ಮತ್ತು ಅಕ್ಕ ಪಕ್ಕದ ಕೆರೆ ಕಟ್ಟೆಗಳಿಗೆ ಏತ ನೀರಾವರಿ ಯೋಜನೆಯ ಮುಖಾಂತರ ನೀರು ತುಂಬಿಸುವ ಯೋಜನೆ ಅಡಿಯಲ್ಲಿ 350 ಕೋಟಿಗೆ ಡಿಪಿಆರ್ ಆಗಿದ್ದು ಇದನ್ನು ಶೀಘ್ರದಲ್ಲಿ ಅನುಮೋದನೆಗೆ ತರಬೇಕು. ದಿನ್ನಳಿ ಗ್ರಾ.ಪಂಗೆ ಸೇರಿದ ಮೂಕಚ್ಚಿ ಡ್ಯಾಮ್, ಹೂಗ್ಯಂ ಗ್ರಾ.ಪಂಗೆ ಸೇರಿದ ಮಿಣ್ಯಂ ಹಳ್ಳ ಜಲಾಶಯ, ಮಾರ್ಟಳ್ಳಿ ಗ್ರಾ.ಪಂಗೆ ಸೇರಿದ ಹಾಲೇರಿ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಒತ್ತಾಯಿಸಿದರು.
ಗೋಪಿನಾಥಂ ಗ್ರಾ.ಪಂ. ಸೇರಿದ ಪುಂಗಆತೂರ್, ಮಾರಿಕೊಟೆ, ಜಂಬುದ್ ಪಟ್ಟಿ, ಪುದುಕಾಡು, ಅವುಕ ಪಟ್ಟಿ ಅಲಂಬಾಡಿ ಈ ಗ್ರಾಮಗಳಲ್ಲಿ 700 ಕ್ಕಿಂತ ಹೆಚ್ಚು ಕುಟುಂಬವಿದ್ದು 2000 ಕ್ಕಿಂತ ಹೆಚ್ಚು ಜನ ವಾಸಿಸುತ್ತಿದ್ದಾರೆ. ಇವರಿಗೆ ಸ್ವಾತಂತ್ರ್ಯ ಬಂದಾಗಿಂದ ಮೂಲ ಸೌಕರ್ಯ ಕೊರತೆ ಇದ್ದು, ಇದೀಗ ವಿದ್ಯುತ್ ಮತ್ತು ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ ಕೊಟ್ಟಿದ್ದರೂ ಅರಣ್ಯ ಇಲಾಖೆಯವರು ಇದನ್ನು ತಡೆ ಹಿಡಿದಿದ್ದಾರೆ. ತಾವು ಸಂಬಂದಪಟ್ಟ ಇಲಾಖೆ ಜೊತೆ ಚರ್ಚೆ ಮಾಡಿ ಶೀಘ್ರದಲ್ಲಿ ವಿದ್ಯುತ್ ಮತ್ತು ಕುಡಿಯುವ ನೀರನ್ನು ಕೊಡಿಸಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಶ್ರೀರೂಪ ಸಂಬಂಧಪಟ್ಟ ಇಲಾಖೆಯವರ ಜೊತೆಗೆ ಚೆರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವರದಿ: ಉಸ್ಮಾನ್ ಖಾನ್.




















