ಸಾರ್ವಜನಿಕರ ಗಮನ ಸೆಳೆದ ಜಾನಪದ ಕಲಾತಂಡಗಳ ಪ್ರದರ್ಶನ.
ಕಂಪ್ಲಿ : ತಾಲ್ಲೂಕಿನ ರಾಮಸಾಗರ ಗ್ರಾಮದಲ್ಲಿ ಹಿಂದೂ ಸಮ್ಮೇಳನದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಏರ್ಪಡಿಸಿದ್ದ ಅದ್ದೂರಿ ಶೋಭಾಯಾತ್ರೆಯು ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು ಮಾತ್ರವಲ್ಲದೆ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ಗಮನ ಸಾರ್ವಜನಿಕರ ಗಮನ ಸೆಳೆಯಿತು.
ಗ್ರಾಮದ ಮಡಿ ದೇವಸ್ಥಾನದ ಹತ್ತಿರ ಅಲಂಕೃತ ವಾಹನದಲ್ಲಿ ಭಾರತಾಂಬೆಯ ಬೃಹತ್ ಭಾವಚಿತ್ರವನ್ನು ಪ್ರತಿಷ್ಠಾಪಿಸಿ ಪುಷ್ಪಾರ್ಪಣೆ ಮಾಡಿ ವಿಶೇಷ ಪೂಜೆಯನ್ನು ಸಲ್ಲಿಸಿ ಹಿಂದೂ ಸಮ್ಮೇಳನದ ಪದಾಧಿಕಾರಿಗಳು ಬೃಹತ್ ಶೋಭಾಯಾತ್ರೆಗೆ ಚಾಲನೆ ನೀಡಿದರು.
ಗ್ರಾಮದ ಪ್ರಮುಖ ಬೀದಿಯಲ್ಲಿ ವಿಜೃಂಭಣೆಯಿಂದ ಆರಂಭವಾದ ಶೋಭಾ ಯಾತ್ರೆಯಲ್ಲಿ ರೈತರು ತಮ್ಮ ಜೀವನ ಸಂಗಾತಿಗಳಾದ ಜೋಡಿ ಎತ್ತುಗಳನ್ನು ವಿವಿಧ ಹೂಗಳಿಂದ ಶೃಂಗರಿಸಿ ಬೃಹತ್ ಹೂವಿನ ಹಾರಗಳನ್ನು ಹಾಕಿ ಮೆರವಣಿಗೆಯುದ್ದಕ್ಕೂ ಎತ್ತುಗಳೊಂದಿಗೆ ಸಾಗಿದರು.
ಶೋಭಾಯಾತ್ರೆಗೆ ಕಳಸ,ಕನ್ನಡಿಗಳನ್ನು ಹಿಡಿದ ಮಹಿಳೆಯರು, ನಂದಿ ಕೋಲು, ತಾಷಾ ರಾಂಡೋಲ್, ಸಮಾಳಗಳು, ಡೊಳ್ಳು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ವಿಶೇಷ ಮೆರಗನ್ನು ನೀಡಿದ್ದವು. ಶೋಭಾಯಾತ್ರೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗ್ರಾಮದಶ್ರೀ ನಗರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಮಾವೇಶಗೊಂಡಿತು. ಅಲ್ಲಿ ಹಿಂದೂ ಸಮ್ಮೇಳನದ ಪ್ರಮುಖ ಅಂಗವಾದ ವೇದಿಕೆ ಕಾರ್ಯಕ್ರಮ ಜರುಗಿತು. ಬೃಹತ್ ಶೋಭಾ ಯಾತ್ರೆಯಲ್ಲಿ ಹಿಂದೂ ಸಮ್ಮೇಳನದ ಮಂಡಲದ ಪದಾಧಿಕಾರಿಗಳು, ಗ್ರಾಮದ ಯುವಕರು, ವಿವಿಧ ಸಮಾಜಗಳ ಮುಖಂಡರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















