ಕಂಪ್ಲಿ: ಗ್ರಾಮೀಣ ಭಾಗದ ರೈತರ ಜಮೀನು ಹಕ್ಕನ್ನು ಭದ್ರಪಡಿಸಲು ಸರ್ಕಾರ ಪೌತಿ ಆಂದೋಲನ ಹಮ್ಮಿಕೊಂಡಿದ್ದು, ರೈತರು ಇದರ ಸದುಪಯೋಗ ಪಡೆಯಬೇಕು’ ಎಂದು ಕಂದಾಯ ನಿರೀಕ್ಷಕ ಜಗದೀಶ ಹೇಳಿದರು.
ತಾಲೂಕಿನ ದೇವಲಾಪುರ ಗ್ರಾಮದ ಗ್ರಾಪಂಯ ಕಛೇರಿಯಲ್ಲಿ ಗುರುವಾರ ಹಮ್ಮಿಕೊಂಡ ಪೌತಿ, ವಾರಸಾ ಖಾತಾ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿ, ‘ಸಾಲ ಸೌಲಭ್ಯ, ವಿಮೆ ಪರಿಹಾರ ಸೇರಿದಂತೆ ಸರ್ಕಾರದ ಪ್ರತಿಯೊಂದು ಸೌಲಭ್ಯ ಪಡೆಯಲು ಅವಶ್ಯಕವಾದ ಪೌತಿ ಖಾತೆಯನ್ನು ಸರ್ಕಾರ ಆಂದೋಲನದ ಮೂಲಕ ರೈತರಿಗೆ ನೀಡುತ್ತಿದ್ದು, ಮೃತ ರೈತರ ವಾರಸುದಾರರು ಕೂಡಲೇ ತಮ್ಮ ಜಮೀನುಗಳ ದಾಖಲಾತಿಗಳನ್ನು ವರ್ಗಾಯಿಸಿಕೊಳ್ಳಬೇಕು’ ಎಂದರು.
ಗ್ರಾಮ ಆಡಳಿತಾಧಿಕಾರಿ ಅಬ್ದುಲ್ ಮಾತನಾಡಿ, ‘ತಕರಾರು ಹಾಗೂ ಕಾನೂನು ತೊಡಕು ಇದ್ದ ಜಮೀನುಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ರೈತರು ತಮ್ಮ ಜಮೀನುಗಳ ಖಾತೆಗಳನ್ನು ಸರಿಪಡಿಸಿಕೊಳ್ಳಬೇಕು’. ಸರ್ಕಾರದ ಈ ಯೋಜನೆಯ ಮೂಲಕ ಜಮೀನುಗಳ ತೊಡಕನ್ನು ನಿವಾರಿಸಿಕೊಂಡು, ಸರಿಪಡಿಸಿಕೊಳ್ಳಲು ರೈತರು ಮುಂದಾಗಬೇಕು. ಇಲ್ಲಿನ ಅಭಿಯಾನದಲ್ಲಿ ಇ ಪೋತಿಗೆ ಸಂಬಂಧಿಸಿದಂತೆ 20 ಅರ್ಜಿಗಳು ಬಂದಿದ್ದಾರೆ. 6 ಅರ್ಹ ಪೋತಿ ಹಾಗೂ 6 ಪಿಂಚಣಿ ಅರ್ಜಿಗಳು ಬಂದಿವೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಈರಮ್ಮ ಪೂಜಾರಿ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ನಾಗರಾಜ, ಗ್ರಾಮ ಆಡಳಿತಾಧಿಕಾರಿ ಜಿಲಾನಸಾಬ್ ಸೇರಿದಂತೆ ಸದಸ್ಯರು, ರೈತರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















